ಸ್ವಚ್ಚತೆಯೇ ಎಲ್ಲರ ಉಸಿರಾಗಲಿ
ಕಮಲನಗರ:ಸೆ.೨೮:ಪ್ರತಿಯೊಬ್ಬರೂ ಸ್ವಚ್ಚತೆಯಲ್ಲಿ ಭಾಗಿಯಾಗಬೇಕು. ಸ್ವಚ್ಚತೆಯೇ ನಮ್ಮ ಉಸಿರಾಗಬೇಕೆಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ ತಿಳಿಸಿದರು.
ಕಮಲನಗರ ಮತ್ತು ಚಿಮೇಗಾಂವ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನಡೆದ ಸ್ವಚ್ಚತಾ ಹೀ ಸೇವಾ ಅಭಿಯಾನದ ನಿಮಿತ್ತ ಕುರಿತು ಮಾತನಾಡಿದರು.
ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಸ್ವಚ್ಚತೆಯ ಅರಿವು ಮೂಡಿಸಲು ಸೆ.೧೪ ರಿಂದ ಅ.೧ ರವರೆಗೆ ಹಮ್ಮಿಕೊಂಡು ಸ್ವಚ್ಚತಾ ಹಿ ಸೇವಾ ಅಭಿಯಾನವನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ಯಶಸ್ವಿಗೊಳಿಸಬೇಕೆಂದರು .ಸ್ವಚ್ಚತೆಯ ಪ್ರಜ್ಞೆಯು ಪ್ರತಿಯೊಬ್ಬರಿಂದಲೂ ಹೊರಹೊಮ್ಮಬೇಕು. ಪ್ರತಿಯೊಂದು ಕುಟುಂಬ ತನ್ನ ಸುತ್ತಲೂ ಇರುವ ವಾತಾವರಣ ಶುಚಿಯಾಗಿಟ್ಟುಕೊಳ್ಳಬೇಕು.ಗ್ರಾ.ಪಂಚಾಯತನಿAದ ಇಗಾಗಲೇ ಸ್ವಚ್ಚವಾಹಿನಿಗಳನ್ನು ನೀಡಲಾಗಿದ್ದು, ಕಸವನ್ನು ಎಲ್ಲೆಂದರಲ್ಲಿ ಬಿಸಾಡದೇ ಹಸಿ ಕಸ ಒಣ ಕಸ ಪ್ರತ್ಯೇಕಿಸಿ ನೀಡಬೇಕು. ಗ್ರಾಮದಲ್ಲಿರುವ ಐತಿಹಾಸಿಕ ಸ್ಥಳ, ಸರ್ಕಾರಿ ಕಛೇರಿಗಳು, ಶಾಲೆ, ದೇವಸ್ಥಾನ, ಸಾರ್ವಜನಿಕ ಸ್ಥಳಗಳಲ್ಲಿ ಕೇವಲ ಸರ್ಕಾರಿ ನೌಕರರು, ಜನಪ್ರತಿನಿಧಿಗಳು ಅಷ್ಟೇ ಅಲ್ಲದೇ ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಿ ಶ್ರಮದಾನ ಮಾಡಿದರೆ ಮಾತ್ರ ಗ್ರಾಮದ ಅಭಿವೃದ್ಧಿಯಾಗಲು ಸಾಧ್ಯ.
ಸ್ವಚ್ಚತಾ ಹಿ ಸೇವಾ ಕಾರ್ಯಕ್ರಮ ಅಕ್ಟೋಬರ ೨ ರವರೆಗೆ ಗ್ರಾಮ ಪಂಚಾಯತ ಮಟ್ಟದಲ್ಲಿ ನಡೆಯುತ್ತದೆ. ಆದ್ದರಿಂದ ಶಾಲಾ, ಅಂಗನವಾಡಿ, ಮಂದಿರ, ಮಸೀದಿ, ಕಲ್ಯಾಣಿ, ಕೆರೆ, ಬಾವಿ, ಗೊಕಟ್ಟೆ ನಾಲಾಗಳನ್ನು ಸ್ವಚ್ಚಗೊಳಿಸುವ ಕಾರ್ಯಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾ.ಪಂ. ಸಹಾಯಕ ನಿರ್ದೇಶಕರಾದ ಹಣಮಂತರಾಯ ಕೌಟಗೆ, ಪಿಡಿಓ ತಾನಾಜಿ ಪಾಟೀಲ, ಅಧ್ಯಕ್ಷರಾದ ದೊಂಡಿಬಾಯಿ, ಉಪಾಧ್ಯಕರು, ಸದಸ್ಯರು, ಮಾಜಿ ಅಧ್ಯಕ್ಷರಾದ ಅನೀಲ, ನೀತಿ ಆಯೋಗದ ಸಂಯೋಜಕರಾದ ಅಮರ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಕವಿತಾ, ಐಇಸಿ ಸಂಯೋಜಕರಾದ ಸವಿತಾ ನಾಗೇಶ, ಸಂಘದ ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಇದ್ದರು.