ನೌಕರರ ಬಹು ದಿನಗಳ ಬೇಡಿಕೆ ಈಡೇರಿಕೆ
ಬೀದರ್:ಜು.17: ರಾಜ್ಯ ಸರ್ಕಾರ ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಲು ನಿರ್ಣಯಿಸಿರುವುದರಿಂದ ರಾಜ್ಯ ಸರ್ಕಾರಿ ನೌಕರರ ಬಹು ದಿನಗಳ ಬೇಡಿಕೆ ಈಡೇರಿದೆ ಎಂದು ಲಿಂಗಾಯತ ನೌಕರರ ಸಂಘದ ರಾಜ್ಯ ಅಧ್ಯಕ್ಷ ಶಿವರಾಜ ಕಪಲಾಪುರೆ ತಿಳಿಸಿದ್ದಾರೆ.
ಆಯೋಗದ ಶಿಫಾರಸು ಜಾರಿಯಿಂದಾಗಿ ನೌಕರರ ವೇತನ ಹೆಚ್ಚಲಿದ್ದು, ಬೆಲೆ ಏರಿಕೆಯ ದಿನಮಾನಗಳಲ್ಲಿ ನೌಕರರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಏಳನೇ ವೇತನ ಆಯೋಗವು ನೌಕರರ ವೇತನದಲ್ಲಿ ಶೇ 27.5 ರಷ್ಟು ಏರಿಕೆಗೆ ಶಿಫಾರಸು ಮಾಡಿತ್ತು. ಹಿಂದಿನ ಸರ್ಕಾರ 2023ರ ಮಾರ್ಚನಲ್ಲಿ ಶೇಕಡ 17ರಷ್ಟು ಮಧ್ಯಂತರ ಪರಿಹಾರ ಪ್ರಕಟಿಸಿತ್ತು. ಇದೀಗ ಶೇ 10.5 ರಷ್ಟು ವೇತನ ಹೆಚ್ಚಲಿದೆ ಎಂದು ಹೇಳಿದ್ದಾರೆ.
ಆಯೋಗದ ಶಿಫಾರಸು ಜಾರಿಗೆ ನಿರ್ಣಯ ಕೈಗೊಂಡ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಸಂಪುಟದ ಎಲ್ಲ ಸದಸ್ಯರಿಗೂ ಅಭಿನಂದನೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.