ವಿದ್ಯೆ ಜೊತೆ ವಿನಯ ಮೈಗೂಡಿಸಿಕೊಳ್ಳಿ: ಡಾ. ಗಣಪತಿ ಸಿನ್ನೂರ್
ಕಲಬುರಗಿ:ಜು.27: ವಿದ್ಯಾರ್ಥಿಗಳು ವಿದ್ಯೆಯ ಜೊತೆ ವಿನಯ ಮೈಗೂಡಿಸಿಕೊಳ್ಳಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯ ಪ್ರಾಧ್ಯಾಪಕ ಡಾ. ಗಣಪತಿ ಸಿನ್ನೂರ್ ಅವರು ಹೇಳಿದರು.
ಗುರುಪಾದೇಶ್ವರ್ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ (ಸ್ಪಂದನ) ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಬೇಕು. ತಾವು ಕಂಡ ಕನಸು ನನಸಾಗಿಸಬೇಕಾದರೆ ಕಠಿಣ ಪರಿಶ್ರಮ ಅಗತ್ಯ. ನಮಗೆ ಗೊತ್ತಿಲ್ಲ ಎಂಬ ಉತ್ತರ ವಿದ್ಯಾರ್ಥಿಗಳಿಂದ ಬರಬಾರದು. ಯಾವುದನ್ನು ನಾವು ನಿರಾಕರಿಸುತ್ತೇವೆಯೋ ಆ ವಸ್ತು ನಮ್ಮಿಂದ ದೂರಾಗುತ್ತದೆ ಎಂದರು.
ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಇಂಗ್ಲಿಷ್ ಭಾಷೆ ಬಗ್ಗೆ ಭಯವಿರುತ್ತದೆ. ಯಾವ ಭಾಷೆ ನಮಗೆ ಕಷ್ಟವೋ ಅದನ್ನು ಇಷ್ಟಪಟ್ಟು ಓದಬೇಕು. ಅಂದಾಗ ಆ ಭಾಷೆ ನಮಗೆ ಹತ್ತಿರವಾಗುತ್ತದೆ ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಮಯದ ಬಗ್ಗೆ ಹೆಚ್ಚಿನ ಮಹತ್ವ ಕೊಡಬೇಕು. ಓದಿಗೆ ಹೆಚ್ಚಿನ ಸಮಯ ಕೊಡಬೇಕು. ಪಾಲಕರು ಕಷ್ಟ ಪಟ್ಟು ಮಕ್ಕಳನ್ನು ಓದಿಸುತ್ತರೆ. ವಿದ್ಯಾರ್ಥಿಗಳು ಪಾಲಕರ ಕಷ್ಟ ಅರಿತು ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿದಾಗ ಪಾಲಕರ ಶ್ರಮಕ್ಕೆ ಫಲ ಸಿಗುತ್ತದೆ ಎಂದು ಅವರು ತಿಳಿಸಿದರು.
ಸಂಸ್ಥೆ ಅಧ್ಯಕ್ಷ ವಾದಿರಾಜ್ ವ್ಯಾಸಮುದ್ರ ಅವರು ಕಲ್ಯಾಣ ಕರ್ನಾಟಕ ಪ್ರದೇಶದ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ನಮ್ಮಭಾಗವ ವಿದ್ಯಾರ್ಥಿಗಳಿಗೂ ಉನ್ನತ ಶಿಕ್ಷಣ ಸಿಗಬೇಕು ಎಂಬ ಕನಸು ಕಂಡಿದ್ದರು. ಕನಸು ನನಸು ಮಾಡುವತ್ತ ದಾಪುಗಾಲಿಡುತ್ತಾರೆ. ಗುರುಪಾದೇಶ್ವರ ಕಾಲೇಜು ಉತ್ತುಂಗಕ್ಕೇರಲಿ ಎಂದು ಅವರು ಶುಭ ಕೋರಿದರು. ಸಂಸ್ಥೆ ಅಧ್ಯಕ್ಷ ವಾದಿರಾಜ್ ವ್ಯಾಸಮುದ್ರ ಅಧ್ಯಕ್ಷತೆ ವಹಿಸಿ ಮಾತನಾಡಿ, ಗುರುಪಾದೇಶ್ವರ್ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಪ್ರಯತ್ನದಲ್ಲಿಯೇ ಯಶಸ್ವಿ ಕಂಡಿದ್ದಾರೆ. ಮೊದಲ ಸಲ ಪರೀಕ್ಷೆಯಲ್ಲಿ ಕಾಲೇಜಿಗೆ ಪ್ರತಿಶತ ಫಲಿತಾಂಶ ಲಭಿಸಿದೆ ಎಂದರು.
ಸಿದ್ರಾಮಯ್ಯ ಮಠ್, ಸಿ.ಎಸ್, ಜಗದೀಶ್ ಪಡಶೆಟ್ಟಿ, ಆನಂದ್ ಸಿ.ಎಸ್, ಮೋಹಿನಿ ಬೂದುರ್, ಅನಘಾ ವ್ಯಾಸಮುದ್ರ, ಮರೀಶಾ, ಜ್ಯೋತಿ, ಸವಿತಾ, ಶಕ್ತಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅಂಕಿತಾ, ಸೌಮ್ಯ ಅವರು ಪ್ರಾರ್ಥಿಸಿದರು. ಸಂಸ್ಥೆ ಕಾರ್ಯದರ್ಶಿ ಗುರುಪ್ರಸಾದ್ ಅಂಬಲಗಿ ಅವರು ಸ್ವಗತಿಸಿದರು. ಉಪನ್ಯಾಸಕಿ ಭಾಗ್ಯ ಅವರು ವಂದಿಸಿದರು.
ಲಕ್ಷ್ಮಿ, ಭಾಗ್ಯಶ್ರೀ ಅವರು ಕಾರ್ಯಕ್ರಮ ನಿರೂಪಿಸಿದರು.