ಎಂಬಿಎ ಹಾಗೂ ಎಂಸಿಎ ಪ್ರವೇಶ ಪರೀಕ್ಷೆ:ಸುಸೂತ್ರವಾಗಿ ಪರೀಕ್ಷೆ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಗೆಣ್ಣೂರ ಸೂಚನೆ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೩: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸುವ ಎಂ.ಬಿ.ಎ ಹಾಗೂ ಎಂ.ಸಿ.ಎ ಪ್ರವೇಶ ಪರೀಕ್ಷೆಗಳನ್ನು ಸುಸೂತ್ರವಾಗಿ ಹಾಗೂ ಸುಗಮವಾಗಿ ಜರುಗಿಸುವಂತೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸೂಚನೆ ನೀಡಿದರು.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಎಂಬಿಎ ಹಾಗೂ ಎಂಸಿಎ ಪ್ರವೇಶ ಪರೀಕ್ಷೆಯ ಪೂರ್ವಭಾವಿ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ನಗರದ ಗಾಂಧಿ ವೃತ್ತದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಆಗಸ್ಟ್ ೪ ರಂದು ಪರೀಕ್ಷೆ ಜರುಗಲಿದ್ದು, ಅಂದು ಬೆಳಿಗ್ಗೆ ೧೦.೩೦ ರಿಂದ ಮಧ್ಯಾಹ್ನ ೧೨ ಗಂಟೆಯವರೆಗೆ ನಡೆಯುವ ಎಂಸಿಎ ಪ್ರವೇಶಾತಿ ಪರೀಕ್ಷೆಗೆ ೩೮೭ ಹಾಗೂ ಮಧ್ಯಾಹ್ನ ೨.೩೦ ರಿಂದ ೪.೩೦ರವರೆಗೆ ನಡೆಯುವ ಎಂಬಿಎ ಪರೀಕ್ಷೆಗೆ ೬೩೭ ಅಭ್ಯರ್ಥಿಗಳು ನೋಂದಾಯಿಸಿಕೊAಡಿದ್ದಾರೆ. ಇಲಾಖೆಯ ಪರೀಕ್ಷಾ ಮಾರ್ಗಸೂಚಿಯಂತೆ ಪರೀಕ್ಷೆ ನಡೆಯುವ ದಿನದಂದು ಎಲ್ಲಾ ಕೊಠಡಿಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಪ್ರತಿ ಅಭ್ಯರ್ಥಿಯ ಗುರುತಿನ ಪತ್ರ ಪರಿಶೀಲಿಸಿ ಹಾಜರಾಗಿರುವ ಅಭ್ಯರ್ಥಿಯನ್ನು ತಾಳೆ ಮಾಡಿ ಪರೀಕ್ಷಾ ಕೊಠಡಿಗೆ ಪ್ರವೇಶ ಕಲ್ಪಿಸಬೇಕು. ಸ್ಮಾರ್ಟ್ ವಾಚ್, ಎಲೆಕ್ಟಾçನಿಕ್ ಉಪಕರಣ, ಮೊಬೈಲ್ ಬಳಕೆ ನಿಷೇಧಿಸಿದ್ದು, ಕೊಠಡಿ ಮೇಲ್ವಿಚಾರಕರು ಕಟ್ಟುನಿಟ್ಟಾಗಿ ಪರೀಕ್ಷಾ ಕಾರ್ಯ ನಿರ್ವಹಿಸಬೇಕು ಎಂದು ಅವರು ಸೂಚಿಸಿದರು.
ಒಂದು ಕೊಠಡಿಯಲ್ಲಿ ೨೪ ಅಭ್ಯರ್ಥಿಗಳು ಸೇರಿಂದತೆ ಓರ್ವ ಮೇಲ್ವಿಚಾರಕರನ್ನು ನೇಮಿಸಿಕೊಳ್ಳಬೇಕು. ಮೇಲ್ವಿಚಾರಕರಿಗೆ ಹಾಗೂ ಪರೀಕ್ಷೆಯಲ್ಲಿ ತೊಡಗಿರುವ ಸಿಬ್ಬಂದಿಗಳಿಗೆ ಮುಂಚಿತವಾಗಿ ಪರೀಕ್ಷಾ ಸಿದ್ಧತಾ ತರಬೇತಿಯನ್ನು ನೀಡಬೇಕು. ವಿದ್ಯಾರ್ಥಿಗಳು ನಿಗದಿಪಡಿಸಿದ ಆಸನದಲ್ಲಿರುವ ಬಗ್ಗೆ ಮೇಲ್ವಿಚಾರಕರು ಖಚಿತಪಡಿಸಿಕೊಳ್ಳಬೇಕು. ಒಂದು ಬಾರಿ ಅಭ್ಯರ್ಥಿಗಳಿಗೆ ಓಎಂಆರ್ ಉತ್ತರ ಪತ್ರಿಕೆ ವಿತರಿಸಿದ ನಂತರ ಪರೀಕ್ಷೆ ಸಮಯ ಮುಗಿಯುವವರೆಗೂ ಹಿಂಪಡೆಯಬಾರದು. ಪರೀಕ್ಷೆ ಮುಕ್ತಾಯದ ನಂತರ ರಹಸ್ಯ ಬಂಡಲ್‌ಗಳನ್ನು ಅಂಚೆ ಮೂಲಕ ಪರೀಕ್ಷಾ ಪ್ರಾಧಿಕಾರಕ್ಕೆ ತಲುಪಿಸಲು ತ್ರಿಸದಸ್ಯ ಸಮಿತಿ ಅಧಿಕಾರಿಗಳ ಸಮಿತಿ ರಚಿಸಲಾಗಿದ್ದು, ಪರೀಕ್ಷಾ ಕಾರ್ಯವನ್ನು ಅತ್ಯಂತ ಅಚ್ಚುಕಟ್ಟಾಗಿ ಯಾವುದೇ ಲೋಪಗಳಿಗೆ ಅವಕಾಶ ನೀಡದೆ, ಸುಗಮವಾಗಿ ಪರೀಕ್ಷೆ ನಡೆಸುವಂತೆ ಅವರು ಸೂಚನೆ ನೀಡಿದರು.
ಪರೀಕ್ಷಾ ಕೊಠಡಿಯಲ್ಲಿ ನೀರು, ಗಾಳಿ ಬೆಳಕಿನ ವ್ಯವಸ್ಥೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಸೂಚಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಕೆ. ಹೊಸಮನಿ, ಪ್ರಾಂಶುಪಾಲ ಬಸವರಾಜ ಗಂಗನಳ್ಳಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.