ಶ್ರೀ ಲಕ್ಷ್ಮಿನಾರಾಯಣ ಸ್ವಾಮಿ ಶ್ರೀ ಆಂಜನೇಯಸ್ವಾಮಿ ನೂತನ ರಥ ಕಟ್ಟುವ ಕಾರ್ಯಕ್ಕೆ ಚಾಲನೆ
ಮರಿಯಮ್ಮನಹಳ್ಳಿ, ಜು.13: ಪಟ್ಟಣದ ಆರಾಧ್ಯ ದೈವಗಳಾದ ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ ಹಾಗೂ ಶ್ರೀ ಆಂಜನೇಯ ಸ್ವಾಮಿಗಳ ನೂತನ ಜೋಡು ರಥ ನಿರ್ಮಾಣದ ಪೈಕಿ ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿಯ ರಥ ಕಟ್ಟುವ ಕಾರ್ಯ ಶುಕ್ರವಾರ ಆರಂಭಗೊಂಡಿತು.
ಈ ಸಂದರ್ಭದಲ್ಲಿ ದೇವಸ್ಥಾನ ಅಭಿವೃದ್ದಿ ಸಮಿತಿಯ ಸದಸ್ಯ ಚಿದ್ರಿ ಸತೀಶ್ ಮಾತನಾಡಿ, ಶ್ರೀ ಲಕ್ಷ್ಮೀ ನಾರಾಯಣಸ್ವಾಮಿಯ ರಥವನ್ನು 32 ಅಡಿಗಳಷ್ಟು ಎತ್ತರದಲ್ಲಿ ನಿರ್ಮಿಸಲು ಸುಮಾರು 2 ಕೋಟಿ ರೂ.ಗಳ ವೆಚ್ಚ ತಗುಲಿದೆ. ಈ ರಥ ನಿರ್ಮಾಣದ ಪೂರ್ಣ ವೆಚ್ಚವನ್ನು ಗಣಿ ಉದ್ಯಮಿ ಶಾಮ್‌ರಾಜ ಸಿಂಗ್ ವಹಿಸಿಕೊಂಡಿದ್ದಾರೆ. ಇಂದು ರಥದ ಗಡ್ಡೆಪೂಜೆಯೊಂದಿಗೆ ರಥ ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಇನ್ನುಳಿದಂತೆ ಶ್ರೀ ಆಂಜನೇಯಸ್ವಾಮಿಯ ರಥ ಕಟ್ಟುವ ಕಾರ್ಯ ಅಕ್ಟೋಬರ್ ನಲ್ಲಿ ಆರಂಭಗೊಳ್ಳಲಿದೆ. ಈ ರಥಕ್ಕೆ ಗಣಿ ಉದ್ಯಮಿ ಜಯರಾಜ್ ಸಿಂಗ್‌ರು 50 ಲಕ್ಷ ರೂ.ಗಳನ್ನು ದೇಣಿಗೆ ನೀಡಿದ್ದಾರೆ. ಈ ರಥದ ಚಕ್ರಗಳ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದೆ. ಇವುಗಳ ಎತ್ತರ 28 ಅಡಿಗಳಾಗಲಿದ್ದು, ಸುಮಾರು 1.75 ಕೋಟಿ ರೂ.ಗಳ ವೆಚ್ಚವಾಗಲಿದೆ. ಒಟ್ಟಾರೆ ಎರಡು ರಥಗಳು ಫೆಬ್ರವರಿಗೆ ಮುಗಿಯಲಿವೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರಥದ ಶಿಲ್ಪಿ ರಾಜಶೇಖರ ಹೆಬ್ಬಾರ, ಸಮಿತಿಯ ಗೋವಿಂದರ ಪರಶುರಾಮ, ತಳವಾರ ದೊಡ್ಡ ರಾಮಣ್ಣ, ಎನ್.ಶ್ರೀನಿವಾಸ ಶೆಟ್ಟಿ, ಡಿ.ರಾಘವೇಂದ್ರ ಶೆಟ್ಟಿ,
ಎಲ್.ಪರಮೇಶ್ವರಪ್ಪ, ಎಲಿಗಾರ್ ಮಂಜುನಾಥ, ಡಾ.ಈ.ಎರಿಸ್ವಾಮಿ, ಕೆ.ರಘುವೀರ್, ಚುಕ್ಕಿನಾಗೇಶ್, ದೊಡ್ಡ ಮಂಜುನಾಥ, ತಳವಾರ ಹುಲುಗಪ್ಪ, ಬುಲ್ಡಿ ರಾಮಣ್ಣ, ಸಣ್ಣ ದುರುಗಪ್ಪ ಹಾಗೂ ಇತರರು ಇದ್ದರು.