ಜು. 29 ರಿಂದ ಕುಷ್ಟರೋಗ ಪತ್ತೆ ಹಚ್ಚುವ ಆಂದೋಲನ:ಆಶಾ-ಅಂಗನವಾಡಿ ಕಾರ್ಯಕರ್ತೆಯರಿಗೆ ಅಗತ್ಯ ಸಹಕಾರ ನೀಡಿ :ಬಿ.ಫೌಜಿಯಾ ತರನ್ನುಮ್
ಕಲಬುರಗಿ:ಜು.26: ಜಿಲ್ಲೆಯಾದ್ಯಂತ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನ ಇದೇ ಜುಲೈ 29 ರಿಂದ ಆಗಸ್ಟ್ 14 ವರೆಗೆ ನಡೆಯಲಿದ್ದು, ಆಶಾ-ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆ ಭೇಟಿ ನೀಡಿ ತಪಾಸಣೆ ಮಾಡಲಿದ್ದಾರೆ. ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಕರೆ ನೀಡಿದರು.
ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕುಷ್ಠರೋಗ ಪತ್ತೆ ಹಚ್ಚು ಆಂದೋಲನದ ಜಿಲ್ಲಾ‌ ಸಮನ್ವಯ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು, ಆರಂಭಿಕ ಹಂತದಲ್ಲಿಯೆ ರೋಗ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯುವುದು ಒಳ್ಳೆಯದು. ಕುಷ್ಠರೋಗ ವಾಸಿಯಾಗುವ ರೋಗವಾಗಿದ್ದು, ಸಾರ್ವಜನಿಕರು ಭಯಪಡಬಾರದು. ರೋಗ ಕಂಡುಬಂದಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು.
2027-2030 ಅವಧಿಯಲ್ಲಿ ದೇಶದಾದ್ಯಂತ ಕುಷ್ಠರೋಗ ಮುಕ್ತ ಭಾರತ ಗುರಿ ಹೊಂದಿದ್ದು, ಅರೋಗ್ಯ ಇಲಾಖೆಯ ಕಾರ್ಯಕ್ರಮ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪ್ರತಿ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳನ್ನು ತಪಾಸಣೆಗೆ ಒಳಪಡಿಸಬೇಕು. ಕುಷ್ಟರೋಗಿಗಳಿಗೆ ಸರ್ಕಾರದ ವಸತಿ ಯೋಜನೆಯಡಿ ಸೂರು ಒದಗಿಸಲು ಪ್ರಥಮಾದ್ಯತೆ ನೀಡಬೇಕು ಎಂದರು.
ಕುಷ್ಠರೋಗ ಪತ್ತೆಗೆ 2,190 ತಂಡ ರಚನೆ:
ಜಿಲ್ಲೆಯಾದ್ಯಂತ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನಕ್ಕೆ ಆಶಾ, ಅಂಗನವಾಡಿ ಕಾರ್ಯರ್ತೆಯರು ಒಳಗೊಂಡಂತೆ ಜಿಲ್ಲೆಯಾದ್ಯಂತ 2,190 ತಂ‌ಡ ರಚಿಸಲಾಗಿದೆ. ಗ್ರಾಮೀಣ ಮತ್ತು ನಗರ ಭಾಗದಲ್ಲಿ ಈ ತಂಡ ಬೆಳಿಗ್ಗೆ 8 ರಿಂದ 11 ಗಂಟೆ ವರೆಗೂ ಮನೆ-ಮನೆಗೆ ಭೇಟಿ ನೀಡಿ ಚರ್ಮದ‌ ಬಣ್ಣದಲ್ಲಿ ಯಾವುದೇ ತಿಳಿ, ಬಿಳಿ ತಾಮ್ರ ಬಣ್ಣದ ಸ್ಪರ್ಶ ಜ್ಞಾನವಿಲ್ಲದ ಮಚ್ಚೆಗಳು, ಚರ್ಮದಲ್ಲಿ‌ ಗಂಟು, ಹುಬ್ಬಿನ ಕೂದಲು ಇಲ್ಲದೆ ಇರುವುದು, ಬಾಹ್ಯ ನರಗಳು ದಪ್ಪ, ಕಣ್ಣುಗಳು ಪೂರ್ಣ ಪ್ರಮಾಣದಲ್ಲಿ ಮುಚ್ಚದೆ ಇರುವುದು ಸೇರಿದಂತೆ ಅನೇಕ ಲಕ್ಷಣಗಳ ಬಗ್ಗೆ ತಂಡ ಪತ್ತೆ ಹಚ್ಚಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆ ಪಡೆಯಲು ಶಿಫಾರಸ್ಸು ಮಾಡಲಿದೆ ಎಂದು ಡಿ.ಸಿ. ತಿಳಿಸಿದರು.
ಜಿಲ್ಲೆಯಲ್ಲಿ ಸಕ್ರೀಯ 95 ಪ್ರಕರಣ:
ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ.ರಾಜಕುಮಾರ ಮಾತನಾಡಿ, ಜಿಲ್ಲೆಯಲ್ಲಿ 95 ಸಕ್ರಿಯ ಕುಷ್ಠರೋಗ ಪ್ರಕರಣಗಳಿದ್ದು, ಎಲ್ಲರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐದಕ್ಕಿಂತ ಕಡಿಮೆ ಮಚ್ಚೆ ಇರುವ ರೋಗಕ್ಕೆ 6 ತಿಂಗಳು, ಐದಕ್ಕಿಂತ ಹೆಚ್ಚಿರುವ ಮಚ್ಚೆಗಳಿಗೆ ಒಂದು ವರ್ಷದ ಅವಧಿಯ ಚಿಕಿತ್ಸೆ ನೀಡಲಾಗುತ್ತದೆ. ಸೂಕ್ತ ಚಿಕಿತ್ಸೆ ಪಡೆದಲ್ಲಿ ರೋಗಿ ಗುಣಮುಖನಾಗುವನ್ನು ಎಂದು ತಿಳಿಸಿ ಆಂದೋಲನಕ್ಕೆ ತೆಗೆದುಕೊಂಡಿರುವ ಪೂರ್ವಸಿದ್ಧತೆ ಕುರಿತು ಸಭೆಗೆ ವಿವರಿಸಿದರು.
ಪೋಸ್ಟರ್ ಬಿಡುಗಡೆ:
ಇದೇ ಸಂದರ್ಭದಲ್ಲಿ ಕುಷ್ಟರೋಗ ಆಂದೋಲನದ ಅರಿವು ಮೂಡಿಸುವ ಪೋಸ್ಟರ್ ಗಳನ್ನು ಬಿಡುಗಡೆಗೊಳಿಸಿದ
ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಇದನ್ನು ಜನನಿಬಿಡ ಪ್ರದೇಶದಲ್ಲಿ ಅಂಟಿಸುವ ಮೂಲಕ ಸಾರ್ವಜನಿಕರಿಗೆ ರೋಗದ ಲಕ್ಷಣ, ಚಿಕಿತ್ಸೆ ಪಡೆಯುವ ವಿಧಾನದ ಬಗ್ಗೆ ಮಾಹಿತಿ ನೀಡಬೇಕೆಂದರು.
ಸಭೆಯಲ್ಲಿ ಡಿ.ಎಚ್.ಓ ಡಾ.ರತಿಕಾಂತ ಸ್ವಾಮಿ, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಶರಣಬಸಪ್ಪ ಖ್ಯಾತನಾಳ, ಜಿಲ್ಲಾ ಸರ್ಜನ್ ಡಾ. ನಾಗರಾಜ ಬಿ. ಪಾಟೀಲ,
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಚಂದ್ರಕಾಂತ ನರಿಬೋಳ, ಜಿಲ್ಲಾ ಕಾಲರಾ ನಿಯಂತ್ರಣಾಧಿಕಾರಿ ಡಾ.ವಿವೇಕಾನಂದ ರೆಡ್ಡಿ, ಜಿಲ್ಲಾ ಆರೋಗ್ಯ ಕಲ್ಯಾಣಾಧಿಕಾರಿ ಡಾ.ಶಿವಶರಣಪ್ಪ ಭೂಸನೂರ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ಸುರೇಶ ಮೇಕಿನ್, ಜಿಮ್ಸ್ ಚರ್ಮರೋಗ ತಜ್ಞ ಡಾ.ಪ್ರಸಾದ ರಾಠೋಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಕುಮಾರ ರಾಠೋಡ ಸೇರಿದಂತೆ ತಾಲೂಕಾ ಆರೋಗ್ಯಾಧಿಕಾರಿಗಳು, ಸಿ‌.ಡಿ.ಪಿ.ಓ ಗಳು ಇದ್ದರು.