ಅಂಜಲಿ ಕುಟುಂಬಕ್ಕೆ ನ್ಯಾಯ ಒದಗಿಸುವೆ: ಜಿ. ಪರಮೇಶ್ವರ
ಬೆಂಗಳೂರು:ಜು.17: ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಅಂಬಿಗೇರ ಕೊಲೆ ಪ್ರಕರಣವು ಎಸ್‍ಐಟಿ ತನಿಖೆ ಪ್ರಗತಿಯಲ್ಲಿದ್ದು, ಆ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಲು ಪ್ರಾಮಾಣಿಕವಾಗಿಪ್ರಯತ್ನಿಸುವೆ. ಅಲ್ಲದೆ ಆ ಕುಟುಂಬಕ್ಕೆ ವಾಸಕ್ಕೆ ಆಶ್ರಯ ಮನೆ ನಿರ್ಮಿಸಿಕೊಡುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಭರವಸೆ ನೀಡಿದರು.
ವಿಧಾನಪರಿಷತ್‍ನಲ್ಲಿ ಮಂಗಳವಾರ ನಡೆದ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ನಿಯಮ 72ರಡಿ ಪ್ರಸ್ತಾಪಿಸಿರುವ ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಮೋಹನ ಅಂಬಿಗೇರ ಯುವತಿ ಕೊಲೆ ಪ್ರಕರಣವನ್ನು ಸಚಿವರ ಗಮನ ಸೆಳೆದರು. ಸಚಿವರು ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದಲ್ಲದೆ, ಪರಿಹಾರ ಕೊಡಿಸುವ ಬಗ್ಗೆ ಭರವಸೆ ನೀಡಿರುತ್ತಾರೆ. ಹೀಗಾಗಿ ನುಡಿದಂತೆ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ನಾನು ಒಳಗೊಂಡಂತೆ ಸಚಿವರು, ಶಾಸಕರು ಸೇರಿ ಹಲವರು ವೈಯಕ್ತಿಕವಾಗಿ ಪರಿಹಾರ ನೀಡಿದ್ದಾರೆ. ಆದರೆ ಸರ್ಕಾರದಿಂದ ನಿಶ್ಚಿತ ರೂಪದ ಪರಿಹಾರ ಸಿಕ್ಕಿಲ್ಲ. ಆ ಕುಟುಂಬ ಅತ್ಯಂತ ಕಡುಬಡತನದಿಂದ ಇದೆ. ವಯೋವೃದ್ಧೆ ಮೂವರು ಯುವತಿಯರನ್ನು ಬೆಳೆಸಿಕೊಂಡು ಬರುತ್ತಿದ್ದರು. ಈಗ ಆ ಕುಟುಂಬ ಬೀದಿಗೆ ಬಿದ್ದಂತಾಗಿದೆ ಎಂದು ಸದನದ ಗಮನಕ್ಕೆ ತಂದರು.
ಇದಕ್ಕೆ ಲಿಖಿತವಾಗಿ ಉತ್ತರಿಸಿದ ಸಚಿವ ಪರಮೇಶ್ವರ, ಪ್ರಕರಣದ ತ್ವರಿತ ವಿಚಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ವೈಜ್ಞಾನಿಕವಾಗಿ ಸಾಕ್ಷಾಧಾರಗಳನ್ನು ಸಂಗ್ರಹಿಸಿ ನಿಗದಿತ ಅವಧಿಯೊಳಗೆ ತನಿಖೆ ಪೂರ್ಣಗೊಳಿಸಿ, ಮೃತ ಅಂಜಲಿ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸಿಕೊಡುವುದಾಗಿ ಪುನರುಚ್ಚರಿಸಿದರು.