ಬೋಟಿನಲ್ಲಿ ಅಡುಗೆ ಮಾಡುವ ವೇಳೆ ಬಾಣಲೆಗೆ ಬಿದ್ದ ಮೀನುಗಾರ ಮೃತ್ಯು
ಮಲ್ಪೆ: ಮೀನುಗಾರಿಕೆಯ ಬೋಟಿನಲ್ಲಿ ಅಡುಗೆ ಕೆಲಸ ಮಾಡುತ್ತಿರುವ ವೇಳೆ ಒಲೆಗೆ ಇಟ್ಟಿದ್ದ ಎಣ್ಣೆಯ ಬಾಣಲೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಮೀನುಗಾರ ಅಂಕೋಲ ತಾಲೂಕಿನ ಬೆಲಂಬೆರ್ ಗ್ರಾಮದ ನವೀನ್ ಗೋವಿಂದ (೨೩) ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅವರು ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಕೆಲಸ ಮಾಡುತ್ತಿದ್ದರು. ಆ. ೫ರಂದು ಅವರು ಶೇಷಾದ್ರಿ ಬೋಟಿನಲ್ಲಿ ಅಡುಗೆ ಮಾಡುತ್ತಿರುವ ವೇಳೆ ಬೋಟು ಅಬ್ಬರದ ಅಲೆಗೆ ಅಲುಗಾಡಿದ್ದು, ಈ ವೇಳೆ ನವೀನ್ ಗೋವಿಂದ ಅವರು ಗ್ಯಾಸ್ ಒಲೆಯ ಮೇಲೆ ಇಟ್ಟಿದ್ದ ಎಣ್ಣೆಯ ಬಾಣಲಿಗೆ ಬಿದ್ದಿದ್ದರು. ಪರಿಣಾಮ ಅವರ ಮುಖ ಹಾಗೂ ಬಲಗೈ ಸುಟ್ಟು ಹೋಗಿತ್ತು. ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಸೆ. ೨೬ರಂದು ರಾತ್ರಿ ಮೃತಪಟ್ಟಿದ್ದಾರೆ.ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.