ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಗವಿಯಪ್ಪ ಚಾಲನೆ
ಸಂಜೆವಾಣಿ ವಾರ್ತೆ
ಹೊಸಪೇಟೆ ಜು15: ತಾಲೂಕಿನ ಗ್ರಾಮೀಣ ಭಾಗದಲ್ಲಿ ಶಾಸಕ ಹೆಚ್. ಆರ್. ಗವಿಯಪ್ಪ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭಾನುವಾರ ಭೂಮಿಪೂಜೆ ನಡೆಸಿ ಚಾಲನೆ ನೀಡಿದರು.
ಸಮೀಪದ ರಾಂಪುರ್ ಮಾಗಾಣಿ, ನರಸಾಪುರ ಮಾಗಾಣಿ, ಜಾಗೀರದಾರ ಬಂಡಿ ಗ್ರಾಮಗಳಿಗೆ ಭೇಟಿ ನೀಡಿ ರೈತರ ಅನುಕೂಲಕ್ಕಾಗಿ ಮುಖ್ಯರಸ್ತೆಯಿಂದ ಹಲವು ಗದ್ದೆಗಳಿಗೆ ಸಂಪರ್ಕ ಕಲ್ಪಿಸುವ ಮಾಗಾಣಿ ರಸ್ತೆಗಳ ಅಭಿವೃದ್ಧಿಗಾಗಿ ಸುಮಾರು 15 ರಸ್ತೆಗಳ ಸ್ಥಳ ವೀಕ್ಷಣೆ ನಡೆಸಿದರು. ಈ ಬಗ್ಗೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸೂಚಿಸಿದರು.
ಈ ಭಾಗದಲ್ಲಿ ಹಲವು ಕಡೆ ಸಿಸಿ ರಸ್ತೆ, ಚರಂಡಿ ಮತ್ತು ಶಾಲೆಗಳ ರಿಪೇರಿ ಅಗತ್ಯವಿದೆ ಎಂದು ಇದೆ ವೇಳೆ ಹಲವು ಗ್ರಾಮಗಳ ಸಾರ್ವಜನಿಕರು ಶಾಸಕರಲ್ಲಿ ಮನವಿ ಮಾಡಿದರು. ಈ ಬಗ್ಗೆ ಪರಿಶೀಲಿಸಿ ಇದಕ್ಕೆ ವಿಶೇಷ ಆದ್ಯತೆ ನೀಡಿ ಸಿಸಿ ರಸ್ತೆ, ಚರಂಡಿ ಮತ್ತು ಶಾಲೆಗಳ ರಿಪೇರಿ ಕಾಮಗಾರಿಗಳಿಗೆ ಲಭ್ಯವಿರುವ ಅನುದಾನದಲ್ಲಿ ಮುಂದಿನ ಕ್ರಮ ವಹಿಸಬೇಕು ಎಂದು ಶಾಸಕರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ನಿರ್ದೇಶನ ನೀಡಿದರು.
ಕೊಳವೆಬಾವಿ ಕೊರೆಯಲು ಪೂಜೆ: ಇಪ್ಪಿತೇರಿ ಗ್ರಾಮಸ್ಥರ ಮನವಿ ಮೇರೆಗೆ ಶಾಸಕರು, ಇಪ್ಪಿತೇರಿ ಗ್ರಾಮದಲ್ಲಿ ಗ್ರಾಮಸ್ಥರಿಗೆ ಕುಡಿಯುವ ನೀರಿಗೆ ಅನುಕೂಲವಾಗಲು ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆಯಲು ಪೂಜೆ ನೆರವೇರಿಸಿದರು.
ಮುಖಂಡರಾದ ವಿನಯ್ ಶೆಟ್ಟರ್, ರಘುಕುಮಾರ್, ಅಂಜನಪ್ಪ, ಬಸವರಾಜ್ ನಾಗೇನಹಳ್ಳಿ, ತೋಟಪ್ಪ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸುರೇಶ್ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಭೇಟಿಯ ವೇಳೆ ಹಾಜರಿದ್ದರು.