ಮುಳುಗಡೆಯಾದ ಯಾದವಾಡ ಸೇತುವೆ ವೀಕ್ಷಣೆ
ಬಾಗಲಕೋಟೆ, ಜು. ೩೧: ಕೃಷ್ಣೆ ಮತ್ತು ಘಟಪ್ರಭಾ ನದಿಯಿಂದ ಉಂಟಾಗುವ ಪ್ರವಾಹ ಪೀಡಿತ ಗ್ರಾಮಗಳಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲು ಆದ್ಯತೆ ಮೇರೆಗೆ ಕ್ರಮವಹಿಸಲಾಗುವುದೆಂದು ಕಂದಾಯ ಸಚಿವರಾದ ಕೃಷ್ಣಾ ಬೈರೇಗೌಡ ಅಭಯ ನೀಡಿದರು.
ಮುಳುಗಡೆ ಹೊಂದಿರುವ ಮುಧೋಳ ಯಾದವಾಡ ಸೇತುವೆ ಸ್ಥಳಕ್ಕೆ ಭೇಟಿ ನೀಡಿ ನದಿ ಪ್ರಮಾಣ ವೀಕ್ಷಿಸಿ ಮಾಧ್ಯಮದವರಿಗೆ ಈ ವಿಷಯ ತಿಳಿಸಿದ ಅವರು ಜಿಲ್ಲೆಯಲ್ಲಿ ತುಂಬಾ ಸಮಸ್ಯಾತ್ಮಕ ಗ್ರಾಮಗಳನ್ನು ಆದ್ಯತೆ ಮೇಲೆ ತೆಗೆದುಕೊಂಡು ಶಾಶ್ವತ ಪುನರ್ವಸತಿ ಕಲ್ಪಿಸುವ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರೊಂದಿಗೆ ಸುದೀರ್ಘವಾರಿ ಚರ್ಚೆ ನಡೆಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಮೂರು ಗ್ರಾಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.
ಎರಡು ದಿನಗಳಿಂದ ಮಳೆ ಕಡಿಮೆ ಆಗಿದ್ದು, ನೀರಿನ ಹರಿವಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. ಕಳೆದ ಹಿಂದಿನ ವರ್ಷಕ್ಕೆ ಹೋಲಿಸಿದಾಗ ಈ ವರ್ಷ ಹಾನಿ ಪ್ರಮಾಣ ಕಡಿಮೆ ಇದೆ. ಮುಂಗಾರು ಹಂಗಾಮಿನ ಮಳೆಯಿಂದಾಗಿ ರಾಜ್ಯದಲ್ಲಿ ೪೮ ಜನ ಸಾವಿಗೀಡಾಗಿದ್ದಾರೆ. ಅದರಲ್ಲಿ ೮ ಜನ ಸಿಡಿಲು ಬಡಿದು, ಮರಬಿದ್ದು ೬ ಜನ, ಮನೆ ಕುಸಿದು ಬಿದ್ದು ೧೬ ಜನ, ೧೨ ಜನ ದುಸ್ಸಾಹಸಕ್ಕೆ ನೀರಿಗೆ ಇಳಿದು ಸಾವನ್ನೊಪ್ಪಿರುತ್ತಾರೆ. ಕಳೆದ ೨೦೧೯ರಲ್ಲಿ ೨೨೨, ೨೦೨೨ರಲ್ಲಿ ೨೯೯ ಜನ ಸಾವಿಗೀಡಾಗಿದ್ದಾರೆ. ಇದನ್ನು ನೋಡಿದರೆ ಸಾವಿನ ಸಂಖ್ಯೆಯಲ್ಲಿ ಈ ವರ್ಷ ಕಡಿಮೆಯಾಗಿದೆ ಎಂದು ತಿಳಿಸಿದರು.
ಬೆಳೆ ಹಾನಿಯಲ್ಲಿ ರಾಜ್ಯದ ಪರಿಸ್ಥಿತಿ ನೋಡಿದಾಗ ೨೦೧೯ರಲ್ಲಿ ೯.೭೦ ಲಕ್ಷ ಹೆಕ್ಟೆರ್ ಹಾನಿಯಾದರೆ, ೨೦೨೨ರಲ್ಲಿ ೧೨.೪೦ ಲಕ್ಷ ಹೆಕ್ಟೆರ್ ಆಗಿರುತ್ತದೆ. ಈ ವರ್ಷ ೪೪ ಸಾವಿರ ಹೆಕ್ಟೆರ್ ಪ್ರದೇಶ ಮಾತ್ರ ಹಾನಿಯಾಗಿದೆ. ಇದಕ್ಕೆ ಕಾರಣ ಸರಕಾರ ಪ್ರವಾಹ ಹಿನ್ನಲೆಯಲ್ಲಿ ಮುನ್ನಚ್ಚರಿಕೆ ಕ್ರಮಕೈಗೊಂಡಿರುವುದೇ ಇದಕ್ಕೆ ಕಾರಣವೆಂದರು. ಸರಕಾರ ಜನರ ಜೊತೆ ನಿಂತು ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿರುವುದಾಗಿ ಸಚಿವ ಬೈರೇಗೌಡ ತಿಳಿಸಿದರು. ಮುಧೋಳದಲ್ಲಿ ಸ್ಥಾಪಿಸಲಾದ ಕಾಳಿಜಿ ಕೇಂದ್ರಕ್ಕೆ ಭೇಟಿ ನೀಡಿ ಬಾದಿತ ಜನರ ಸಮಸ್ಯೆಗೆ ಸ್ಪಂದಿಸುವ ಕಾರ್ಯ ಮಾಡಿದರು. ಮಳಲಿ ಗ್ರಾಮದಲ್ಲಿ ಘಟಪ್ರಭಾ ನದಿಯ ನೀರು ಮನೆಗಳಿಗೆ ನುಗ್ಗಿದ್ದು, ಅಲ್ಲಿಯ ಸ್ಥಿತಿಗತಿಯ ಬಗ್ಗೆ ಪರಿಶೀಲಿಸಿದರು.
ಸಚಿವರ ಭೇಟಿ ಸಮಯದಲ್ಲಿ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಶೀಲ್ದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.