ಶೀಘ್ರದಲ್ಲೆ ದಿನಗೂಲಿ ನೀರುಗಂಟಿಗಳ ವೇತನ ಬಿಡುಗಡೆ: ಸಚಿವ ಎಸ್.ಎಸ್ ಮಲ್ಲಿಕಾರ್ಜುನ*
ಸಂಜೆವಾಣಿ ವಾರ್ತೆ
ದಾವಣಗೆರೆ: ಬಾಕಿ ಇರುವ ದಿನಗೂಲಿ ನೀರುಗಂಟಿ ಸಿಬ್ಬಂದಿಗಳ ವೇತನ ಬಿಡುಗಡೆಗೆ ಸರ್ಕಾರಕ್ಕೆ ತಿಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರು ತಿಳಿಸಿದರು. ದಿನಗೂಲಿ ನೀರುಗಂಟಿ ಸಿಬ್ಬಂದಿಗಳಿಗೆ ಕಳೆದ ಐದಾರು ತಿಂಗಳುಗಳಿಂದ ವೇತನ ನೀಡಿಲ್ಲ. ಇದರಿಂದಾಗಿ ಸುಮಾರು 800 ರಕ್ಕು ಅಧಿಕ ದಿನಗೂಲಿ ನೀರುಗಂಟಿ ಸಿಬ್ಬಂದಿಗಳು ಜೀವನ ನಡೆಸುವುದೇ ಕಷ್ಟವಾಗಿದೆ. ಹಲವು ಭಾರಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ ಎಂದು ದಿನಗೂಲಿ ನೀರುಗಂಟಿ ಸಿಬ್ಬಂದಿಗಳು ಸಚಿವರಾಗಿರುವ ಎಸ್.ಎಸ್ ಮಲ್ಲಿಕಾರ್ಜುನ ಅವರ ಮುಂದೆ ನಿವಾಸದ ಆವರಣದಲ್ಲಿ ಅಳಲು ತೋಡಿಕೊಂಡರು. ಈ ವೇಳೆ ಸಚಿವರು ಸಮಸ್ಯೆ ಹೇಳಿಕೊಂಡು ಬಂದ ದಿನಗೂಲಿ ನೀರುಗಂಟಿ ಸಿಬ್ಬಂದಿಗಳಿಗೆ ಅಭಯ ನೀಡಿದರು. ಈಗಾಗಲೇ ಈ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ದಿನಗೂಲಿ ನೀರುಗಂಟಿ ಸಿಬ್ಬಂದಿಗಳಿಗೆ ವೇತನ ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ತಿಳಿಸಲಾಗಿದೆ. ಜಲಸಂಪನ್ಮೂಲ ಸಚಿವರಿಗೂ ಮಾಹಿತಿ ನೀಡಲಾಗಿದೆ. ಶೀಘ್ರದಲ್ಲೆ ವೇತನ ಬಿಡುಗಡೆಯಾಗಲಿದೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ದಿನಗೂಲಿ  ನೀರುಗಂಟಿ ಸಿಬ್ಬಂದಿಗಳು  ಇದ್ದರು.