ಲಿಟಲ್ ಲ್ಯಾಂಪ್ಸ್ ಪ್ಲೇ ಸ್ಕೂಲ್‍ನಲ್ಲಿ ಗುರುಪೂರ್ಣಿಮಾ ಆಚರಣೆ
ಕಲಬುರಗಿ,ಜು.22-ಇಲ್ಲಿನ ಜೆ.ಆರ್.ನಗರದ ಲಿಟಲ್ ಲ್ಯಾಂಪ್ಸ್ ಪ್ಲೇ ಸ್ಕೂಲ್‍ನಲ್ಲಿ ಸಿಬ್ಬಂದಿ ವರ್ಗ ಮತ್ತು ಪುಟಾಣಿ ಮಕ್ಕಳೊಂದಿಗೆ ಗುರು “ವೇದವ್ಯಾಸರ ” ಜನ್ಮ ದಿನವನ್ನು ಗುರುಪೂರ್ಣಿಮಾ ದಿನವನ್ನಾಗಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ ಅಧ್ಯಕ್ಷರಾದ ರಾಜೇಶ್ವರಿ.ಎನ್.ಮುಲಗೆ ವೇದವ್ಯಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಪೂಜೆಯನ್ನು ಮಾಡಿ ಮಾತನಾಡಿ, ಗುರುಪೂರ್ಣಿಮಾ ಭಾರತದ ಪ್ರಸಿದ್ಧ ಹಬ್ಬವಾಗಿದೆ. ನಮ್ಮ ಜೀವನದಲ್ಲಿ ಗುರುವಿಗೆ ಬಹಳ ಮಹತ್ವದ ಸ್ಥಾನವಿದೆ. ಗುರುವಿಲ್ಲದ ಬದುಕಿಗೆ ಗೊತ್ತು ಗುರಿಯೇ ಇರಲ್ಲ. ಮುಂದೆ ಗುರಿ ಹಿಂದೆ ಗುರು ಇರುವ ವ್ಯಕ್ತಿ ಮಹಾ ಸಾಧಕನಾಗುತ್ತಾನೆ, ಆ ಗುರುವಿಗೆ ಗೌರವ ಸಮರ್ಪಿಸುವ ದಿನವೇ
ಗುರು ಪೂರ್ಣಿಮಾ. ಗುರುಪೂರ್ಣಿಮಾ ಎಂಬುದು ಗುರು ವೇದ ವ್ಯಾಸರನ್ನು ಸ್ಮರಿಸುವ ದಿನವಾಗಿದೆ. ಪ್ರತಿ ವರ್ಷ ಆಷಾಢ ಮಾಸದ ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಹಿಂದೂ ಧರ್ಮದ ಪ್ರಕಾರ ಗುರು ವೇದವ್ಯಾಸರು ವೇದಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವೇದ ಎಂಬ ಹೆಸರಿನಲ್ಲಿ ಬೋಧಿಸಿದರು. ಪ್ರತಿಯೊಬ್ಬರ ಬದುಕಿನಲ್ಲಿ ತಾಯಿಯೇ ಮೊದಲ ಗುರು ಎಂದರೆ ಕೇವಲ ಶಿಕ್ಷಕರಷ್ಟೇ ಅಲ್ಲ ಜೀವನದಲ್ಲಿ ಸರಿಯಾದ ಮಾರ್ಗದರ್ಶನ ತೋರುವ ಪ್ರತಿಯೊಬ್ಬರು ಗುರುಗಳೇ, ಇಂತಹ ಎಲ್ಲಾ ಗುರು ವೃಂದವನ್ನು ಸ್ಮರಿಸಲೇಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕಿರಾದ ಶ್ವೇತಾ, ಹಾಗೂ ಸಿಬ್ಬಂದಿ ವರ್ಗ ಮತ್ತು ಪುಟಾಣಿ ಮಕ್ಕಳು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಮಕ್ಕಳಾದ ಯುವನ್, ವಿವೇಕ್,ಅಭಿನವ್, ಬಸವರಾಜ್, ಸಂಕೇತ್, ಪ್ರಸನ್ನ, ನಿಶಾಂತ್, ಸೈಯದ್ ರವರು ಏಕಲವ್ಯ ಮತ್ತು ದ್ರೋಣಾಚಾರ್ಯ ನಾಟಕವನ್ನು ವೇಷ ಭೂಷಣದೊಂದಿಗೆ ಪ್ರದರ್ಶಿಸಿದರು.