ರಕ್ತದಾನ ಶಿಬಿರ
ಬಾಗಲಕೋಟೆ,ಜು15: ಇನ್ನರ್‍ವ್ಹೀಲ್ ಕ್ಲಬ್‍ನಿಂದ ಧನ್ವಂತರಿ ರಕ್ತಭಂಡಾರದ ಸಹಯೋಗದಲ್ಲಿ ನಗರದ ವಿದ್ಯಾಪ್ರಸಾರಕ ಮಂಡಳದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಶಿಬಿರದಲ್ಲಿ 51 ಜನ ರಕ್ತದಾನ ಮಾಡಿದರು.
ಶಿಬಿರ ಉದ್ಘಾಟಿಸಿ ಮಾತನಾಡಿ ಕ್ಲಬ್ ಅಧ್ಯಕ್ಷೆ ಶ್ರೀಲತಾ ಹೆರೆಂಜಲ್ ಅವರು, ದಾನ ಮಾಡಲು ನಮ್ಮ ಬಳಿ ಏನೂ ಇಲ್ಲ ಎಂದು ಭಾವಿಸುವಂತ್ತಿಲ್ಲ. ನಮ್ಮ ದೇಹದಲ್ಲಿನ ರಕ್ತವನ್ನೂ ಸಹ ದಾನಮಾಡಬಹುದಾಗಿದೆ. ಇದು ಅತ್ಯಂತ ಶ್ರೇಷ್ಠದಾನವೂ ಆಗಿದೆ ಎಂದು ಹೇಳಿದರು. ರಕ್ತದಾನ ಮಾಡುವುದರಿಂದ ಮತ್ತೊಂದು ಜೀವ ಉಳಿಯುವುದರ ಜತೆಗೆ ನಮ್ಮ ಆರೋಗ್ಯವೂ ಸುಧಾರಿಸುತ್ತದೆ. ಪ್ರತಿಯೊಬ್ಬರು ರಕ್ತದಾನಕ್ಕೆ ಮುಂದಾಗಬೇಕೆಂದು ಸಲಹೆ ಮಾಡಿದರು.
ಕೆಲವರಿಗೆ ಹೆರಿಗೆ ಸಂದರ್ಭದಲ್ಲಿ ರಕ್ತಬೇಕಾಗಿರುತ್ತದೆ. ಅಂಥ ಸಂದರ್ಭದಲ್ಲಿ ರಕ್ತದಾನ ಮಾಡುವುದರಿಂದಾಗಿ ಎರಡು ಜೀವಗಳನ್ನು ಉಳಿಸಿದ ಸಾರ್ಥಕತೆಯನ್ನು ನಾವು ಕಾಣಬಹುದು. ಆರೋಗ್ಯ ಯಾರ ಕೈಯಲ್ಲಿ ಇಲ್ಲವಾದರೂ ಅದರ ಬಗ್ಗೆ ನಾವು ಕಾಳಜಿ ವಹಿಸಬೇಕು. ನಾವು ಇನ್ನೊಬ್ಬರಿಗೆ ನೆರವಾದರೆ ಕಷ್ಟಕಾಲದಲ್ಲಿ ಮತ್ತೊಬ್ಬರು ನಮ್ಮ ನೆರುವಿಗೆ ಧಾವಿಸುತ್ತಾರೆ. ರಕ್ತಭಂಡಾರಗಳಲ್ಲಿ ರಕ್ತಕ್ಕೆ ಕೊರತೆ ಉಂಟಾಗದಂತೆ ನಾವುಗಳು ತುರ್ತು ಸಂದರ್ಭದಲ್ಲಿ ನೆರವಾಗುವ ಶ್ರೇಷ್ಠ ಕಾರ್ಯ ಮಾಡಬೇಕೆಂದರು.
ಧನವಂತರಿ ಬ್ಲಡ್ ಬ್ಯಾಂಕಿನ ನಿರ್ದೇಶಕ ಆನಂದ ಹಳ್ಳಿ ಹಾಗೂ ಡಾ ಅರುಣ ಮಿಸ್ಕಿನ್ ಇದ್ದರು. ಇನ್ನರವ್ಹೀಲ್ ಕ್ಲಬ್‍ನ ಡಿಸ್ಟ್ರಿಕ್ಟ್ ಚೇರ್ಮನ್ ಜ್ಯೋತಿಕಿರಣ ದಾಸ್, ಕಾರ್ಯದರ್ಶಿ ಸುಮಂಗಲಾ ಹದ್ಲಿ, ಪದಾಧಿಕಾರಿಗಳಾದ ಜಯಲಕ್ಷ್ಮಿ ಪಾಟೀಲ, ಗಿರಿಜಾ ಅಡಿಕೆನ್ನವರ ರಕ್ತ ದಾನದಲ್ಲಿ ಭಾಗವಹಿಸಿದ್ದರು. ಸಂಧ್ಯಾ ಮಿಸ್ಕಿನ್, ಪೂರ್ಣಿಮ ಅಕ್ಕಿಮರಡಿ, ನೇತ್ರಾ ಉಪಾಧ್ಯಾ, ಕೀರ್ತಿಮಾಲಾ ಹುಲ್ಲೂರು, ಎನ್‍ಸಿಸಿ, ಎನ್‍ಎಸ್‍ಎಸ್, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಸೇರಿ 51 ಜನ ರಕ್ತದಾನ ಮಾಡಿದರು.