ಅರಮನೆ ಅಂಗಳದಲ್ಲಿ ಮಿನಿ ಜಂಬೂ ಸವಾರಿ
ಸಂಜೆವಾಣಿ ನ್ಯೂಸ್
ಮೈಸೂರು:ಸೆ.28:- ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿರುವ ನಡುವೆಯೇ ಅರಮನೆ ಅಂಗಳದಲ್ಲಿ ಶುಕ್ರವಾರ ಮಿನಿ ಜಂಬೂ ಸವಾರಿ ನಡೆಯಿತು.
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತದ ವತಿಯಿಂದ ಪ್ರವಾಸೋದ್ಯಮ ಮತ್ತು ಶಾಂತಿ ಘೋಷವಾಕ್ಯದಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ, ವಿವಿಧ ಜಾನಪದ ಕಲಾತಂಡಗಳು ಅರಮನೆ ಮುಂಭಾಗದಿಂದ ಹೈ ವೇ ವೃತ್ತದವರೆಗೆ ಹೆಜ್ಜೆ ಹಾಕಿ ಮಿನಿ ಜಂಬೂ ಸವಾರಿ ನೆನಪಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಾರ್ವಜನಿಕರು ಸಂಭ್ರಮದಿಂದ ಕಣ್ತುಂಬಿಕೊಂಡರು.
ಸಿದ್ದರಾಮಯ್ಯ ಪ್ರವಾಸೋದ್ಯಮ ಇಲಾಖೆಯ ಬಾವುಟ ಪ್ರದರ್ಶಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಇಲಾಖೆಯ ಹ್ಯಾಂಡ್‍ಬಿಲ್ ಮತ್ತು ಮೈಸೂರು ಪ್ರವಾಸೋದ್ಯಮ ಇಲಾಖೆಯ ನೂತನ ವೆಬ್‍ಸೈಟ್ ಕಾರ್ಯಾರಂಭಕ್ಕೆ ಹಸಿರು ನಿಶಾನೆ ತೋರಿದರು. ಬಿಳಿಬಣ್ಣದ ಬಲೂನ್‍ಗಳನ್ನು ಹಾರಿಬಿಟ್ಟರು.
ಬಳಿಕ ಗಜಪಡೆಯ ಧನಂಜಯ ಮೊದಲಿಗೆ ವೇದಿಕೆ ಬಳಿಗೆ ಆಗಮಿಸಿ, ಮುಖ್ಯಮಂತ್ರಿ ಹಾಗೂ ಅತಿಥಿಗಳಿಗೆ ಸೊಂಡಿಲನ್ನು ಎತ್ತಿ ನಮಸ್ಕಾರ ಮಾಡುವ ಮೂಲಕ ಗೌರವ ಸೂಚಿಸಿದ. ಇದಕ್ಕೆ ಪ್ರತಿಯಾಗಿ ಗಣ್ಯರು ಒಟ್ಟಾಗಿ ಕೈಮುಗಿದರು.
ಬಳಿಕ ಆನೆಗಳು ವೇದಿಕೆ ಬಳಿಗೆ ಬಂದು ನಮಿಸಿ ಹೋದವು. ಅಂತಿಮವಾಗಿ ಅಭಿಮನ್ಯು, ಅಕ್ಕ-ಪಕ್ಕದಲ್ಲಿ ಲಕ್ಷ್ಮೀ, ಹಿರಣ್ಯಾ ಆನೆಗಳು ಒಟ್ಟಾಗಿ ಬಂದು ಗಣ್ಯರಿಗೆ ಹೂವನ್ನು ಕೊಟ್ಟು ಆಶೀರ್ವಾದ ಮಾಡಿದವು.
ಬಳಿಕ ಕಲಾತಂಡಗಳು ಒಂದರ ಹಿಂದೆ ಒಂದು ಬಂದು ವೇದಿಕೆ ಬಳಿ ಕೆಲಕಾಲ ತಮ್ಮ ಕಲೆಯನ್ನು ಪ್ರದರ್ಶಿಸಿ ಮುಂದೆ ಸಾಗಿದವು. ತಮಟೆ, ನಗಾರಿ, ನಾದಸ್ವರ, ವೀರಗಾಸೆ, ಮಂಗಳೂರಿನ ಗೊಂಬೆ ಕುಣಿತ, ಗಾರುಡಿ ಗೊಂಬೆ, ಚಂಡೆ ಮೇಳ, ಕಂಸಾಳೆ, ಟಿಬೆಟಿಯನ್ ಕಲಾವಿದರ ತಂಡಗಳು ಪ್ರದರ್ಶನ ನೀಡಿದವು.
ಬುದ್ಧ-ಬಸವ-ಅಂಬೇಡ್ಕರ್-ಯೇಸು ಭಾವಚಿತ್ರಗಳನ್ನು ಹಿಡಿದುಕೊಂಡು ಸಾಗಿದ ಯುವ ಸಮೂಹ ಸರ್ವಧರ್ಮ ಸಮನ್ವಯ ಮಂತ್ರ ಸಾರಿತು. ವಿದ್ಯಾವಿಕಾಸ ಕಾಲೇಜು, ಸೆಂಟ್ ಫಿಲೋಮಿನಾ ಕಾಲೇಜು, ಮಹಾಜನ ಪಿಜಿ ಸೆಂಟರ್‍ನ ವಿದ್ಯಾರ್ಥಿಗಳು ದಿವಾನರ ಧಿರಿಸನ್ನು ಧರಿಸಿ ಪಥ ಸಂಚಲನ ನಡೆಸಿ ಗಮನ ಸೆಳೆದರು.
ಪ್ರವಾಸಿ ಮಾರ್ಗದರ್ಶಿ ಬಿಡುಗಡೆ
ಜಿಲ್ಲೆಯ ಪ್ರವಾಸಿ ತಾಣಗಳು, ಉತ್ಪನ್ನಗಳು, ಆಹಾರ ತಿನಿಸುಗಳು ಸೇರಿದಂತೆ ಜಿಲ್ಲೆಯ ವಿಶೇಷಗಳ ಮಾಹಿತಿ ನೀಡುವ ಪ್ರವಾಸಿ ಮಾರ್ಗದರ್ಶಿ ಮೆಗ್ನಿಫಿಸೆಂಟ್ ಮೈಸೂರು ಕಿರು ಹೊತ್ತಿಗೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು.
ಅಂಬಾವಿಲಾಸ ಅರಮನೆ, ಮೃಗಾಲಯ, ಚಾಮುಂಡೇಶ್ವರಿ ದೇವಾಲಯ, ಬೃಂದಾವನ, ಫಿಲೊಮಿನಾ ಚರ್ಚ್, ಸೋಮನಾಥಪುರ ಚನ್ನಕೇಶವ ದೇಗುಲ, ರೈಲ್ವೆ ವಸ್ತು ಸಂಗ್ರಹಾಲಯ, ಕಬಿನಿ ಹಿನ್ನೀರು ಅರಣ್ಯ ಸಫಾರಿ, ಬೈಲುಕುಪ್ಪೆ, ಚುಂಚನಕಟ್ಟೆ ಜಲಪಾತ, ನಂಜನಗೂಡು ಶ್ರೀಕಂಠೇಶ್ವರ ದೇವಾಲಯ, ಗೊಮ್ಮಟಗಿರಿ ಸ್ಥಳಗಳ ಮಾಹಿತಿ ಈ ಹೊತ್ತಿಗೆಯಲ್ಲಿ ಇದೆ. ಅಲ್ಲದೇ ಮೈಸೂರು ಇನ್‍ಲೇ ಕಲೆ, ಮೈಸೂರು ಪಾಕ್, ಮೈಸೂರು ಸಿಲ್‍ಕ್ ಸೀರೆ, ಮೈಸೂರು ಸಾಂಪ್ರದಾಯಿಕ ಪೇಂಟಿಂಗ್, ಮೈಸೂರು ಮಲ್ಲಿಗೆ, ಹನುಮಂತು ಪಲಾವ್ ಸೇರಿದಂತೆ ಇನ್ನು ಕೆಲವು ವಿಶಿಷ್ಠಗಳ ಛಾಯಾಚಿತ್ರಗಳನ್ನು ಈ ಹೊತ್ತಿಗೆ ಒಳಗೊಂಡಿದೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪಶುಸಂಗೋಪನೆ, ರೇಷ್ಮೆ ಸಚಿವ ಕೆ.ವೆಂಕಟೇಶ್, ಶಾಸಕರಾದ ತನ್ವೀರ್ ಸೇಠ್, ಜಿ.ಟಿ.ದೇವೇಗೌಡ, ಕೆ.ಹರೀಶ್‍ಗೌಡ, ಡಿ.ರವಿಶಂಕರ್, ಅನಿಲ್ ಚಿಕ್ಕಮಾದು, ದರ್ಶನ್ ಧ್ರುವನಾರಾಯಣ, ವಿಧಾನ ಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ, ಡಾ.ಡಿ.ತಿಮ್ಮಯ್ಯ, ಯತೀಂದ್ರ ಸಿದ್ದರಾಮಯ್ಯ, ಕೆ.ವಿವೇಕಾನಂದ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಸಿಎಫ್ ಮಾಲತಿ ಪ್ರಿಯಾ, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ, ಉಪ ನಿರ್ದೇಶಕ ರಾಜೇಂದ್ರ, ಸಹಾಯಕ ನಿರ್ದೇಶಕ ಪ್ರಭುಸ್ವಾಮಿ, ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ, ಆರ್‍ಎಫ್‍ಒ ಸಂತೋಷ್ ಹೂಗಾರ್ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಟಿ.ಎ.ನಾರಾಯಣಗೌಡ ಸೇರಿದಂತೆ ಹಲವರು ಹಾಜರಿದ್ದರು.