371 ಜೆ ಕಲ್ಯಾಣ ಕರ್ನಾಟಕ ಭಾಗದ ಜೀವನಾಡಿ : ಸಾಯಿಬಣ್ಣ ತಳವಾರ್
ಬೀದರ:ಆ.1:371ಜೆ ಸಮರ್ಪಕ ಜಾರಿಗಾಗಿ ಕಾಲೇಜುಗಳಲ್ಲಿ ವಿಚಾರ ಸಂಕಿರಣ ಆಯೋಜನೆ ಮಾಡಿ, ಇದರ ಸದುಪಯೋಗದ ಕುರಿತು ಜನಮನಕ್ಕೆ ತಲುಪಿಸಿ ಜಾಗೃತಿ ಮೂಡಿಸುತ್ತಿರುವ ಉಪನ್ಯಾಸಕರ ಕಾರ್ಯ ಶ್ಲಾಘನೀಯ ಎಂದು ಬೀದರ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಕೆ.ಬೆಲ್ದಾಳೆ ತಿಳಿಸಿದರು.
ಕಾಲೇಜು ಶಿಕ್ಷಣ ಇಲಾಖೆ, ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಘೋಡಂಪಳ್ಳಿಯ ಅರ್ಥಶಾಸ್ತç ಮತ್ತು ಐಕ್ಯೂಎಸಿ ವಿಭಾಗದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ ‘ಕಲ್ಯಾಣ ಕರ್ನಾಟಕದ ಮೇಲೆ 371 ಜೆ ಪ್ರಭಾವ’ ಕುರಿತ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಅಭಿವೃದ್ಧಿಗೆ ಸುಮಾರು ಎರಡು ಕೋಟಿ ಅನುದಾನ ನೀಡಲಾಗಿದೆ. ಇನ್ನೂ ಸಮಸ್ಯೆಗಳಿದ್ದರೆ ಪರಿಹಾರ ಒದಗಿಸಲಾಗುವುದು. 371ಜೆ ಇದು ಸರ್ಕಾರ ನಮಗೆ ನೀಡಿದ ಸಾಂವಿಧಾನಿಕ ಹಕ್ಕು. ಇದನ್ನು ಪ್ರತಿಯೊಬ್ಬರೂ ಸದುಪಯೋಗ ಮಾಡಿಕೊಳ್ಳಬೇಕು. ಎಲ್ಲರಿಗೂ ಈ ಕುರಿತು ತಿಳಿಸಿ ಹೇಳಬೇಕು. ಎಲ್ಲರೂ ಪ್ರಮಾಣ ಪತ್ರ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಖ್ಯಾತ ಶಿಕ್ಷಣ ತಜ್ಞರು ಹಾಗೂ ವಿಧಾನ ಪರಿಷತ್ ಸದಸ್ಯ ಪ್ರೊ. ಸಾಯಿಬಣ್ಣ ತಳವಾರ್ ಮಾತನಾಡಿ 371ಜೆ ಎಂಬುದು ಕ.ಕ.ಭಾಗದ ಜೀವನಾಡಿ. ಇದರ ಸದುಪಯೋಗ ಸಾಕಷ್ಟು ಪಡೆದುಕೊಳ್ಳಬಹುದಾಗಿತ್ತು. ಆದರೆ ಹೆಚ್ಚು ಪಡೆಯದಿರುವುದು ವಿಷಾದನೀಯ. ಕ.ಕ.ಭಾಗದ ಎಲ್ಲಾ ಜಿಲ್ಲೆಗಳಲ್ಲಿ 1 ಲಕ್ಷದ 90 ಸಾವಿರ ಉದ್ಯೋಗಗಳಿವೆ. ಆದರೆ ಉದ್ಯೋಗ ಭರ್ತಿ ಮಾಡಿದ್ದು ಕೇವಲ 79 ಸಾವಿರ ಉದ್ಯೋಗ ಮಾತ್ರ. ಉಳಿದ 1 ಲಕ್ಷದ 11 ಸಾವಿರ ಉದ್ಯೋಗ ಭರ್ತಿ ಯಾವಾಗ? ಹೀಗಾದರೆ ಕ.ಕ.ಭಾಗ ಕಲ್ಯಾಣ ಆಗುವುದು ಯಾವಾಗ? ಎಂದು ಪ್ರಶ್ನಿಸಿದರು. ಬೀದರ ವಿಶ್ವವಿದ್ಯಾಲಯದಲ್ಲಿ ಒಟ್ಟು 260 ಉದ್ಯೊಗ ಭರ್ತಿ ಮಾಡಿಕೊಳ್ಳಬೇಕಾಗಿತ್ತು. ಆದರೆ ಕೇವಲ ಮೂವರು ಮಾತ್ರ ಸರ್ಕಾರಿ ಹುದ್ದೆಯಲ್ಲಿದ್ದು, 30 ರಿಂದ 35 ಸಿಬ್ಬಂದಿಗಳು ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾದಾಗ ವಿ.ವಿ.ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿ ಅಭಿವೃದ್ಧಿಯಾಗುವುದು ಯಾವಾಗ? ಎಂದರು. ಕ.ಕ.ಭಾಗದಲ್ಲಿ 6700 ಶಾಲೆಗಳು ಶಿಥಿಲಗೊಂಡಿವೆ. 3 ಸಾವಿರ ಶೂನ್ಯ ಶಿಕ್ಷಕರಿರುವ ಶಾಲೆಗಳಿವೆ. 19 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ಭರ್ತಿ ಆಗಬೇಕಾಗಿದೆ. ಒಟ್ಟಿನಲ್ಲಿ 12ನೇ ಶತಮಾನದ ಕಲ್ಯಾಣ ಕ್ರಾಂತಿ ರೀತಿಯಲ್ಲಿ ಹೋರಾಟ ಮಾಡಿದರೆ ಮಾತ್ರ ನಮಗೆ 371ಜೆ ಯಿಂದ ನ್ಯಾಯ ಸಿಗುತ್ತದೆ ಎಂದರು.
ಬೀದರ ವಿ.ವಿ.ಯ ಕುಲಪತಿ ಪ್ರೊ.ಬಿ.ಎಸ್.ಬಿರಾದಾರ ಮಾತನಾಡಿ 371ಜೆ ಸರ್ಕಾರ ನಮಗೆ ನೀಡಿರುವ ಹಕ್ಕು. ಇದನ್ನು ಬಹಳಷ್ಟು ಜನರು ಸದುಪಯೋಗ ಮಾಡಿಕೊಳ್ಳುತ್ತಿಲ್ಲ. ಉದ್ಯೋಗಕ್ಕೆ ಅರ್ಜಿ ಹಾಕಿದಾಗ ಮಾತ್ರ 371ಜೆ ಪ್ರಮಾಣ ಪತ್ರದ ನೆನಪು ಬರುತ್ತದೆ. ಇಲ್ಲದಿದ್ದರೆ ಬಹಳಷ್ಟು ಜನರು 371ಜೆ ಪ್ರಮಾಣ ಪತ್ರ ಪಡೆಯುತ್ತಿಲ್ಲ. ಶಿಕ್ಷಣ ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರ ನಮಗೆ ನೀಡಿದ ಹಕ್ಕನ್ನು ಉಪಯೋಗ ಮಾಡಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ಈ ವಿಚಾರ ಸಂಕಿರಣದ ಮೂಲಕ ಇದರ ಮಹತ್ವ ಎಲ್ಲರಿಗೂ ತಲುಪಲಿ. ನಮ್ಮ ಬೀದರ ವಿವಿಯಲ್ಲಿ ಕೌಶಲ್ಯ ಆಧಾರಿತ ಕೋರ್ಸ್ಗಳನ್ನು ತಂದಾಗ ರಾಜ್ಯದ ಜನತೆ ನಮ್ಮ ವಿವಿ ಕಡೆ ಮುಖ ಮಾಡುತ್ತಾರೆ. ಪಕ್ಷಾತೀತವಾಗಿ ವಿವಿ.ಯನ್ನು ಅಭಿವೃದ್ಧಿಪಡಿಸೋಣ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರು ಹಾಗೂ ಬೀದರ.ವಿ.ವಿ.ಯ ಡೀನ್ ಪ್ರೊ.ದೇವಿದಾಸ ತುಮಕುಂಟೆ ಮಾತನಾಡಿ ಪ್ರಾದೇಶಿಕ ಅಸಮತೋಲನ ಹೋಗಲಾಡಿಸಿ ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಕ್ಷೇತ್ರದಲ್ಲಿ ಕ.ಕ.ಭಾಗವನ್ನು ಅಭಿವೃದ್ಧಿಪಡಿಸಲು 371ಜೆ ಹಕ್ಕು ಸರ್ಕಾರ ನಮಗೆ ನೀಡಿದೆ. ಹೀಗಾಗಿ ವೈದ್ಯಕೀಯ, ಕೃಷಿ, ಪಶು ವೈದ್ಯಕೀಯ, ತಾಂತ್ರಿಕ, ಇಂಜಿನಿಯರಿAಗ್ ಸೇರಿದಂತೆ ವಿವಿಧ ರೀತಿಯ ಕೋರ್ಸ್ಗಳ ಮೂಲಕÀ ಉನ್ನತ ಶಿಕ್ಷಣ ಪಡೆದು ಔದ್ಯೋಗಿಕವಾಗಿ ಸದುಪಯೋಗ ಪಡೆದುಕೊಳ್ಳುವ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿದೆ. ತನ್ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ ಎಂದರು.
ವೇದಿಕೆ ಮೇಲೆ ಬೀದರ ವಿವಿಯ ರೆಜಿಸ್ಟಾçರ್ ಪರಮೇಶ್ವರ ನಾಯಕ್, ಮೌಲಾನಾ ಆಜಾದ್ ರಾಷ್ಟಿçÃಯ ಉರ್ದು ವಿ.ವಿ. ಹೈದರಾಬಾದನ ಡಾ. ನವೀನಕುಮಾರ ಎನ್., ಗುಲಬರ್ಗಾ ವಿ.ವಿ.ದ ಅರ್ಥಶಾಸ್ತç ವಿಭಾಗದ ಮುಖ್ಯಸ್ಥ ಪ್ರೊ.ದಶರಥ ನಾಯಕ್, ಕರ್ನಾಟಕ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಜಗನ್ನಾಥ ಹೆಬ್ಬಾಳೆ, ಪ್ರೊ. ಜೈಕುಮಾರ ಶಿಂಧೆ, ಡಾ.ಉಮಾಕಾಂತ ಪಾಟೀಲ, ಮಲ್ಲಿಕಾರ್ಜುನ ಕಾಂಬಳೆ, ಪ್ರೊ.ಅಶೋಕ ಪಾಟೀಲ, ಪ್ರೊ. ಗುರುಬಸಪ್ಪ, ಪ್ರೊ.ಜೈಶ್ರೀ ಪ್ರಭಾ, ಡಾ. ಸಂತೋಷಕುಮಾರ ಬಿ., ಶ್ರೀಮತಿ ಅಂಜಲಿ, ವೇದಪ್ರಕಾಶ, ಎಸ್.ರುಮ್ಮಾ ಸೇರಿದಂತೆ ಅನೇಕರು ಹಾಜರಿದ್ದರು.