ಇತಿಹಾಸ ಅಳಿಸದಂತೆ ಅಭಿವೃದ್ಧಿ ಮಾಡಿ
ಕನಕಪುರ.ಜು.೧೩-ರಾಮನಗರ ಜಿಲ್ಲೆಯ ರೈತರ ಅಭಿವೃದ್ಧಿಯತ್ತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒತ್ತುನೀಡಬೇಕೆ ಹೊರತು ರಾಮನಗರ ಎಂಬ ಹೆಸರಿಗೆ ಇರುವ ಇತಿಹಾಸವನ್ನು ಅಳಿಸಿಹಾಕಲು ಕರ್ನಾಟಕ ರಾಜ್ಯ ರೈತ ಸಂಘವು ಖಂಡಿಸುತ್ತದೆ ಎಂದು ಸಂಚಾಲಕ ಚೀಲೂರು ಮುನಿರಾಜು ಹೇಳಿದ್ದಾರೆ..
ರಾಜ್ಯ ರೈತ ಸಂಘ ಹಾಗೂ ಪ್ರಗತಿ ಪರಸಂಘಟನೆಗಳೋಡಗೂಡಿ ರಾಮನಗರ ಜಿಲ್ಲೆಯ ಹೆಸರನ್ನು ಯಥವತ್ತಾಗಿಇರಿಸುವಂತೆ ತಹಶೀಲ್ದಾರ್ ಸ್ಮಿತಾರಾಮುರವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಈ ಹಿಂದೆ ಬೆಂಗಳೂರು ಜಿಲ್ಲೆಯು ಜನಸಂಖ್ಯೆಯ ಆದಾರದ ಮೇಲೆ ಸುಗಮ ಆಡಳಿತ ವ್ಯವಸ್ಥೆಗಾಗಿ ೧೯೮೬ರಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯೆಂದು ಸೃಷ್ಟಿ ಮಾಡಲಾಗಿತ್ತು. ಮತ್ತೆ ಆದೇ ಕಾರಣಕ್ಕೆ ೨೦೦೭ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ವಿಭಜಿಸಿ ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಯನ್ನಾಗಿ ವಿಂಗಡಿಸಲಾಗಿತ್ತು.
ಆದರೆ ಸರ್ಕಾರ ಕಾರಣವೇ ಇಲ್ಲದೆ ರಾಮನಗರ ಜಿಲ್ಲೆಯನ್ನು ನವಬೆಂಗಳೂರು ಎಂದು ನಾಮಕರಣ ಮಾಡಲು ಹೊರಟಿರುವುದನ್ನು ಕರ್ನಾಟಕರಾಜ್ಯ ರೈತ ಸಂಘ ಖಂಡಿಸುತ್ತದೆ ಎಂದು ಹೇಳಿದ್ದಾರೆ.
ಪ್ರಗತಿ ಪರ ಸಂಘಟನೆಗಳ ಮುಖಂಡ ಕುಮಾರಸ್ವಾಮಿಯವರು ಮಾತನಾಡಿ ರಾಮನಗರ ಜಿಲ್ಲೆ ರೇಷ್ಮೆ ಹಾಗೂ ಹೈನುಗಾರಿಕೆಗೆ ಪ್ರಸಿದ್ಧಿ ಹೊಂದಿರುವ ಜಿಲ್ಲೆಯಾಗಿದ್ದು ತನ್ನದೇ ಆದ ಇತಿಹಾಸವನ್ನು ಹೊಂದಿದೆ
ನೂತನ ಜಿಲ್ಲೆಯ ನಾಮಕರಣ ಮಾಡುವುದರಿಂದ ಕೋಟ್ಯಾಂತರ ರೂಪಾಯಿಗಳ ಆರ್ಥಿಕ ಹೊರೆಯನ್ನು ಸರ್ಕಾರ ಹೊತ್ತುಕೊಳ್ಳಬೇಕಾಗುತ್ತದೆ ಹಾಗಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರವರು ರಾಮನಗರ ಜಿಲ್ಲೆಯನ್ನು ಅಭಿವೃದ್ದಿ ಪಡಿಸಬೇಕೆಂಬ ಮನಸ್ಸಿದ್ದರೆ ಇರುವ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಇಲ್ಲಿನ ರೈತರ , ಜನಸಾಮಾನ್ಯರ ಬಗ್ಗೆ ಚಿಂತನೆ ಮಾಡಲಿ ಎಂದಿದ್ದಾರೆ. ಈಸಂದರ್ಭದಲ್ಲಿ ಬಾಸ್ಕರ್, ಬಸವರಾಜು, ಕುಮಾರ್, ರವಿ ಡಿ, ಪುಟ್ಟಮಾದೇಗೌಡ, ರಮೇಶ್, ಮಾದೇಶ್, ಮುನಿರಾಜ್ ಮೊದಲಾದವರು ಪಾಲ್ಗೊಂಡಿದ್ದರು.
ಹೆಸರು ಬದಲಾವಣೆಯಿಂದ ಪ್ರಯೋಜನವಿಲ್ಲ
ರಾಮನಗರ ಜಿಲ್ಲೆಯನ್ನು ಅಭಿವೃದ್ದಿಗೊಳಿಸುವುದಾದರೆ ಹೆಸರು ಬಲಾಯಿಸುವುದರಿಂದ ಏನುಪ್ರಯೋಜನವಿಲ್ಲ, ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಜಿಲ್ಲೆಯಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯವಿಲ್ಲ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲ, ಮಾವು ಸಂರಕ್ಷಣಾ ಘಟಕವಿಲ್ಲ, ಹೈಟೆಕ್ ರೇಷ್ಮೆ ಮಾರುಕಟ್ಟೆ ಇಲ್ಲ, ಹಾಗೂ ರಸಗೊಬ್ಬರದ ದಾಸ್ತಾನು ಮಳಿಗೆ ಸೇರಿದಂತೆ ಹಲವು ಹತ್ತು ಸಮಸ್ಯೆಗಳಿದ್ದು ಇವುಗಳನ್ನು ಪರಿಹರಿಸಿ ಜನರು ನೆಮ್ಮದಿಯಾಗಿ ಉಸಿರಾಡುವಂತೆ ಮಾಡುವಂತೆ ಒತ್ತಾಯಿಸಿದಾರೆ.