ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಲೋಕಾಯುಕ್ತರ ದಿಢೀರ್ ಭೇಟಿ: ಅಂಕಪಟ್ಟಿಗಾಗಿ ಕಣ್ಣೀರಿಟ್ಟ ಪದವೀಧರೆ
ಕಲಬುರಗಿ: ಜು.24: ಗುಲಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗಕ್ಕೆ ಲೋಕಾಯುಕ್ತ ಎಸ್ಪಿ ಜಾನ್ ಆಂಟೋನಿ ಅವರು ಬುಧವಾರ ಭೇಟಿ ನೀಡಿ, ಮೂರ್ನಾಲ್ಕು ವರ್ಷಗಳಿಂದ ಅಂಕಪಟ್ಟಿ ನೀಡದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಹರಿಹಾಯ್ದರು. ಪದವಿ ಪ್ರಮಾಣ ಪತ್ರ (ಕಾನ್ವಕೇಷನ್) ಕೊಡಲು ಆಗದಕ್ಕೆ ನಾಚಿಕೆ ಆಗಬೇಕು ಎಂದು ಅವರನ್ನು ತರಾಟೆಗೆ ತೆಗೆದುಕೊಂಡರು.
ವಿಭಾಗದ ಕಚೇರಿಯಲ್ಲಿ ವರ್ಷಗಳಿಂದ ವಿಲೇವಾರಿ ಆಗದೆ ಬಿದ್ದಿದ್ದ ಅಂಕಪಟ್ಟಿ ಹಾಗೂ ಕಾನ್ವಕೇಷನ್ ಕೋರಿ ಬಂದಿದ್ದ ಮನವಿ ಪತ್ರಗಳನ್ನು ನೋಡಿ ದಂಗಾದರು. 2021ರಿಂದ ಅಂಕಪಟ್ಟಿಗಳು ಬಾಕಿ ಇವೆ. ಇದ್ಯಾವ ಲೆಕ್ಕ ಮಾರಾಯರೇ? ಹೀಗಾದರೆ ವಿದ್ಯಾರ್ಥಿಗಳ ಭವಿಷ್ಯದ ಗತಿ ಏನು? ಪದವೀಧರರಿಗೆ ಅಂಕಪಟ್ಟಿ ಕೊಡಲು ಸಮಸ್ಯೆ ಏನು’ ಎಂದು ಮೌಲ್ಯಮಾಪನ ಕುಲಸಚಿವೆ ಮೇದಾವಿನಿ ಎಸ್. ಕಟ್ಟಿ ಅವರನ್ನು ಖಾರವಾಗಿ ಪ್ರಶ್ನಿಸಿದರು.
ಕಾನ್ವಕೇಷನ್‌ಗಾಗಿ ಎರಡನೇ ಬಾರಿಗೆ ಬಂದಿದ್ದಾಗಿ ಪದವೀಧರ ಅಭ್ಯರ್ಥಿಗಳು ಎಸ್ಪಿ ಅವರ ಗಮನಕ್ಕೆ ತಂದರು. ಮೊದಲನೇ ಬಾರಿ ಅರ್ಜಿ ಸಲ್ಲಿಸಿದ್ದಾಗಲೇ ಕಾನ್ವಕೇಷನ್ ಕೊಡಬೇಕಿತ್ತು. ಎರಡನೇ ಬಾರಿ ಬಂದಾಗಲು ಕೊಡಲು ಆಗಿಲ್ಲವೆಂದರೇ ನಿಮಗೆ ನಾಚಿಕೆ ಆಗಬೇಕು ಎಂದು ಅವರು ಕಿಡಿಕಾರಿದರು.
ಬೀದರ್‌ನಿಂದ ಬಂದಿದ್ದ ಮತ್ತೊಬ್ಬ ಪದವೀಧರೆ ಕಣ್ಣೀರು ಸುರಿಸುತ್ತಾ, ಸಾವಿರಾರು ರೂಪಾಯಿ ಶುಲ್ಕ ಕಟ್ಟಿಸಿಕೊಂಡಿದ್ದರೂ ಇದುವರೆಗೂ ಅಂಕಪಟ್ಟಿ ಕೊಟ್ಟಿಲ್ಲ. ಟೇಬಲ್‌ನಿಂದ ಟೇಬಲ್‌ಗೆ ಅಲೆಸುತ್ತಿದ್ದಾರೆ. ಬೀದರ್‌ನಿಂದ ಮೂರು ಗಂಟೆಗಳ ಕಾಲ ಪ್ರಯಾಣಿಸಿ ಬರುವ ವೇಳೆಗೆ ಊಟದ ಟೈಮ್ ಆಗಿದೆ ಎಂದು ಎದ್ದು ಹೋಗುತ್ತಾರೆ. ಹತ್ತಾರು ಬಾರಿ ಮಕ್ಕಳನ್ನು ಕಟ್ಟಿಕೊಂಡು ಬರುತ್ತಿದ್ದರೂ ನಮ್ಮ ಗೋಳು ಕೇಳುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಇದರಿAದ ಕುಪಿತಗೊಂಡ ಎಸ್ಪಿ ಜಾನ್ ಆಂಟೋನಿ ಅವರು, ಇಲ್ಲಿನ ವ್ಯವಸ್ಥೆ ನೋಡಿದರೆ ಭ್ರಷ್ಟಾಚಾರ ನಡೆದಿದೆ ಅನಿಸುತ್ತಿದೆ. ಅಂಕಪಟ್ಟಿಗಾಗಿ ಎಷ್ಟು ಬಾರಿ ಶುಲ್ಕ ಕಟ್ಟಬೇಕು? ಅಂಕಪಟ್ಟಿ ಇಲ್ಲದೆ ಉದ್ಯೋಗ ಹೇಗೆ ಸಿಗುತ್ತೆ? ಉನ್ನತ ವ್ಯಾಸಂಗಕ್ಕೆ ಪ್ರವೇಶಾತಿ ಯಾರು ಕೊಡುತ್ತಾರೆ? ಈ ಸಮಸ್ಯೆಯನ್ನು ಯಾವಾಗ ಬಗೆ ಹರಿಸುತ್ತೀರಾ’ ಎಂದು ಪ್ರಶ್ನಿಸಿದರು. ಎಸ್ಪಿ ಅವರ ಸರಣಿ ಪ್ರಶ್ನೆಗಳಿಗೆ ಅಳುಕುತ್ತಲೇ ಪ್ರತಿಕ್ರಿಯಿಸಿದ ಸಿಬ್ಬಂದಿ, ‘ಅಂಕಪಟ್ಟಿ ವಿಲೇವಾರಿಗೆ ಸಿಬ್ಬಂದಿ ಕೊರತೆ ಇದೆ’ ಎಂದರು.
ಹೊರ ಗುತ್ತಿಗೆ ನೌಕರರು ಪದವೀಧರರ ವಿರುದ್ಧವೇ ಆರೋಪ ಮಾಡಿದಕ್ಕೆ ಸಿಡಿಮಿಡಿಗೊಂಡ ಎಸ್ಪಿ ಅವರು., ಹೊರ ಗುತ್ತಿಗೆ ನೌಕರರು ಆರು ತಿಂಗಳಿಗಿAತ ಹೆಚ್ಚಿನ ಅವಧಿಗೆ ಇರಿಸಿಕೊಳ್ಳುವಂತಿಲ್ಲ. ಇಂತಹವರನ್ನು ಇನ್ನೂ ಏಕೆ ಉಳಿಸಿಕೊಂಡಿದ್ದು ಎಂದು ಮೌಲ್ಯಮಾಪನ ಕುಲಸಚಿವರನ್ನು ಪ್ರಶ್ನಿಸಿದರು. ಎಸ್ಪಿ ಜಾನ್ ಆಂಥೋನಿ ಅವರು ವಿಶ್ವವಿದ್ಯಾಲಯದ ಸ್ಥಳದಲ್ಲಿ ಸಮಸ್ಯೆಯನ್ನು ಬಗೆಹರಿಸಿದರು. ಹಾಗೂ ವಿದ್ಯಾರ್ಥಿನಿ ಪವಿತ್ರಾ ತಂದೆ ರಾಜಕುಮಾರ್ ಅವರಿಗೆ ಅಂಕಪಟ್ಟಿಯನ್ನು ಕೊಡಿಸಿದರು. ಮೌಲ್ಯಮಾಪನ ಕುಲಸಚಿವೆ ಮೇಧಾವಿನಿ ಎಸ್. ಕಟ್ಟಿ, ಪಿಐ ರಾಜಶೇಖರ್, ಸಿಬ್ಬಂದಿಗಳಾದ ಬಸವರಾಜ್, ಶರಣು, ಸಿದ್ಧರಾಮ್ ಮುಂತಾದವರು ಉಪಸ್ಥಿತರಿದ್ದರು.