ಮೈದುಂಬಿ ಧುಮ್ಮಿಕ್ಕುತ್ತಿರುವ ಭರಚುಕ್ಕಿ ಜಲಪಾತ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.17- ಕಾವೇರಿ ಕೊಳ್ಳದ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗುತ್ತಿರುವುದರಿಂದ ಕಬಿನಿ ಜಲಾಶಯ ಭರ್ತಿಯಾಗಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ. ಇದರಿಂದ ಭರಚುಕ್ಕಿ ಜಲಪಾತ ಮೈದುಂಬಿ ಧುಮ್ಮಿಕ್ಕುತ್ತಿದೆ.
ಸೋಮವಾರದಿಂದ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತ ದುಮ್ಮಿಕ್ಕುವ ದೃಶ್ಯ ವೈಭವವು ನೋಡುಗರನ್ನು ರೋಮಾಂಚನಗೊಳಿಸುತ್ತಿದೆ. ಕಳೆದ ವರ್ಷ ಮಳೆಯಾಗದೇ ಬರದಿಂದ ಜಲಪಾತ ತನ್ನ ಜಲಸಿರಿ ಕಳೆದುಕೊಂಡಿತ್ತು. ಆದರೆ, ಈ ಬಾರಿ ಉತ್ತಮ ಮಳೆ ಮತ್ತು ಕಾವೇರಿ ಹೊರಹರಿವು ಹೆಚ್ಚಳವಾದ ಹಿನ್ನೆಲೆ ಮತ್ತೆ ಜಲ ವೈಭವ ಸೃಷ್ಟಿಯಾಗಿದೆ.
ಕಬಿನಿಯಿಂದ 20 ಸಾವಿರ ಕ್ಯೂಸೆಕ್ ಹೊರ ಹರಿವು ಇದ್ದು, ಕಾವೇರಿ ನದಿ ಪಾತ್ರದ ಜನರಲ್ಲಿ ಪ್ರವಾಹದ ಆತಂಕವೂ ಎದುರಾಗಿದೆ. ಕಾವೇರಿ ನದಿ ಪಾತ್ರದ ಕೊಳ್ಳೇಗಾಲ ತಾಲೂಕಿನ ಹಳೇ ಹಂಪಾಪುರ, ಹಳೇ ಅಣಗಳ್ಳಿ, ಮುಳ್ಳೂರು, ದಾಸನಪುರ, ಸರಗೂರು ಗ್ರಾಮಗಳ ಕೃಷಿ ಭೂಮಿ, ಭಾಗಶಃ ಮನೆಗಳು ಮುಳುಗಡೆ ಭೀತಿ ಎದುರಾಗಿದೆ. ಕಾವೇರಿ ಹೊರಹರಿವು ಏರಿದಂತೆ ಈ ಗ್ರಾಮಗಳ ಜನರ ಆತಂಕವೂ ಹೆಚ್ಚಾಗುತ್ತಿದೆ.