ಗರ್ಭಕಂಠ ಕ್ಯಾನ್ಸರ್: 60 ಹೆಣ್ಣುಮಕ್ಕಳಿಗೆ ಲಸಿಕೆ
ಬೀದರ:ಜು.17: ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ಇಲ್ಲಿಯ ಕೃಷ್ಣಮೂರ್ತಿ ಆಸ್ಪತ್ರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಿಬಿರದಲ್ಲಿ 9 ರಿಂದ 26 ವರ್ಷದ ಒಳಗಿನ 60 ಹೆಣ್ಣುಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್ ತಡೆ ಲಸಿಕೆ ನೀಡಲಾಯಿತು.
ಡಾ. ನಾಗೇಶ್ವರರಾವ್ ಲಸಿಕೆ ನೀಡಿದರು.
ಶಿಬಿರಕ್ಕೆ ಚಾಲನೆ ನೀಡಿದ ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3160 ಗವರ್ನರ್ ಡಾ. ಸಾಧುಗೋಪಾಲಕೃಷ್ಣ ಮಾತನಾಡಿ, ಗರ್ಭಕಂಠದ ಕ್ಯಾನ್ಸರ್‍ನಿಂದಾಗಿ ಹದಿಹರೆಯದ ಅನೇಕ ಹೆಣ್ಣುಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಕ್ಲಬ್ ವತಿಯಿಂದ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ದಿಸೆಯಲ್ಲಿ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಆರತಿ ರಘು ಮಾತನಾಡಿ, ದೇಶದಲ್ಲಿ ಗರ್ಭಕಂಠ ಕ್ಯಾನ್ಸರ್‍ನಿಂದ ಪ್ರತಿ ದಿನ 200 ಹಾಗೂ ವರ್ಷದಲ್ಲಿ ಸರಾಸರಿ 80 ಸಾವಿರ ಹೆಣ್ಣುಮಕ್ಕಳು ಸಾವಿಗೀಡಾಗುತ್ತಿದ್ದಾರೆ. ಇದನ್ನು ತಡೆಯಲು 9 ರಿಂದ 15 ವರ್ಷದ ಒಳಗಿನ ಹೆಣ್ಣುಮಕ್ಕಳಿಗೆ ಎರಡು ಡೋಸ್ ಹಾಗೂ 16 ರಿಂದ 26 ವರ್ಷದ ಒಳಗಿನ ಹೆಣ್ಣುಮಕ್ಕಳಿಗೆ ಮೂರು ಡೋಸ್ ಲಸಿಕೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕ್ಲಬ್ ಅಧ್ಯಕ್ಷ ಶಿವಕುಮಾರ ಪಾಖಾಲ್ ಮಾತನಾಡಿ, ಮಾರಕ ಗರ್ಭಕಂಠದ ಕ್ಯಾನ್ಸರ್‍ನಿಂದ ಹೆಣ್ಣುಮಕ್ಕಳ ಜೀವ ಉಳಿಸಲು ಜನಜಾಗೃತಿ ಮೂಡಿಸಲಾಗುತ್ತಿದೆ. ಲಸಿಕಾ ಶಿಬಿರಗಳನ್ನು ಸಂಘಟಿಸಲಾಗುತ್ತಿದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಮಹ್ಮಮದ್ ಗೌಸ್, ಉಪಾಧ್ಯಕ್ಷೆ ಲಕ್ಷ್ಮಿಬಾಯಿ ಹಂಗರಗಿ, ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಸೂರ್ಯಕಾಂತ ರಾಮಶೆಟ್ಟಿ, ಡಾ. ರಘು ಕೃಷ್ಣಮೂರ್ತಿ, ಬಸವರಾಜ ಧನ್ನೂರ, ಹಾವಶೆಟ್ಟಿ ಪಾಟೀಲ, ರವೀಂದ್ರ ಮೂಲಗೆ, ಶಿವಕುಮಾರ ಯಲಾಲ್, ಕ್ಲಬ್ ಕಾರ್ಯದರ್ಶಿ ಪ್ರಭು ತಟಪಟ್ಟಿ, ಡಾ. ಕಪಿಲ್ ಪಾಟೀಲ, ನಿತಿನ್ ಕರ್ಪೂರ, ರೂಪಾಲಿ ಕರ್ಪೂರ, ಡಾ. ಶ್ವೇತಾ ಮೇಗೂರ, ಡಾ. ರಿತೇಶ್ ಸುಲೆಗಾಂವ್, ಬಸವರಾಜ ಮಡಕಿ, ಸತೀಶ್ ಸ್ವಾಮಿ, ವೀರೇಶ ಖೇಳಗಿ, ಗಜಾನನ ಪೆÇೀಕಲವಾರ್, ಕಾಮಶೆಟ್ಟಿ ಚಿಕ್ಕಬಸೆ, ರಾಜಕುಮಾರ ಅಳ್ಳೆ, ಡಾ. ಲೋಕೇಶ್ ಹಿರೇಮಠ ಇದ್ದರು.
ಲಸಿಕೆ ಪಡೆದವರಿಗೆ ಕ್ಲಬ್‍ನಿಂದ ಹಲಸಿನ ಹಣ್ಣಿನ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು.