ಎಚ್‌ಎಎಲ್ ಘಟಕಕ್ಕೆ ಭೂಮಿ: ರೈತರ ಪ್ರತಿಭಟನೆ
ತುಮಕೂರು, ಆ. ೩- ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲಿನಲ್ಲಿರುವ ಎಚ್‌ಎಎಲ್ ಘಟಕಕ್ಕೆ ಭೂಮಿಯನ್ನು ನೀಡುವುದಿಲ್ಲ ಎಂದು ಆ ಭಾಗದ ರೈತರು ಪ್ರತಿಭಟನೆ ನಡೆಸಿದರು.
ಎಚ್‌ಎಎಲ್ ಘಟಕಕ್ಕೆ ಈಗಾಗಲೇ ಸಾಕಷ್ಟು ಭೂಮಿಯನ್ನು ನೀಡಲಾಗಿದೆ. ಇದರ ನಡುವೆಯೂ ಕುಂದರನಹಳ್ಳಿ, ಸಾಗರನಹಳ್ಳಿ, ಬಿದರೆಹಳ್ಳ ಕಾವಲ್, ಸೋಪನಹಳ್ಳಿ ಎಲ್ಲಾಪುರ ಭಾಗಗಳಲ್ಲಿ ಭೂಮಿ ವಶಪಡಿಸಿಕೊಳ್ಳಲು ಅಧಿಕಾರಿಗಳು ಸಿದ್ದರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ತೋಟಗಾರಿಕಾ ಇಲಾಖೆ ಕೃಷಿ ಇಲಾಖೆಗಳ ಅಧಿಕಾರಿಗಳು ರೈತರು ಬೆಳೆದಿರುವ ತೆಂಗು, ಅಡಿಕೆ, ಬಾಳೆ ಸೇರಿದಂತೆ ವಿವಿಧ ರೀತಿಯ ಮರಗಳನ್ನು ಲೆಕ್ಕ ಹಾಕುತ್ತಿದ್ದಾರೆ ಎಂದು ಪ್ರತಿಭಟನಾನಿರತ ರೈತರು ಆರೋಪಿಸಿದರು.
ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿಯನ್ನು ನಾವು ಯಾವುದೇ ಕಾರಣಕ್ಕೂ ಕಳೆದುಕೊಳ್ಳಲು ಸಿದ್ಧರಿಲ್ಲ. ನಮ್ಮ ಜೀವವನ್ನು ಬೇಕಾದರೂ ಕೊಡುತ್ತೇವೆ. ನಮ್ಮ ಭೂಮಿಯನ್ನು ಕೊಡುವುದಿಲ್ಲ ಎಂದು ಆಕ್ರೋಶ ಹೊರ ಹಾಕಿದರು.ಎಚ್‌ಎಎಲ್ ನಿರ್ಮಾಣ ಸಂದರ್ಭದಲ್ಲಿ ಮತ್ತೆ ಭೂಮಿಯನ್ನು ರೈತರಿಂದ ಪಡೆಯುವುದಿಲ್ಲ ಎಂದು ಅಂದಿನ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಈಗ ಮತ್ತೆ ರೈತರ ಭೂಮಿ ಪಡೆಯುತ್ತಿದ್ದಾರೆ ಎಂಬ ಸುದ್ದಿ ಕೇಳಿ ಅಘಾತವಾಗಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಭೂಮಿಯನ್ನು ನೀಡುವುದಿಲ್ಲ ಎಂದು ರೈತರು ಹೇಳಿದರು.
ಕೈಗಾರಿಕೆ ನಿರ್ಮಾಣ ಮಾಡಲು ಭೂಮಿ ಬೇಕು ಎಂದಾದಲ್ಲಿ ಸರ್ಕಾರದ ಭೂಮಿಯನ್ನು ಅಥವಾ ಅರಣ್ಯ ಭಾಗವನ್ನು ಬಳಸಿಕೊಳ್ಳಲಿ, ಅದು ಬಿಟ್ಟು ಫಲವತ್ತಾಗಿರುವ ಭೂಮಿಯ ಮೇಲೆ ಕಣ್ಣು ಹಾಕಿರುವ ಸರ್ಕಾರ ರೈತರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಮುಂದಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಇದರ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತರಾದ ಉಮೇಶ್, ಹರೀಶ್, ರಾಮಣ್ಣ, ಶಂಕ್ರಪ್ಪ, ಯತೀಶ್, ಹೊನ್ನಪ್ಪ, ನಿಜನಂದಮೂರ್ತಿ, ರಾಜಣ್ಣ ಮತ್ತಿತರರು ಪಾಲ್ಗೊಂಡಿದ್ದರು.