ಆಲಮಟ್ಟಿ ಜಲಾಶಯಕ್ಕೆ ಭೇಟಿ ನೀಡಿದ ಡಿಸಿ, ಸಿಇಓ
ಬಾಗಲಕೋಟೆ,ಜು೨೮ : ಆಲಮಟ್ಟಿ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಲಾಶಯಕ್ಕೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಭೇಟಿ ನೀಡಿ ಜಂಟಿಯಾಗಿ ವೀಕ್ಷಣೆ ಮಾಡಿದರು.
ಆಲಮಟ್ಟಿ ಜಲಾಶಯದಲ್ಲಿರುವ ನೀರಿನ ಸಂಗ್ರಹ ಹಾಗೂ ಬಿಡುಗಡೆ ಮಾಡುತ್ತಿರುವ ನೀರಿನ ಪ್ರಮಾಣವನ್ನು ಸ್ಥಿತಿಯನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ಶುಕ್ರವಾರ ಬೆಳಿಗ್ಗೆ ೮ ಗಂಟೆ ಸಮಯದಲ್ಲಿ ಪ್ರಸ್ತುತ ಜಲಾಶಯದ ಸಾಮರ್ಥ್ಯ ೮೩.೪೮೬ ಟಿ.ಎಂಸಿ ಇದ್ದು, ಲೈವ್ ಸಾಮರ್ಥ ೬೫.೮೬೬ ಟಿ.ಎಂಸಿ ಇದೆ. ಒಳ ಹರಿವು ೨.೦೪ ಕ್ಯೂಸೆಕ್ಸ್ ಇದ್ದು, ಹೊರ ಹರಿವು ೨.೬೬ ಲಕ್ಷ ಕ್ಯೂಸೆಕ್ಸ್ ಇರುತ್ತದೆ. ಒಳ ಹರಿವಿನ ಪ್ರಮಾಣ ಹೆಚ್ಚಾಗುತ್ತಲಿದೆ. ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿದ್ದು, ಕೆರೆ ತುಂಬಿಸುವ ಕಾರ್ಯವಾಗಬೇಕಿದೆ ಎಂದು ಕೆಬಿಜೆಎನ್‌ಎಲ್ ಮುಖ್ಯ ಅಧೀಕ್ಷಕ ಎಚ್.ಎಸ್.ಶ್ರೀನಿವಾಸ ತಿಳಿಸಿದರು.
ಭೇಟಿ ಸಮಯದಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಬಾಗಲಕೋಟೆ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಶೀಲ್ದಾರ ಅಮರೇಶ ಪಮ್ಮಾರ, ಕೆ.ಬಿ.ಜೆ.ಎನ್.ಎಲ್ ಅಧೀಕ್ಷಕ ಅಭಿಯಂತರ ವೀರನಗೌಡ ಹಿರೇಗೌಡರ ಸೇರಿದಂತೆ ಕೆ.ಬಿ.ಜೆ.ಎನ್.ಎಲ್‌ನ ಸಹಾಯಕ ಅಭಿಯಂತರರು ಇದ್ದರು.