ದುಡಿಮೆ ಬೇಡ ಮಕ್ಕಳನ್ನು ಶಾಲೆಗೆ ಕಳುಹಿಸಿ
ಕೋಲಾರ,ಆ,೨- ಶಾಲೆಗೆಹೋಗಬೇಕಾದ ಮಕ್ಕಳನ್ನು ದುಡಿಮೆಗೆ ಕಳುಹಿಸಿ ಅವರ ಸುಂದರ ಬದುಕನ್ನು ನಾಶಪಡಿಸುವ ಹಕ್ಕು ಯಾರಿಗೂ ಇಲ್ಲ, ಶಿಕ್ಷಣ ನೀಡಿ ಅವರನ್ನು ದೇಶದ ಆಸ್ತಿಯಾಗಿಸಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸುನಿಲ್ ಎಸ್ ಹೊಸಮನಿ ಕರೆ ನೀಡಿದರು.
ತಾಲ್ಲೂಕಿನ ಬೆಗ್ಲಿ ಹೊಸಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಇವರ ಸಂಯುಕ್ತಾಶ್ರಯದಲ್ಲಿ ೨೦೨೪ನೇ ಸಾಲಿನ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಬಾಲಕಾರ್ಮಿಕ ನಿರ್ಮೂಲನ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ನಮ್ಮ ಸಂವಿಧಾನ ಶಿಕ್ಷಣದ ಹಕ್ಕನ್ನು ನೀಡಿದೆ, ಜತೆಗೆಬದುಕು ಹಕ್ಕು ಇದೆ, ಮಕ್ಕಳನ್ನು ಶಾಲೆಗೆ ಕಲಿಸದೇ ದುಡಿಮೆಗೆ ಕಳುಹಿಸಿ ಪೋಷಕರು ತಪ್ಪು ಮಾಡಬಾರದು, ಆ ಮಕ್ಕಳನ್ನು ದುಡಿಮೆಗೆ ಸೇರಿಸಿಕೊಳ್ಳುವುದು ಸಹಾ ಅಪರಾಧವಾಗಿದ್ದು, ಕಠಿಣ ಶಿಕ್ಷೆ ಇದೆ ಎಂದು ಎಚ್ಚರಿಸಿದರು.
ಬಾಲಕಾರ್ಮಿಕತೆ,ಜೀತ ಪದ್ದತಿ ಸಮಾಜದ ಶತ್ರುಗಳಾಗಿವೆ, ಇದರ ನಿರ್ಮೂಲನೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು, ನಿಮ್ಮ ಪರಿಮಿತಿಯಲ್ಲಿ ಎಲ್ಲಾದರೂ ಮಕ್ಕಳು ಶಾಲೆಗೆ ಬಾರದೆ ದುಡಿಯುತ್ತಿದ್ದರೆ ಕೂಡಲೇ ೧೦೯೮ಗೆ ದೂರು ನೀಡಿ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಮುನೇಗೌಡ ಮಾತನಾಡಿ, ಬಾಲಕಾರ್ಮಿಕತೆ ನಿಷೇಧ ಕಾನೂನು ಇದೆ, ವಿದ್ಯೆ ಕಲಿಯುವ ವೇಳೆಯಲ್ಲಿ ಅವರ ಬದುಕನ್ನು ಸರ್ವನಾಶ ಮಾಡುವ ಮನಸ್ಥಿತಿ ಒಳ್ಳೆಯದಲ್ಲ, ಸರ್ಕಾರಿ ಶಾಲೆಗಳಲ್ಲಿ ಇಂದು ಗುಣಮಟ್ಟದ ಶಿಕ್ಷಣದ ಜತೆಗೆ ಬಿಸಿಯೂಟ, ಕ್ಷೀರಭಾಗ್ಯ, ಉಚಿತ ಪಠ್ಯಪುಸ್ತಕ, ಸಮವಸ್ತ್ರ ಮತ್ತಿತರ ಸೌಲಭ್ಯಗಳಿವೆ ಇದರ ಸದುಪಯೋಗ ಪಡೆಯಬೇಕು ಎಂದು ಕೋರಿದರು.
ಶಾಲೆಯ ಮುಖ್ಯಶಿಕ್ಷಕಿ ಗಾಯತ್ರಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಉಚಿತ ಶಿಕ್ಷಣವಿದೆ, ಮಕ್ಕಳು ಕಲಿಯುವ ವಯಸ್ಸಿನಲ್ಲಿ ದುಡಿಮೆಗೆ ಹೋಗಬಾರದು, ಈ ದೇಶ, ಸಮಾಜವನ್ನು ಬದಲಿಸುವ ಶಕ್ತಿ ಶಿಕ್ಷಣಕ್ಕಿದೆ, ಅಂತಹ ಶಿಕ್ಷಣ ಪಡೆದು ಉನ್ನತ ವ್ಯಕ್ತಿಗಳಾಗಿ ಸಂಸ್ಕಾರ,ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡು ದುಶ್ಚಟಗಳಿಂದ ದೂರವಿರಿ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಆರ್.ವರಲಕ್ಷ್ಮಿ ಮಾತನಾಡಿ, ಕಾರ್ಮಿಕರಾಗಲು, ಉದ್ಯೋಗ ಮಾಡಲು ಸರ್ಕಾರ ೧೮ ವರ್ಷಗಳ ಕನಿಷ್ಟ ವಯಸ್ಸನ್ನು ನಿಗಧಿ ಮಾಡಿದೆ, ನೀವು ಚೆನ್ನಾಗಿ ಓದಿ ಸಾಧಕರಾಗಿ ನಂತರ ಉದ್ಯೋಗ ಮಾಡಬಹುದು, ಕಾರ್ಮಿಕ ಇಲಾಖೆಯಲ್ಲಿ ವಿವಿಧ ವೃತ್ತಿಗಳಲ್ಲಿ ಸೇವೆ ಸಲ್ಲಿಸುವವರಿಗೆ ಅನೇಕ ಸೌಲಭ್ಯಗಳಿವೆ, ಕಾರ್ಮಿಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಗೆ ವಿದ್ಯಾರ್ಥಿವೇತನ ಮತ್ತಿತರ ಸೌಲಭ್ಯ ಪಡೆಯಬಹುದು ಎಂದರು.
ಕಾರ್ಮಿಕ ನಿರೀಕ್ಷಕ ರಾಜೇಶ್ವರಿ, ಹಾಗೂ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಸಿಬ್ಬಂದಿಗಳು ಉಪಸ್ಥತರಿದ್ದು ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ನಿರ್ಮೂಲನೆಯ ಹಾಗೂ ಪ್ರತಿಯೊಬ್ಬ ಮಕ್ಕಳು ಕಡ್ಡಾಯ ಶಿಕ್ಷಣವನ್ನು ಪಡೆಯುವ ಬಗ್ಗೆ ತಿಳಿಸಿದರು.
ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ (ನಿಷೇಧ ಮತ್ತು ನಿಯಂತ್ರಣ)ಕಾಯ್ದೆ೧೯೮೬ ಮತ್ತು ೨೦೧೬ ರ ತಿದ್ದುಪಡಿ ಕಾಯ್ದೆ ಕುರಿತು ತಿಳಿಸಿದರು. ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸಹಾಯವಾಣಿ-೧೫೫೨೦೦, ಕಾರ್ಮಿಕ ಸಹಾಯವಾಣಿ-೧೫೫೨೧೪, ಮಕ್ಕಳ ಸಹಾಯವಾಣಿ-೧೦೯೮, ಮಹಿಳಾ ಸಹಾಯವಾಣಿ-೧೮೧, ಪೋಲೀಸ್ ಸಹಾಯವಾಣಿ-೧೧೨ ಇವುಗಳ ಬಗ್ಗೆ ಮನವರಿಕೆ ಮಾಡಿದರು.