ರಾವೂರ ಮಲ್ಲಕಂಬ ಕೃತಿ ಜನಾರ್ಪಣೆ 28 ರಂದು
ಕಲಬುರಗಿ:ಜು.25: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಗಳೂ ಆದ ಆದರ್ಶ ಶಿಕ್ಷಕ ಸಿದ್ಧಲಿಂಗ ಜಿ ಬಾಳಿ ಅವರು ರಚಿಸಿದ ರಾವೂರ ಮಲ್ಲಕಂಬ ಗ್ರಾಮೀಣ ಕಸರತ್ತಿನ ಕ್ರೀಡೆ ಕೃತಿಯ ಜನಾರ್ಪಣೆ ಸಮಾರಂಭವನ್ನು ಜುಲೈ 28 ರ ಬೆಳಗ್ಗೆ 10.45 ಕ್ಕೆ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ಕಲೆಗಳು ನಮ್ಮ ಬದುಕಿನ ಉಸಿರು. ಅವು ಉಳಿದು ಬೆಳೆದಾಗ ಸಾಂಸ್ಕೃತಿಕ ಜೀವನ ಕಟ್ಟಬಹುದು. ಅಂಥ ಕಲೆಗಳಲ್ಲಿ ಮಲ್ಲಕಂಬ ಎಂಬುದು ಸೂಕ್ಷö್ಮ ಪ್ರತಿಭೆ ಹೊಂದಿದ ಕಲೆಯಾಗಿದೆ. ಇದನ್ನು ಆಸಕ್ತಿಯಿಂದ ಕಲಿತಾಗ ಸಾಧಿಸಬಹುದಾಗಿದೆ. ಈ ಕಲೆಯ ಜೀವಂತಿಕೆಗೆ ಲೇಖಕ ಸಿದ್ಧಲಿಂಗ ಬಾಳಿ ಅವರು ದೂರದೃಷ್ಠಿಯನ್ನಿಟ್ಟುಕೊಂಡು ಈ ಕೃತಿಯನ್ನು ರಚಿಸಿ ಈ ಕಲೆಯನ್ನು ಇತಿಹಾಸ ಪುಟಗಳಲ್ಲಿ ದಾಖಲೀಕರಣಗೊಳಿಸಿದ್ದಾರೆ.
ತಮ್ಮ ರಾವೂರಿನ ಶ್ರೀ ವಿದ್ಯಾಭಿವೃದ್ಧಿ ಸಂಸ್ಥೆಯ ಮಲ್ಲಕಂಬದ ಕಲೆಯನ್ನು ನಾಡಿನಾದ್ಯಂತ ಪರಿಚಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾವೂರ ಊರಿನಲ್ಲಿ ಮಲ್ಲಕಂಬ ಪ್ರದರ್ಶನ ನೋಡುವುದೇ ಆನಂದ ಎಂಬುದು ಈ ಭಾಗದ ಜನರಿಗೆ ಗೊತ್ತಿರುವ ಸಂಗತಿಯಾಗಿದೆ ಎಂದು ಅವರು ವಿವರಿಸಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿರುವ ಕೃತಿ ಜನಾರ್ಪಣೆ ಸಮಾರಂಭದ ದಿವ್ಯ ಸಾನಿಧ್ಯ ರಾವೂರಿನ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ವಹಿಸಲಿದ್ದು, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಜನಾರ್ಪಣೆಗೊಳಿಸಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಲಿದ್ದು, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸೂರ್ಯಕಾಂತ ಮದಾನೆ, ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಡಾ. ಗುಂಡಣ್ಣ ಬಾಳಿ, ಪ್ರೌಢಶಾಲಾ ಶಿಕ್ಷಕರ ಸಂಘ ಜಿಲ್ಲಾಧ್ಯಕ್ಷ ಮಹೇಶ ಹೂಗಾರ, ಜಿಲ್ಲಾ ಕಸಾಪ ದ ಧರ್ಮಣ್ಣ ಎಚ್ ಧನ್ನಿ, ಶಿವರಾಜ ಅಂಡಗಿ, ಶರಣರಾಜ ಛಪ್ಪರಬಂದಿ ಉಪಸ್ಥಿತರಿರುವರು. ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರಾಜಶೇಖರ ಗೋನಾಯಕ ಅವರು ಕೃತಿ ಪರಿಚಯ ಮಾಡಲಿದ್ದಾರೆ.
ರಾವೂರ ಶಾಲೆಯಲ್ಲಿ ನಡೆಸುವ ಮಲ್ಲಕಂಬ ಕ್ರೀಡೆಗೆ ಬೆಳ್ಳಿ ಹಬ್ಬದ ಸಂಭ್ರಮ ಪೂರೈಸಿರುವ ಹಿನ್ನೆಲೆ ಮಲ್ಲಕಂಬ ಕ್ರೀಡೆಯನ್ನು ಆರಂಭದಲ್ಲಿ ಬೆಳೆಸಿರುವ ಕ್ರೀಡಾ ಪಟುಗಳನ್ನು ಇದೇ ಸಂದರ್ಭದಲ್ಲಿ ವಿಶೇಷವಾಗಿ ಸತ್ಕರಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.