ಅನಾಥ ರಸ್ತೆ: ರೈತರ ಪರದಾಟ
ಲಕ್ಷ್ಮೇಶ್ವರ,ಜು.23:ತಾಲೂಕಿನ ಶಿಗ್ಲಿ ಗ್ರಾಮದಿಂದ ಸವಣೂರು ತಾಲೂಕಿನ ಹೂವಿನ ಶಿಗ್ಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 3 ಕಿಮೀ ರಸ್ತೆ ಕಿತ್ತು ಅನಾಥವಾಗಿದ್ದು ಸರ್ಕಾರದ ಆದೇಶದಿಂದಾಗಿ ಈ ರಸ್ತೆ ಅನಾಥವಾಗಿ ಜನಸಾಮಾನ್ಯರು ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅನುಮೋದನೆಗೊಂಡು ಸನ್ 2021 22ನೇ ಸಾಲಿನಲ್ಲಿ ಮಂಜುರಾಗಿದ್ದ ಈ ರಸ್ತೆ ಇನ್ನೇನು ಗುತ್ತಿಗೆದಾರರು ರಸ್ತೆಯ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎನ್ನುವಷ್ಟರಲ್ಲಿ ನೂತನ ಕಾಂಗ್ರೆಸ್ ಸರ್ಕಾರ ಹಳೆಯ ಕಾಮಗಾರಿಗಳನ್ನು ಆರಂಭಿಸಿದಂತೆ ಇಲಾಖೆಗೆ ನೀಡಿದ ಸೂಚನೆಯಿಂದಾಗಿ ಈ ರಸ್ತೆ ಈಗ ಸರ್ಕಾರದ ಅನಾಥರಸ್ತೆಯಾಗಿದೆ.
ಸುಮಾರು 50 ಲಕ್ಷ ರೂ ವೆಚ್ಚದಲ್ಲಿ ಕೈಗೊಳ್ಳಲಾಗಿದ್ದ ಎರಡೂವರೆ ಕಿಲೋಮೀಟರ್ ರಸ್ತೆ ಕಾಮಗಾರಿಯಲ್ಲಿ ಕೇವಲ 800 ಮೀಟರ್ ರಸ್ತೆ ಮಾತ್ರ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ ಗುತ್ತಿಗೆದಾರರಿಗೆ ನಿರ್ಮಾಣ ಮಾಡಿದ 800 ಮೀಟರ್ ರಸ್ತೆಯ ಹಣವು ಕೂಡ ಸಿಗದೇ ಪರದಾಡುತ್ತಿದ್ದಾರೆ.
ರಸ್ತೆ ಕಾಮಗಾರಿಗಾಗಿ ಶಿಗ್ಲಿಯಿಂದ ರಸ್ತೆಯುದ್ದಕ್ಕೂಖಡಿ ಗಳ ರಾಶಿ ಕಂಡುಬರುತ್ತಿದ್ದು ರಸ್ತೆ ನಿರ್ಮಾಣದ ಸೂಚನೆ ಮಾತ್ರ ಕಾಣುತ್ತಿದೆ ಈ ಕುರಿತು ಅಧಿಕಾರಿಗಳನ್ನು ಸಂಪರ್ಕಿಸಿದಾಗ ಸರ್ಕಾರದ ಆದೇಶದಿಂದಾಗಿ ರಸ್ತೆಯ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಹಾಗೂ ಅನುದಾನದ ಕೊರತೆಯೂ ಕಾರಣವಾಗಿದೆ ಎಂದು ಹೇಳುತ್ತಾರೆ.
ಈ ಕುರಿತು ಶಿಗ್ಲಿ ಗ್ರಾಮದ ಸೋಮಣ್ಣ ಡಾಣಗಲ್ಲ ಅವರು ಪ್ರತಿಕ್ರಿಯೆ ನೀಡಿ ಕಳೆದ ಒಂದು ವರ್ಷದಿಂದ ಅಧಿಕಾರಕ್ಕೆ ಬಂದಿರುವ ಸರ್ಕಾರ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಗ್ಯಾರಂಟಿ ಹೆಸರಿನಲ್ಲಿ ನುಂಗಿ ಹಾಕಿದೆ ಇದೇ ಸ್ಥಿತಿ ಮುಂದುವರೆದರೆ ತಾಲೂಕಿನ ಎಲ್ಲ ಲೋಕೋಪಯೋಗಿ ಮತ್ತು ಜಿಲ್ಲಾ ಪಂಚಾಯಿತಿ ರಸ್ತೆಗಳು ಹಳ್ಳ ಹಿಡಿದು ಸಾರಿಗೆ ವ್ಯವಸ್ಥೆಯೇ ಇಲ್ಲದಂತಾಗಿ ಜನ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ ಸರ್ಕಾರಕ್ಕೆ ಜನಪರ ಕಾಳಜಿ ಚಿಂತೆನೆ ಇದ್ದರೆ ಕೊನೆಯ ಪಕ್ಷ ರಸ್ತೆಗಳ ಗುಂಡಿಗಳನ್ನು ಮುಚ್ಚಲಾದರೂ ಅನುದಾನ ಬಿಡುಗಡೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.