ತೋಟಗಾರಿಕೆ ಇಲಾಖೆ ಅಧಿಕಾರಿ ಬಳಿ 2 ಕೋಟಿ ರೂ.ಗೂ ಅಧಿಕ ಅಕ್ರಮ ಸಂಪತ್ತು ಪತ್ತೆ : ಶಿವಮೊಗ್ಗ ಲೋಕಾಯುಕ್ತ ಮಾಹಿತಿ
ಶಿವಮೊಗ್ಗ, ಜು. 27; ಇತ್ತೀಚೆಗೆ ಶಿವಮೊಗ್ಗ ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರಕಾಶ್ ಜಿ ಎನ್ ಅವರ ಮನೆ ಸೇರಿದಂತೆ ಮೂರು ಕಡೆ ಏಕಕಾಲಕ್ಕೆ ನಡೆಸಿದ ದಾಳಿಯ ವೇಳೆ 2,05,23,330 ರೂ. ಮೌಲ್ಯದ ಅಕ್ರಮ ಸಂಪತ್ತು ಪತ್ತೆಯಾಗಿದೆ ಎಂದು ಶಿವಮೊಗ್ಗ ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.ಈ ಕುರಿತಂತೆ ಲೋಕಾಯುಕ್ತ ಪೊಲೀಸರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಸಂಪತ್ತು ಸಂಗ್ರಹಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕಾಶ್ ಜಿ ಎನ್ ಅವರ ವಿರುದ್ದ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.19/07/2024 ರಂದು ಆರೋಪಿತರಿಗೆ ಸೇರಿದ ಮೂರು ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿತ್ತು. ಈ ವೇಳೆ 1 ಖಾಲಿ ನಿವೇಶನ, 2 ಮನೆಗಳು,1.57 ಕೋಟಿ ರೂ. ಮೌಲ್ಯದ  2.8 ಎಕರೆ ಕೃಷಿ ಜಮೀನು ಪತ್ತೆಯಾಗಿರುತ್ತದೆ.ಹಾಗೂ ಅವರ ವಾಸದ ಮನೆಯಲ್ಲಿ 38,32,630 ರೂ. ಮೌಲ್ಯದ ಚಿನ್ನ-ಬೆಳ್ಳಿಯ ವಸ್ತುಗಳು, 5.20 ಲಕ್ಷ ರೂ. ಮೌಲ್ಯದ ವಾಹನಗಳು, 11.30 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಹಾಗೂ 12,86,500  ನಗದು ಪತ್ತೆಯಾಗಿರುತ್ತದೆ ಎಂದು ಲೋಕಾಯುಕ್ತ ಸಂಸ್ಥೆ ತಿಳಿಸಿದೆ.ನಂತರ ತನಿಖೆಯನ್ನು ಮುಂದುವರಿಸಿದ್ದು,  20/07/2024  ರಂದು  ಪ್ರಕಾಶ್  ಜಿ.ಎನ್ ರವರ  ಪತ್ನಿ  ಹೆಸರಿನಲ್ಲಿದ್ದ  ಬ್ಯಾಂಕ್ ಲಾಕರ್‍ ಶೋಧನೆ ಮಾಡಲಾಗಿತ್ತು. ಲಾಕರ್‍ನಲ್ಲಿ 32,06,000 ನಗದು  ಮತ್ತು ಅಂದಾಜು 18,48,200 ರೂ.ಮೌಲ್ಯದ ಚಿನ್ನಾಭರಣ ಪತ್ತೆಯಾಗಿರುತ್ತದೆ. ಅಧಿಕಾರಿಯು ಅಂದಾಜು 2,05,23,330 ರೂ ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಮಾಡಿರುವುದು ತನಿಖೆಯಿಂದ ಕಂಡು ಬಂದಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ. ಅವರ  ಮನೆ  ಮತ್ತು  ಲಾಕರ್  ನಲ್ಲಿ  ಪತ್ತೆಯಾದ  ನಗದು 44,06,000 ಗಳನ್ನು ತನಿಖೆ ಸಂಬಂದ ಅಮಾನತ್ತುಪಡಿಸಿಕೊಳ್ಳಲಾಗಿರುತ್ತದೆ. ಪ್ರಕರಣವನ್ನು ಶಿವಮೊಗ್ಗದ ಪೊಲೀಸ್ ಅಧೀಕ್ಷಕರಾದ ಮಂಜುನಾಥ್ ಚೌದರಿ ಎಂ.ಹೆಚ್. ರವರು ದಾಖಲಿಸಿದ್ದು, ಇನ್ಸ್’ಪೆಕ್ಟರ್ ಹೆಚ್.ಎಸ್.ಸುರೇಶ್ ಅವರು ತನಿಖೆ ಮುಂದುವರೆಸಿರುತ್ತಾರೆ.ದಾಳಿಯ ವೇಳೆ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆ ಅಧಿಕಾರಿ – ಸಿಬ್ಬಂದಿಗಳ ಜೊತೆಗೆ   ಹಾವೇರಿ  ಲೋಕಾಯುಕ್ತ  ಪೊಲೀಸ್  ಠಾಣೆಯ ಅಧಿಕಾರಿ ಸಿಬ್ಬಂದಿಗಳು ಭಾಗಿಯಾಗಿರುತ್ತಾರೆ ಎಂದು ಲೋಕಾಯುಕ್ತ ಪೊಲೀಸ್ ಪ್ರಕಟಣೆ ತಿಳಿಸಿದೆ.