ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುವೆ: ಸಂಸದ ಸುನೀಲ್ ಬೋಸ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.19- ಕ್ಷೇತ್ರ ಸವಾರ್ಂಗೀಣ ಅಭಿವೃದ್ದಿ ಹಾಗೂ ಕೇಂದ್ರದ ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ನೂತನ ಸಂಸದ ಸುನೀಲ್ ಬೋಸ್ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಚಾ.ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಶಾಸಕರಾದ ಸಿ. ಪುಟ್ಟರಂಗಶೆಟ್ಟರು ಹಾಗೂ ಜಿಲ್ಲೆಯ ಮುಖಂಡರು, ಕಾರ್ಯಕರ್ತರ ಶ್ರಮದಿಂದ ಕ್ಷೇತ್ರದಲ್ಲಿ 25 ಸಾವಿರಕ್ಕು ಹೆಚ್ಚು ಬಹುಮತದಿಂದ ನನ್ನನ್ನು ಗೆಲುವು ಸಾಧಿಸಿದ್ದೇನೆ. ನಿಮ್ಮೆಲ್ಲರ ನಿರೀಕ್ಷೆಗೆ ತಕ್ಕಂತೆ ಕ್ಷೇತ್ರದ ಅಭಿವೃದ್ದಿ ಪಡಿಸುವ ಜವಾಬ್ದಾರಿ ನಮ್ಮದಾಗಿದೆ. ಸ್ಥಳೀಯ ಶಾಸಕರು ಹಾಗೂ ಮುಖಂಡರ ಸಲಹೆ ಸೂಚನೆಗಳನ್ನು ಪಡೆದು ಕ್ಷೇತ್ರದ ಅಭಿವೃದ್ದಿ ಮಾಡುವುದಾಗಿ ತಿಳಿಸಿದರು.
ನನ್ನ ಬಗ್ಗೆ ನಿರಂತರವಾಗಿ ಮಾಡಿದ ಅಪಪ್ರಚಾರದಿಂದಾಗಿ ನಾನು ನಾಯಕನಾಗಿ ಬೆಳೆಯಲು ಸಾಧ್ಯವಾಯಿತು. ನಮ್ಮ ತಂದೆಯವರ ಕ್ಷೇತ್ರದ ಜವಾಬ್ದಾರಿಯನ್ನು ನಿಭಾಯಿಸುವ ನನಗೆ 8 ವಿಧಾನಸಭಾ ಕ್ಷೇತ್ರಗಳ ಜವಾಬ್ದಾರಿಯನ್ನು ನಿರ್ವಹಿಸುವುದು ಕಷ್ಟವೇನಲ್ಲ. ನಿಮ್ಮೆಲ್ಲರ ಸಹಕಾರದಿಂದ ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡೋಣ. ಮಾಜಿ ಸಂಸದರಾದ ಆರ್. ಧ್ರುವನಾರಾಯಣ್, ವಿ. ಶ್ರೀನಿವಾಸಪ್ರಸಾದ್ ಅವರ ಹಾದಿಯಲ್ಲಿ ನಡೆಯುವ ಜೊತೆಗೆ ಅವರ ಕೈಗೊಂಡಿರುವ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುವುದು, ಕ್ಷೇತ್ರದ ಮತದಾರರ ಆಶೋತ್ತರಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು.
ಕೇಂದ್ರದ ಬಜೆಟ್‍ನಲ್ಲಿ ಚಾಮರಾಜನಗರಕ್ಕೆ ಹೊಸ ರೈಲ್ವೆ ಯೋಜನೆಯನ್ನು ಅನುಷ್ಠಾನಗೊಳ್ಳುವ ಆಶಾಭಾವನೆಯನ್ನು ವ್ಯಕ್ತಪಡಿಸಿದ ಅವರು, ಈಗಾಗಲೇ ಕೇಂದ್ರ ರೈಲ್ವೆ ಸಚಿವರಾದ ವಿ. ಸೋಮಣ್ಣ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇನೆ. ಅವರು ಸಹ ಉತ್ಸಾಹಕರಾಗಿದ್ದಾರೆ. ಕೃಷಿ ಸಚಿವರಾದ ಕುಮಾರಸ್ವಾಮಿ ಅವರು ಸಹ ಕ್ಷೇತ್ರದ ಯಾವುದೇ ಕೆಲಸಗಳಿದ್ದರೆ ನೇರವಾಗಿ ಬರುವಂತೆ ಹೇಳಿದ್ದಾರೆ. ಎಲ್ಲರು ಸಹ ಪರಿಚರಿತರಾಗಿದ್ದು, ದೆಹಲಿ ಮಟ್ಟದಲ್ಲಿ ಹೆಚ್ಚು ಓಡಾಟ ಮಾಡಿ ಕ್ಷೇತ್ರಕ್ಕೆ ಹೊಸ ಯೋಜನೆಯನ್ನು ತರುವುದು ನಮ್ಮ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಸಂಸದರ ಕಚೇರಿಯನ್ನು ಆರಂಭಿಸಿ, ಸಹಾಯಕರನ್ನು ನೇಮಕ ಮಾಡಿ, ಅವರಿಗೆ ಹೆಚ್ಚಿನ ಕೆಲಸ ಕಾರ್ಯಗಳನ್ನು ನೀಡಿ, ಜನರು ನೇರವಾಗಿ ಕಚೇರಿ ಹೋಗುವುದು ಮತ್ತು ನಮ್ಮ ಪ್ರವಾಸ ದಿನಾಂಕಗಳನ್ನು ತಿಳಿದು ತಮ್ಮ ಸಮಸ್ಯೆಗಳ ಕುರಿತು ತಿಳಿಸಿದರೆ ಅದನ್ನು ಬಗೆಹರಿಸುವುದಾಗಿ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿ, ನೂತನ ಸಂಸದರಾಗಿರುವ ಸುನೀಲ್ ಬೋಸ್ ಅವರ ಮೇಲೆ ಬಹಳಷ್ಟು ನಿರೀಕ್ಷೆಯನ್ನು ಜನರು ಇಟ್ಟುಕೊಂಡಿದ್ದಾರೆ. ಸಂಸದರಾಗಿದ್ದ ದಿ. ಆರ್. ದ್ರುವನಾರಾಯಣ್ ಅವರು ಎಂಟು ಕ್ಷೇತ್ರಗಳಲ್ಲಿ ಒಡನಾಟ ಹೊಂದಿ, ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿದ್ದು. ಕ್ಷೇತ್ರದ ಅಭಿವೃದ್ದಿ ಜೊತೆಗೆ ಪಕ್ಷದ ಸಂಘಟನೆಗೂ ಸಹ ಒತ್ತು ನೀಡುತ್ತಿದ್ದರು.
ಸುನೀಲ್ ಬೋಸ್ ಯುವಕರಾಗಿದ್ದು ಅವರಂತೆ ಕ್ಷೇತ್ರದಲ್ಲಿ ಜನರ ವಿಶ್ವಾಸವನ್ನು ಗಳಿಸಿ, ಮತದಾರರ ನೇರ ಸಂಪರ್ಕವನ್ನು ಪಡೆದುಕೊಳ್ಳಬೇಕು. ಅವರ ದುಃಖ ದುಮ್ಮಾನಗಳಿಗೆ ಸ್ಪಂದಿಸಬೇಕು. ಪೋನ್ ಕರೆಗಳನ್ನು ಸ್ವೀಕರಿಸುವ ಹಾಗೂ ವಾಪಸ್ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್ ಪ್ರಧಾನ ಕಾರ್ಯದರ್ಶಿಗಳಾದ ಆರ್. ಮಹದೇವ್, ಚಿಕ್ಕಮಹದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹಮದ್ ಅಸ್ಗರ್, ಗುರುಸ್ವಾಮಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾರಾಜಶೇಕರ್ ಜತ್ತಿ, ಮುಖಂಡರಾದ ಲಕ್ಷ್ಮಿನಾರಾಯಣ್, ಸಿ.ಎ. ಮಹದೇವಶೆಟ್ಟಿ, ಎಪಿಎಂಸಿ ಅಧ್ಯಕ್ಷ ಸೋಮೇಶ್, ನಗರಸಭಾ ಸದಸ್ಯರಾದ ಚಿನ್ನಮ್ಮ, ಉಮ್ಮತ್ತೂರು ಭಾಗ್ಯ, ನಾಗರತ್ನ, ಗೌಡಹಳ್ಳಿ ರಾಜೇಶ್ ಮೊದಲಾದವರು ಇದ್ದರು.