ಗಾಂಧೀಜಿ- ಅಂಬೇಡ್ಕರ್ ಗೆ ಅವಮಾನ ಮಾಡಿದ ಅಧಿಕಾರಿಗಳ ಮೇಲೆ‌ಕ್ರಮಕ್ಕೆ ಆಗ್ರಹ
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೨೨; ಹೊನ್ನಾಳಿ ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಪಂಚಾಯ್ತಿಗಳಲ್ಲಿ ರಾಷ್ಟ್ರೀಯ ನಾಯಕರುಗಳಾದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿಯವರ ಭಾವಚಿತ್ರಗಳಿಗೆ ಅವಮಾನ ಮಾಡಿರುವುದನ್ನು ಖಂಡಿಸಿ ಹಾಗೂ ಅಧಿಕಾರಿಗಳನ್ನು ಅಮಾನತು ಗೊಳಿಸಲು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ನಂತರ ಮನವಿ ಸಲ್ಲಿಸಿದರು. ಈ ವೇಳೆ ಸಮಿತಿಯ ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ್ ಮಾತನಾಡಿ ಸ್ವಾತಂತ್ರ್ಯಕ್ಕಾಗಿ ಜೀವವನ್ನೇ ಪಣಕ್ಕಿಟ್ಟು ಹೋರಾಟ ಮಾಡಿದ ಮಹಾತ್ಮ ಗಾಂಧೀಜಿಯವರು ಹಾಗೂ ಮಹಾಮೇಧಾವಿ  ಡಾ. ಬಿ.ಆರ್. ಅಂಬೇಡ್ಕರ್  ಭಾವಚಿತ್ರಕ್ಕೆ ಉದ್ದೇಶ ಪೂರ್ವಕವಾಗಿ ಘೋರ ಅನ್ಯಾಯವೆಸಗಿದ, ಅವಮಾನ ಮಾಡಿರುವ ಹೊನ್ನಾಳಿ ತಾಲ್ಲೂಕಿನ ಸಾಸ್ವೆಹಳ್ಳಿ ಹೋಬಳಿ ಸರ್ಕಲ್‌ನ ಹಾಗೂ ಕುಂದೂರು ಸರ್ಕಲ್‌ನ ಕೆಲವು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು 2024ರ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಅವಧಿಯಲ್ಲಿ ಅವಮಾನ ಮಾಡಿರುವುದು ಖಂಡನೀಯ ಎಂದರು.ಸರ್ಕಾರದ ಸುತ್ತೋಲೆಯಲ್ಲಿ ಗೋಡೆಕಡೆ ಮುಖ ಮಾಡಿ ಮತ್ತು ಟೇಬಲ್ ಮೇಲೆ ಸಜ್ಜೆಯ ಮೇಲೆ ಅವರೆಲ್ಲರ ಭಾವಚಿತ್ರವನ್ನು ದಬಾ ಹಾಕಿರಬೇಕು ಅಂತಾ ಚುನಾವಣಾ ಆಯುಕ್ತರ ಸುತ್ತೋಲೆಯಲ್ಲಿ ಇದ್ದರೆ, ನಮ್ಮ ಸಹಕಾರವೂ ಇರುತ್ತದೆ. ಆದರೆ ಈ ಎರೆಡು ಭಾವಚಿತ್ರವನ್ನು ಹೊರತುಪಡಿಸಿ ಇನ್ನುಳಿದ ರಾಜಕೀಯ ಗಣ್ಯರ ಭಾವಚಿತ್ರಗಳನ್ನು ಮಾತ್ರ ದಬಾಕಿರಬೇಕು ಅಥವಾ ಗೋಡೆ ಕಡೆ ಮುಖಮಾಡಿ ಇಟ್ಟಿರಬೇಕೆಂದು ಸರ್ಕಾರದ ಸುತ್ತೋಲೆಯಲ್ಲಿದ್ದರೆ ಇದು ಅತ್ಯಂತ ದೇಶ ದ್ರೋಹದ ಪ್ರಕರಣವಾಗಿದೆ ಕೂಡಲೇ ಈ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು.ಈ ಬಗ್ಗೆ  ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾದ ಶ್ರೀಮತಿ ಸುಮ ಅವರಿಗೆ ಕ್ರಮ ಜರುಗಿಸಲು ಮನವಿ ನೀಡಿದರೂ ಯಾವುದೇ ಕ್ರಮ ಕೈಗೊಳ್ಳದೆ ಕರ್ತವ್ಯ ಲೋಪವೆಸಗಿದ್ದಾರೆ. ಆದ್ದರಿಂದ ಇವರನ್ನು ಸೇವೆಯಿಂದ ವಜಾ ಗೊಳಿಸಿ ಅಮಾನತ್ತು ಮಾಡಬೇಕೆಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ವಿಜಯಲಕ್ಷ್ಮಿ ಕೆ, ಮಹಾಂತೇಶ್ ಹಾಲುವರ್ತಿ, ಹನುಮಂತಪ್ಪ ಗುಮ್ಮನೂರು,  ಸಮಿತಿ ಖಾಲಿದ್ ಅಲಿ, ಪ್ರದೀಪ್‌, ತಿಪ್ಪೇಶ್‌ ತಿಮ್ಮೇನಹಳ್ಳಿ,  ಮಂಜುನಾಥ್ ಆರ್, ದೊಡ್ಡಪ್ಪ ಆವರಗೊಳ್ಳ‌ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.