ಕಾಂಗ್ರೆಸ್ ಸರ್ಕಾರ ದಲಿತ ವಿರೋಧಿ:ಘಟಕಾಂಬಳೆ
ವಿಜಯಪುರ, ಜು.25: ಅಹಿಂದ ಹೆಸರು ಹೇಳಿಕೊಂಡು ಆಡಳಿತ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತರ ವಿರೋಧಿಯಾಗಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಗೋಪಾಲ ಘಟಕಾಂಬಳೆ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಗರಣ ಮಾಡಿದ್ದಾರೆ. ಈ ಹಗರಣದಲ್ಲಿ ಸಚಿವರ ತಲೆದಂಡ ಆಗಿದ್ದು, ಅನೇಕರನ್ನು ಬಂಧನ ಮಾಡಲಾಗಿದೆ. ಅಹಿಂದ ನಾಯಕರು ಎಂದು ಬಿಂಬಿಸಿ ದಲಿತರಿಗೆ ಕಾಂಗ್ರೆಸ್ ವಂಚಿಸುತ್ತಿದ್ದು, ಕಾಂಗ್ರೆಸ್ ದಲಿತರ ವಿರೋಧಿಯಾಗಿದೆ ಎಂದರು.
ರಾಜ್ಯ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸಿಎಂ ಸಿದ್ದರಾಮಯ್ಯನವರು ಹಿಂದುಳಿದ ಹಾಗೂ ದಲಿತರ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ದಲಿತ ನಾಯಕರು ಅಂತ ಹೇಳಿ ವಂಚನೆ ಮಾಡುತ್ತಿದ್ದಾರೆ. ವಾಲ್ಮೀಕಿ, ಮುಡಾ ಸೇರಿದಂತೆ ಅನೇಕ ಹಗರಣಗಳು ಇವರ ಮೇಲೆ ಇರುವುದರಿಂದ ಸಿಎಂ ಸಿದ್ಧರಾಮಯ್ಯ ಅವರು ತಕ್ಷಣ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ದಲಿತರ ಪರವಾಗಿರುವ ಏಕೈಕ ಪಕ್ಷ ಎಂದರೆ ಅದು ಬಿಜೆಪಿ. ಬಿಜೆಪಿ ಯಾವಾಗಲೂ ದಲಿತರ ಪರವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಗೌರವ ಕೊಟ್ಟಿದ್ದು ಇದೇ ಬಿಜೆಪಿ. ಬಿಜೆಪಿ ಪಕ್ಷದಲ್ಲಿ ಯಾವಾಗಲೂ ದಲಿತರಿಗೆ ಸಮಾನತೆ ಕೊಡುವ ಕೆಲಸ ಆಗಿದೆ. ಪಕ್ಷ ಚಲವಾದಿ ನಾರಾಯಣಸ್ವಾಮಿ ಅವರಿಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನ ಕೊಟ್ಟಿದೆ. ಹೀಗಾಗಿ ದಲಿತರು, ಹಿಂದುಳಿದವರು ಬಿಜೆಪಿ ಪರ ಇದ್ದಾರೆ. ಕಾಂಗ್ರೆಸ್ ವಿರುದ್ಧ ಸಾಕಷ್ಟು ಭ್ರಷ್ಟಾಚಾರ ಆರೋಪಗಳು ಇವೆ. ಕಾಂಗ್ರೆಸ್‌ನವರು ದಲಿತರ ಹಣ ದುರುಪಯೋಗ ಮಾಡಿದ್ದರಿಂದ ದಲಿತ ಸಂಘಟನೆಗಳು ಹೋರಾಟ ಮಾಡಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಾಧ್ಯಮ ಪ್ರಮುಖ ವಿಜಯ ಜೋಶಿ ಉಪಸ್ಥಿತರಿದ್ದರು.