ಯೋಧರ ಬಗ್ಗೆ ಗೌರವ ಇರಲಿ
ಬಾಗಲಕೋಟ,ಜು೨೮: ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಹೆಮ್ಮೆಯ ಸೈನಿಕರ ತ್ಯಾಗ-ಬಲಿದಾನವನ್ನು ವಿದ್ಯಾರ್ಥಿಗಳು ಕೃತಜ್ಞತೆಯಿಂದ ಸ್ಮರಿಸಬೇಕು ಎಂದು ಪ್ರಾಚಾರ್ಯ ಶ್ರೀನಿವಾಸ ನರಗುಂದ ಹೇಳಿದರು.
ಇಲ್ಲಿನ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್.ನರಸಾಪೂರ ಕಲಾ ಮತ್ತು ಎಂ.ಬಿ.ಶಿರೂರ ವಾಣಿಜ್ಯ ಮಹಾವಿದ್ಯಾಲಯದ ಎನ್‌ಸಿಸಿ ಘಟಕ ಆಯೋಜಿಸಿದ್ದ `ಕಾರ್ಗಿಲ್ ವಿಜಯ ದಿವಸ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಕೂಲ ವಾತಾವರಣ ಹಾಗೂ ಹಲವು ಸವಾಲುಗಳ ಮಧ್ಯೆ ಭಾರತೀಯ ವೀರ ಯೋಧರು ಕೆಚ್ಚೆದೆಯಿಂದ ಹೋರಾಡಿ ಶತ್ರು ಸೈನ್ಯವನ್ನು ಬಗ್ಗು ಬಡಿದು ದೇಶಕ್ಕೆ ಜಯ ತಂದುಕೊಟ್ಟದ್ದನ್ನು ನಾವು ಮರೆಯಬಾರದು. ಜನತೆ ನೆಮ್ಮದಿಯಿಂದ ಬದುಕುತ್ತಿದ್ದಾರೆ ಎಂದರೆ ಅದಕ್ಕೆ ಈ ವೀರ ಯೋಧರೇ ಕಾರಣ ಎಂದರು. ವಿದ್ಯಾರ್ಥಿಗಳು ಯೋಧರ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು. ಅವರ ಹೋರಾಟದಿಂದ ಸ್ಪೂರ್ತಿ ಪಡೆಯಬೇಕು. ದೇಶದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಂಡು ದೇಶ ರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಮೊಂಬತ್ತಿಯನ್ನು ಬೆಳಗಿಸಿ ಕಾರ್ಗಿಲ್ ಹುತಾತ್ಮರಿಗೆ ಗೌರವ ನಮನ ಸಲ್ಲಿಸಲಾಯಿತು. ನಂತರ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಜಾಥಾದಲ್ಲಿ ಎನ್‌ಸಿಸಿ ಕೆಡೆಟ್ಸ ವಿದ್ಯಾರ್ಥಿ ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಪಾಲ್ಗೊಂಡರು. ಎನ್‌ಸಿಸಿ ಅಧಿಕಾರಿ ಲೆಪ್ಟಿನೆಂಟ ಮಂಜುನಾಥ ಕೋರವಾರ, ಜೂನಿಯರ ಅಂಡರ್ ಆಫೀಸರ್ ಸಂತೋಷ ಅಸೂಡಿ ಮತ್ತು ಐ.ಕ್ಯೂ.ಎ.ಸಿ ಸಂಯೋಜಕರು ಎಚ್.ಎಸ್.ಗಿಡಗಂಟಿ ಮತ್ತಿತರರು ಇದ್ದರು.