ಪಂಚಾಯತ್ ರಾಜ್ ಇಲಾಖೆ‌ ನೌಕರರ ಪ್ರತಿಭಟನೆ:ಕೆಣಕಿದ ಬಿಜೆಪಿಗೆ ಬಿಸಿ ಮುಟ್ಟಿಸಿದ ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ:ಅ.05:ಪಂಚಾಯತ್ ರಾಜ್ ಇಲಾಖೆ‌ಯ ನೌಕರರ ಪ್ರತಿಭಟನೆಯ ವಿಷಯದಲ್ಲಿ ತಮ್ಮನ್ನು ಕೆಣಕಿದ ಬಿಜೆಪಿಗರಿಗೆ ಸರಿಯಾಗಿ ಬಿಸಿ ಮುಟ್ಟಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಇಲಾಖೆಯಲ್ಲಿ ತಾವು ಕೈಗೊಂಡ ಸುಧಾರಣೆಗಳ ಪಟ್ಟಿಯನ್ನು ಬಿಜೆಪಿಗೆ ನೀಡಿದ್ದಾರೆ.
ಪಂಚಾಯತ್ ರಾಜ್ ಇಲಾಖೆಯ ನೌಕರರ ಪ್ರತಿಭಟನೆಯ ಕುರಿತಾದ ಪತ್ರಿಕೆಯ ವರದಿಯನ್ನು ಟ್ವಿಟ್ ಗೆ ಅಂಟಿಸಿ ‘ ಎಲ್ಲಿ ಅಡಗಿದ್ದೀರಿ ಖರ್ಗೆಯವರೇ, ನೌಕರರ‌ ಗೋಳು ಕೇಳುವವರು ಯಾರು ‘ ? ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿತ್ತು. ಬಿಜೆಪಿಯ ಟ್ವಿಟ್ ಗೆ ಸಮರ್ಪಕ ಉತ್ತರ ನೀಡಿದ ಪ್ರಿಯಾಂಕ್ ಖರ್ಗೆ ತಮ್ಮ ಅವಧಿಯಲ್ಲಿ ಆದ ಕೆಲಸಗಳನ್ನು ಪಟ್ಟಿ ನೀಡಿ ಅವರ ಅವಧಿಯಲ್ಲಿ ನಡೆದ ವಿಷಯಗಳನ್ನು ಪ್ರಸ್ತಾಪಿಸಿ ಚೆಂಡನ್ನು‌ ವಾಪಸ್ ಅವರ ಅಂಗಳಕ್ಕೆ ಎಸೆದಿದ್ದಾರೆ.
” ಪ್ರಶ್ನೆ ಕೇಳಿದರೆ ‘ಓ ಮೈ ಗಾಡ್’ ಎಂದು ಹೆದರುವುದಕ್ಕೆ, ಎಲ್ಲಿಯೋ ಹೋಗಿ ಅಡಗಿಕೊಳ್ಳುವುದಕ್ಕೆ ನಾನು ನಿಮ್ಮ ಸ್ವಯಂ ಘೋಷಿತ ವಿಶ್ವಗುರು ಮೋದಿಯಲ್ಲ!
ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವನಾಗಿ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ತಂದಿದ್ದೇನೆ ಮತ್ತು ಗ್ರಂಥಪಾಲಕರ ಬಹು ವರ್ಷಗಳ ಬೇಡಿಕೆಯಂತೆ ವೇತನವನ್ನು ಸಹ ಏರಿಸಲಾಗಿದೆ. ಗ್ರಾಮೀಣ ಗ್ರಂಥಾಲಗಳನ್ನು ಅರಿವು ಕೇಂದ್ರಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ.
ಈಗಾಗಲೇ ಗ್ರಾಮಪಂಚಾಯತಿ ನೌಕರರು ಮತ್ತು ಸಿಬ್ಬಂದಿಗಳ ಬೇಡಿಕೆಗಳನ್ನು ಈಡೇರಿಸಲು ನಾವು ಕಳೆದ ಒಂದು ವರ್ಷದಿಂದ ಮಾತುಕತೆ ನಡೆಸುತ್ತಲೇ ಇದ್ದೇವೆ. ಹಲವು ಸಂಘಟನೆಗಳ ಜೊತೆಯಲ್ಲಿ ಚರ್ಚಿಸಿದ್ದೇವೆ. ನಿಮ್ಮ ಸರ್ಕಾರದ ಅವಧಿಯಲ್ಲಿ ಆಗಿರುವ ತಪ್ಪುಗಳು, ಲೋಪಗಳನ್ನು ಇನ್ನೂ ಸಹ ಸರಿಪಡಿಸುತ್ತಿದ್ದೇನೆ.
ಈಗಾಗಲೇ ಗ್ರಾಮ ಪಂಚಾಯತಿಯ ನೌಕರರ
ನಲವತ್ತು ಬೇಡಿಕೆಗಳಲ್ಲಿ ಹಲವು ಬೇಡಿಕೆಗಳನ್ನು ಈಡೇರಿಸಿದ್ದೇವೆ. ಕೆಲವು ಬೇಡಿಕೆಗಳನ್ನು ಈಡೇರಿಸಲು ಕಾನೂನಿನಲ್ಲಿ ಅವಕಾಶವಿಲ್ಲದಿರುವುದರಿಂದ ಪರಿಶೀಲನೆ ನಡೆಸಲಾಗುತ್ತಿದೆ. ಕೆಲ ಬೇಡಿಕೆ ಈಡೇರಿಸಲು ನೀತಿ ನಿರೂಪಣೆಯಾಗಿ, ತಿದ್ದುಪಡಿಯನ್ನು ಸಹ ತರಬೇಕಾಗಿದೆ. ಅದಕ್ಕಾಗಿ ನಮ್ಮ ಸರ್ಕಾರವು ಶೀಘ್ರದಲ್ಲಿಯೇ ನೌಕರರೊಂದಿಗೆ ಸಭೆ ನಡೆಸಲಿದೆ.
ಆದರೆ, ನಿಮ್ಮ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರೇ ರಾಜೀನಾಮೆ ಕೊಟ್ಟಿದ್ದನ್ನು ಮರೆತಿರಾ, ಯಾಕಾಗಿ ರಾಜೀನಾಮೆ ಕೊಟ್ಟಿದ್ದರು ಎನ್ನುವುದು ನೆನಪಿದೆಯೇ.
ಒಂದಿಡೀ ವರ್ಷ ರೈತರು ಬೀದಿಯಲ್ಲಿ ಕುಳಿತು, 700 ರೈತರು ಪ್ರಾಣ ಬಿಟ್ಟರೂ ಕಣ್ಣೆತ್ತಿ ನೋಡದವರು ಯಾರು?
ಕುಸ್ತಿಪಟುಗಳು ತಿಂಗಳುಗಟ್ಟಲೆ ಪ್ರತಿಭಟಿಸಿದ್ದಾಗ ತಿರುಗಿ ನೋಡದವರು ಯಾರು?
ನಿಮ್ಮ ಅವಧಿಯಲ್ಲಿ ರಾಜ್ಯದ ಸಾರಿಗೆ ನೌಕರರು ಪ್ರತಿಭಟಿಸಿದಾಗ ನಿರ್ಲಕ್ಷಿಸಿದವರು ಯಾರು?
ಅಂಗನವಾಡಿ, ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಮಾಡಿದ್ದಾಗ ಅವರತ್ತ ಸುಳಿಯದೆ ತಲೆ ತಪ್ಪಿಸಿ ಓಡಾಡಿದವರು ನೀವೇ ಅಲ್ಲವೇ?
ಬಿಜೆಪಿಗರೇ ನೆನಪಿರಲಿ ‘ನಮ್ಮದು ಆಳುವ ಸರ್ಕಾರವಲ್ಲ, ಆಲಿಸುವ ಸರ್ಕಾರ, ಸ್ಪಂದಿಸುವ ಸರ್ಕಾರ‘ ನಿಮ್ಮ ರೆಬಲ್ ನಾಯಕರು ವಿಜಯೇಂದ್ರ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯನ್ನು ನಿಭಾಯಿಸುವ ಕುರಿತು ತಲೆ ಕೆಡಿಸಿಕೊಳ್ಳಿ. ನಿಮ್ಮ ತಟ್ಟೆಯಲ್ಲಿರುವ ಹೆಗ್ಗಣದ ರಾಶಿಯನ್ನು ಕ್ಲಿಯರ್ ಮಾಡಿಕೊಳ್ಳಿ! ” ಎಂದು ಪ್ರಿಯಾಂಕ್ ಮಾರುತ್ತರ ನೀಡಿದ್ದಾರೆ.