ಎಚ್‌ಎಎಲ್‌ ಅಂಪ್ರೆಟಿಶಿಪ್‌ನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಶಿಶುಕ್ಷುಗಳಿಗೆ ಮೊದಲ ಆದ್ಯತೆ: ಚಂದ್ರಲಾಂಬಾ ಭರವಸೆ
ಕಲಬುರಗಿ:ಜು.22:ಹಿಂದೂಸ್ತಾನ್‌ ಏರೋನಾಟಿಕಲ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ನ ಶಿಶುಕ್ಷು (ಅಪ್ರಂಟಿಶಿಪ್‌) ತರಬೇತಿ ಯೋಜನೆಯಲ್ಲಿ ಕಲಬುರಗಿ ಸೇರಿದಂತೆ ಕಲ್ಯಾಣ ನಾಡಿನ ಜಿಲ್ಲೆಗಳ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ ಎಂದು ಹೇಳುವ ಮೂಲಕ ಎಚ್‌ಎಎಲ್‌ನ ಮುಖ್ಯ ವ್ಯವಸ್ಥಾಪಕಿ ಚಂದ್ರಲಾಂಬಾ ಹೇಳಿದ್ದಾರೆ.
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಸರ್ಕಾರಿ ಮತ್ತು ಅನುದಾನಿತ ಸಂಸ್ಥೆಗಳ ಹಾಗೂ ಎಚ್.ಎ.ಎಲ್ ಬೆಂಗಳೂರು ಇವುಗಳ ಸಹಯೋಗದೊಂದಿಗೆ ಕಲಬುರಗಿ ಜಿಲ್ಲೆಯಲ್ಲಿ ಸರ್ಕಾರಿ/ ಅನುದಾನಿತ/ ಅನುದಾನ ರಹಿತ ಕೈಗಾರಿಕಾ ತರಬೇತಿ ಸಂಸ್ಥೆಗಳ ಎರಡನೇ ವರ್ಷದ ಮತ್ತು ಒಂದು ವರ್ಷದ ವೃತ್ತಿಯಲ್ಲಿ ತರಬೇತಿ ಪಡೆಯುತ್ತಿರುವ ತರಬೇತಿದಾರರಿಗೆ ಆಯೋಜಿಸಲಾಗಿರುವ 2 ದಿನಗಳ ಮೇಳದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳವಾರ ಪಾಲ್ಗೊಂಡು ಅವರು ಮಾತನಾಡಿದರು.
ಎಚ್‌ಎಎಲ್‌ ವಾರ್ಷಿಕ 2, 200 ಶಿಶುಕ್ಷುಗಳನ್ನು ಅಂಪ್ರೆಟಿಶಿಪ್‌ನಲ್ಲಿ ನೇಮಕ ಮಾಡಿಕೊಳ್ಳುತ್ತದೆ. ಇದಕ್ಕಾಗಿಯೇ ಈ ಮೇಳ, ಕಾರ್ಯಾಗಾರ ನಡೆಸಲಾಗುತ್ತಿದೆ. ಇಲ್ಲಿಂದಲೇ ನಮಗೆ ಅಗತ್ಯ ಮಾನವ ಸಂಪನ್ಮೂಲ ಲಭ್ಯವಾದಲ್ಲಿ ತಾವು ಸಂತಸಪಡೋದಾಗಿಯೂ ಚಂದ್ರಲಾಂಬಾ ಹೇಳಿದರು.
ತಮ್ಮ ಮಾತಲ್ಲಿ ಕಲಬುರಗಿ ಸೇರಿದಂತೆ ಕಲ್ಯಾಣ ನಾಡಿನ ಮಕ್ಕಳನ್ನು ಕಠಿಣ ಪರಿಶ್ರಮಗಳು, ಅಭ್ಯಾಸ ಮಾಡುವವರು, ಪ್ರಯತ್ನಶೀಲರು ಎಂದು ಮೆಚ್ಚಿಕೊಂಡ ಅವರು ಇಂತಹ ಕೌಶಲ್ಯವಂತರಿಗೆ ಕಂಪನಿ ಸದಾ ನೆರವಿನ ಹಸ್ತ ಚಾಚುತ್ತದೆ, ಹೆಚ್ಚಿನ ಕೌಶಲ್ಯ ತರಬೇತಿ, ಸಂಹವನ ತರಬೇತಿ ಕೊಡಲು ಸಿದ್ಧ ಎಂದರು.
ಕಲ್ಯಾಣ ನಾಡಿನ ಮಕ್ಕಳು ಬಾವಿ ಕಪ್ಪೆಗಳಾಗಿ ಕಲಬುರಗಿಯಲ್ಲೇ ಕೂಡುವುದು ಬೇಡ, ಸಮುದ್ರದ ಕಪ್ಪೆಗಳಾಗಿರಿ, ಅವಕಾಶ ಹೆಚ್ಚಾಗಿರುವ ಜಗತ್ತಿಗೆ ಧುಮುಕಿರಿ, ಬೆಂಗಳೂರಂತಹ ನಗರದಲ್ಲಿ ಕೌಶಲ್ಯವಂತರು, ಪರಿಶ್ರಮಿಗಳಿಗೆ ಅವಕಾಶಗಳು ವಿಫುಲವಾಗಿವೆ ಎಂದರು.
ಸಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಕೇಂದ್ರೀಯ ವಿವಿ ಸಹ ಪ್ರಾಧ್ಯಾಪಕ ಅಪ್ಪಗೇರೆ ಸೋಮಶೇಖರ ಮಾತನಾಡುತ್ತ ಸಂವಿಧಾನದ ಆಶಯ ಹಾಗೂ ವಿಶೇಷತೆ, ಅದರಿಂದ ದೇಶಕ್ಕಾಗಿರುವ, ದೇಶವಾಸಿಗಳಿಗೆ ಆಗಿರುವಂತಹ ಲಾಭಗಳನ್ನು ವಿವರಿಸುತ್ತ ಅಂಬೇಡ್ಕರ್‌ ಅವರ ಮಹಾನ್‌ ಕೊಡುಗೆಯೇ ಸಂವಿಧಾನವೆಂದು ವ್ಯಾಖ್ಯಾನಿಸಿದರು.
ಸರಕಾರಿ ಐಟಿಐ (ಪುರುಷ) ಪ್ರಾಚಾರ್ಯ ಮುರಲೀದರ ರತ್ನಗಿರಿ ಪ್ರಾಸ್ತಾವಿಕವಾಗಿ ಮಾತನಾಡುತ್ತ, ಬಂದ ಅವಕಾಶ ಸದುಪಯೋಗಕ್ಕೆ ಮಕ್ಕಳಿಗೆ ಕರೆ ನೀಡುತ್ತಲೆ ಎಚ್‌ಎಎಲ್‌ನಂತಹ ದೊಡ್ಡ ಕಂಪನಿ ನೀಡುತ್ತಿರುವ ಅವಕಾಶ ಸದುಪಯೋಗಕ್ಕೆ ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ವಿಭಾಗೀಯ ಜಂಟಿ ನಿರ್ದೇಶಕ ರವೀಂದ್ರನಾಥ ಬಾಳಿ ಮಾತನಾಡುತ್ತ ಕಲಬುರಗಿ ಮಕ್ಕಳು ಮುಗ್ದರು, ದೊಡ್ಡ ಕಂಪನಿಗಳಲ್ಲಿ ವಕಾಶ ಸಿಕ್ಕಲ್ಲಿ ನಿಭಾಯಿಸುವ ತಾಕತ್ತು ಹಾಗೂ ಜಾಣತನ ಹೊಂದಿದ್ದಾರೆಂದು ಹೇಳುತ್ತ ಎಚ್‌ಎಎಲ್‌ಗೆ ಧನ್ಯವಾದ ತಿಳಿಸಿದರು.
ಎಚ್‌ಎಲ್‌ನ ಹಿರಿಯ ಮುಖ್ಯ ಬೋಧಕ ಕೆಬಿ ಶಿವರಾಮ, ಮುಖ್ಯ ಬೋಧಕ ಸಿಆರ್‌ ಸಾಹು, ಸರಕಾರಿ ಐಟಿಐ (ಮಹಿಳೆ) ಪ್ರಾಚಾರ್ಯರಾದ ರುಬಿನಾ ಪರ್ವಿನ್‌, ವಿಇಎಸ್‌ ಐಟಿಐನ ಶೀಕಲ್‌ ಅನ್ಸಾರಿ ಸೇರಿದಂತೆ ಐಟಿಐ ಕಾಲೇಜುಗಳ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಲಬುರಗಿ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ನಡೆದ ಅಪ್ರೆಂಟಿಷಿಪ್ ಮೇಳದ ಅರಿವು ನೆರವು ಕಾರ್ಯಾಗಾರದಲ್ಲಿ ಸಾವಿರಕ್ಕೂ ಅಧಿಕ ಶಿಶುಕ್ಷುಗಳು ಪಾಲ್ಗೊಂಡು ಲಾಭ ಪಡೆದರು.