ಡಾಕ್ಟರ್ ವಿರುದ್ಧ ಕೇಸ್ ಕೈಬಿಡಲು ಹೈಕೋರ್ಟ್ ನಕಾರ
ಬೆಂಗಳೂರು,ಜು.೨೬- ಹಿಂದೂ ಮುಖಂಡರ ಕೊಲೆಗೈದು ಭಯೋತ್ಪಾದನೆಗೆ ಸಂಚು ರೂಪಿಸಿ ಶಸ್ತ್ರಾಸ್ತ್ರ,ಮದ್ದುಗುಂಡುಗಳ ಸಂಗ್ರಹ ಪ್ರಕರಣದ ಆರೋಪಿ ಡಾ.ಸಬೀಲ್ ಅಹಮದ್ ಅಲಿಯಾಸ್ ಮೋಟು ಡಾಕ್ಟರ್ ನನ್ನು ಪ್ರಕರಣದಿಂದ ಕೈಬಿಡಲು ಹೈಕೋರ್ಟ್ ನಿರಾಕರಿಸಿದೆ.
ಆರೋಪಿ ಸಬೀಲ್ ಅಹಮದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ಜಿ.ಎಂ.ಖಾಜಿ ಅವರಿದ್ದ ವಿಭಾಗೀಯ ನ್ಯಾಯ ಪೀಠವು ಮೋಟು ಡಾಕ್ಟರ್ ನನ್ನು ಪ್ರಕರಣದಿಂದ ಕೈಬಿಡಲು ನಿರಾಕರಣೆ ಮಾಡಿ ಆದೇಶ ಹೊರಡಿಸಿದೆ.
ವಿಚಾರಣೆ ವೇಳೆ ಅರ್ಜಿದಾರನ ಪರ ವಕೀಲರು, ನಮ್ಮ ಕಕ್ಷಿದಾರರ ವಿರುದ್ಧ ಬೆಂಗಳೂರಿನ ಪ್ರಕರಣದಲ್ಲಿ ಹೊರಿಸಲಾಗಿರುವ ಆರೋಪಗಳು ಮತ್ತು ಈ ಹಿಂದೆ ದೆಹಲಿಯಲ್ಲಿನ ಪ್ರಕರಣವೊಂದರಲ್ಲಿ ಹೊರಿಸಲಾದ ಆರೋಪಗಳೆರಡೂ ಒಂದೇ ರೀತಿ ಇವೆ. ದೆಹಲಿಯ ಪ್ರಕರಣದಲ್ಲಿ ಈಗಾಗಲೇ ದೋಷಮುಕ್ತಗೊಂಡಿದ್ದಾರೆ. ಹೀಗಾಗಿ ಏಕರೂಪದ ಆರೋಪಗಳಿಗೆ ಎರಡೆರಡು ಬಾರಿ ಸಿಆರ್‌ಪಿಸಿ ಅಡಿಯಲ್ಲಿ ವಿಚಾರಣೆ ನಡೆಸುವುದು ಕಾನೂನುಬಾಹಿರ ಎಂದು ವಾದ ಮಂಡಿಸಿದರು.
ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ ಪಿ.ಪ್ರಸನ್ನಕುಮಾರ್, ದೆಹಲಿ ಪ್ರಕರಣದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ನಿಧಿ ಸಂಗ್ರಹಿಸಿದ ಆರೋಪವಿದೆ. ಆದರೆ, ಬೆಂಗಳೂರು ಪ್ರಕರಣದಲ್ಲಿ ಹಲವರ ಹತ್ಯೆ ನಡೆಸಿ ಭಯೋತ್ಪಾದನೆ ಉಂಟುಮಾಡುವ ಉದ್ದೇಶವಿದ್ದ ಆರೋಪವಾಗಿದೆ. ಎರಡೂ ಭಿನ್ನವಾಗಿರುವುದರಿಂದ ಪ್ರಕರಣ ರದ್ದು ಮಾಡಬಾರದು.ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.
ವಾದ ಪ್ರತಿವಾದ ಆಲಿಸಿದ ನ್ಯಾಯಪೀಠವು, ಅರ್ಜಿದಾರನ ವಿರುದ್ಧ ಬೆಂಗಳೂರು ಮತ್ತು ದೆಹಲಿಯ ಪ್ರಕರಣದಲ್ಲಿ ದಾಖಲಾಗಿರುವುದು ಒಂದೇ ಕಾಯ್ದೆಯ ಸೆಕ್ಷನ್‌ಗಳಿರಬಹುದು. ಆದರೆ, ಅದು ಒಂದೇ ರೀತಿಯ ಆರೋಪಗಳಲ್ಲ. ಎರಡೂ ಪ್ರಕರಣಗಳು ವಾಸ್ತವವಾಗಿ ವಿಭಿನ್ನವಾಗಿವೆ ಮತ್ತು ಪ್ರತ್ಯೇಕ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ ಎಂದು ತಿಳಿಸಿ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:
ಲಷ್ಕರ್ ಎ ತೋಯ್ಬಾ(ಎಲ್‌ಎಟಿ) ಸದಸ್ಯರು ರೂಪಿಸಿದ್ದ ಪಿತೂರಿಗೆ ಸಂಬಂಧಿಸಿದ್ದ ಪ್ರಕರಣ ಇದಾಗಿದೆ. ಕರ್ನಾಟಕದ ಹುಬ್ಬಳ್ಳಿ, ಮಹಾರಾಷ್ಟ್ರದ ನಾಂದೇಡ್ ಮತ್ತು ತೆಲಂಗಾಣದ ಹೈದರಾಬಾದ್‌ನಲ್ಲಿ ಹಿಂದೂ ಸಮುದಾಯದ ಪ್ರಮುಖ ವ್ಯಕ್ತಿಗಳ ಹತ್ಯೆಗೆ ಆರೋಪಿ ಅಕ್ರಮ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ಸಂಗ್ರಹಿಸಿದ್ದ ಎಂದು ಆರೋಪ ಇದೆ. ಆರೋಪ ಸಂಬಂಧ ನಗರದ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ೨೦೧೨ರ ಆಗಸ್ಟ್‌ನಲ್ಲಿ ದೂರು ದಾಖಲಿಸಿ, ನವೆಂಬರ್ ತಿಂಗಳಲ್ಲಿ ರಾಷ್ಟ್ರೀಯ ತನಿಖಾ ದಳಕ್ಕೆ ತನಿಖೆ ವಹಿಸಲಾಗಿತ್ತು.
ಆತ್ಮಾಹುತಿ ಬಾಂಬ್ ದಾಳಿ:
ಸೌದಿ ಅರೇಬಿಯಾದಲ್ಲಿ ನೆಲೆಸಿದ್ದ ಸಬೀಲ್ ಅಹ್ಮದ್‌ಅನ್ನು ಗಡಿಪಾರು ಮಾಡಿದ ಬಳಿಕ ೨೦೨೧ರಲ್ಲಿ ಬಂಧಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಎನ್‌ಐಎ, ಆರೋಪಿ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳು, ಶಸ್ತ್ರಾಸ್ತ್ರ ಕಾಯ್ದೆ, ಕೋಕಾ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಆರೋಪ ಪಟ್ಟಿ ಸಲ್ಲಿಸಿತ್ತು. ಬಳಿಕ ಈ ಪ್ರಕರಣದಿಂದ ಬಿಡುಗಡೆ ಕೋರಿ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯ ರದ್ದುಪಡಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ.
ಮತ್ತೊಂದೆಡೆ, ಸಬೀಲ್ ಸಹೋದರ ಕಫೀಲ್ ಅಹಮದ್ ವಿರುದ್ಧವೂ ೨೦೦೭ರಲ್ಲಿ ಗ್ಲ್ಯಾಸ್ಗೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ ಆರೋಪವಿದೆ.