ಬೀದಿ ನಾಯಿ ಹಾವಳಿ ನಿಯಂತ್ರಿಸಲು ಹಿರಿಯ ನಾಗರೀಕರ ಒಕ್ಕೂಟ ಒತ್ತಾಯ
ಕೋಲಾರ,ಜು.೩೧- ಕೋಲಾರ ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ನಗರಪಾಲಿಕೆ ಸೂಕ್ತ ಕ್ರಮ ಕೈಗೊಂಡು ನಾಗರೀಕರಿಗೆ, ಮಹಿಳೆಯರಿಗೆ, ಮಕ್ಕಳಿಗೆ ನಾಯಿಗಳಿಂದ ಆಗುತ್ತಿರುವ ಉಪಟಳಕ್ಕೆ ಇತಿಶ್ರೀ ಹಾಡಬೇಕು ಎಂದು ಹಿರಿಯ ನಾಗರೀಕರ ಒಕ್ಕೂಟದ ಸಂಚಾಲಕ ವಿ.ಮುನಿವೆಂಕಟೇಶ್ ಒತ್ತಾಯಿಸಿದ್ದಾರೆ.
ನಗರದ ವಿವಿಧ ಬಡಾವಣೆ ಹಾಗೂ ಹೊರವಲಯಗಳಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ, ಶಾಲಾ ಮಕ್ಕಳು, ವಯೋವೃದ್ಧರು ಹಾಗೂ ವಾಯು ವಿಹಾರಕ್ಕೆ ತೆರಳುವ ಜನರ ಮೇಲೆ, ಆಟವಾಡುವ ಮಕ್ಕಳ ಮೇಲೆ ನಾಯಿಗಳ ಗುಂಪು ದಾಳಿ ಮಾಡುತ್ತಿವೆ. ಇದುವರೆಗೂ ಹತ್ತಾರು ಜನರು ಬೀದಿನಾಯಿಗಳ ಕಡಿತಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋಲಾರ ನಗರದ ೩೫ (ಮೂವತ್ತೈದು) ವಾರ್ಡ್‌ಗಳಲ್ಲಿಯೂ ಬೀದಿನಾಯಿಗಳ ಹಾವಳಿ ಇದೆ. ಅದರಲ್ಲಿಯೂ ನಗರದ ಹೊರವಲಯ ಎರಡು ಬದಿಯ ರಸ್ತೆಗಳಲ್ಲಿ ಕೋಳಿ, ಮಾಂಸದ ಅಂಗಡಿಗಳ ತ್ಯಾಜ್ಯಗಳನ್ನು ಜನರು ಬಿಸಾಡುವುದರಿಂದ ಅಲ್ಲಿಗೆ ಆಹಾರ ಹುಡುಕಿಕೊಂಡು ಬರುವ ಬೀದಿ ನಾಯಿಗಳು ಹಗಲು ರಾತ್ರಿ ಎನ್ನದೇ ರಸ್ತೆಯಲ್ಲಿ ಓಡಾಡುವ ಜನರೆಲ್ಲರು ದ್ವಿಚಕ್ರ ವಾಹನ, ಸೈಕಲ್ ಮೇಲೆ ಸಂಚರಿಸುವ ಜನರ ಮೇಲೆ ದಾಳಿ ಮಾಡಿ ಕಚ್ಚಿ ಗಾಯಗೊಳ್ಳುಸುತ್ತಿವೆ.
ಜಿಲ್ಲಾಡಳಿತವು ಬೀದಿ ನಾಯಿಗಳಿಗೆ ಹಾವಳಿಗೆ ಕಡಿವಾಣ ಹಾಕುವ ಸಲುವಾಗಿ ನಗರಸಭೆಯ ಪೌರಾಯುಕ್ತ ಮತ್ತು ಹಿರಿಯ ಆರೋಗ್ಯಾಧಿಕಾರಿಯವರುಗಳಿಗೆ ಡಾವೀನ್ ಮೆಥೆಡ್ ಆಡಿಯಲ್ಲಿ ಕ್ರಮ ಜರುಗಿಸಲು ಸೂಕ್ತ ಆದೇಶ ನೀಡಬೇಕು ಎಂದು ಸಾರ್ವಜನಿಕರ ಪರವಾಗಿ ವಿ.ಮುನಿವೆಂಕಟೇಶ್ ಆಗ್ರಹ ಪಡೆಸಿದ್ದಾರೆ.