ಜನಸಂಖ್ಯಾ ಸ್ಪೋಟಕ್ಕೆ ಕಡಿವಾಣ ಹಾಕಿ: ಡಿಸಿ ಅಕ್ರಂ ಪಾಷ
ಕೋಲಾರ, ಜು,೧೨-ಪ್ರಪಂಚದಲ್ಲೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ಎಂಬ ಕೀರ್ತಿಗೆ ಹಾಗೂ ಅಪಕೀರ್ತಿಗೆ ಒಳಗಾಗಿರುವುದು ನಮ್ಮ ದೇಶ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಛೇರಿಯ ಆಡಿಟೋರಿಯಂನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೋಲಾರ ಇವರ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಇಂದು ಜನಸಂಖ್ಯಾ ಸ್ಫೋಟಕವಾಗುತ್ತಿದೆ ಎಂದು ಹೇಳಿದರು.
ನಮ್ಮ ದೇಶದಲ್ಲಿನ ಜನಸಂಖ್ಯೆ ೧೪೪ ಕೋಟಿಯಿದ್ದು, ಶೇ.೧೭-೭೬ ಜನಸಂಖ್ಯೆ ಭಾರತದಲ್ಲಿ ಉಳಿದ ಜನಸಂಖ್ಯೆ ಪ್ರಪಂಚದಾದ್ಯಂತ ಹರಡಿದೆ ಎಂದರು. ಚೈನಾ ದೇಶವನ್ನು ಹಿಂದಿಕ್ಕಿ ಬೆಳೆಯುತ್ತಿರುವ ನಮ್ಮ ಜನಸಂಖ್ಯೆ ಗುಣಾತ್ಮಕ ಮಾನವ ಸಂಪನ್ಮೂಲವಾಗಿ ಬದಲಾಗಿಲ್ಲ ಎಂದು ತಿಳಿಸಿದರು.
ಈಗ ದೇಶದಲ್ಲಿ ೧೮-೪೦ ವರ್ಷ ವಯೋಮಾನ ಪೀಳಿಗೆಯುವರು ಹೆಚ್ಚಾಗಿದ್ದ ಅವರನ್ನು ಕ್ರಿಯಾಶೀಲರಾದ ಗುಣಾತ್ಮಕ ಸಂಪನ್ಮೂಲವನ್ನಾಗಿ ಪರಿವರ್ತಿಸಲು ಉತ್ತಮ ಶಿಕ್ಷಣ, ಕೌಶಲ್ಯ, ಬಡತನ ನಿವಾರಣೆ, ವಸತಿ, ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಅಂದಾಗ ಮಾತ್ರ ಭಾರತದ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಬಲ್ಲದು ಎಂದರು.
ಜನಸಂಖ್ಯೆಯ ದುಷ್ಪರಿಣಾಮಗಳಾದ ಬಡತನ, ನಿರುದ್ಯೋಗ, ವಸತಿ, ನೀರು, ವಿದ್ಯುತ್, ಅನಾರೋಗ್ಯ ಇವುಗಳ ಬಗ್ಗೆ ಪಠ್ಯಕ್ರಮಗಳಲ್ಲಿರುವ ವಿಷಯವನ್ನು ವಿದ್ಯಾರ್ಥಿಗಳು ತಿಳಿದುಕೊಂಡು, ಮಕ್ಕಳಿಗೆ ಉತ್ತಮ ಭವಿಷ್ಯ ನೀಡಲು ಮುಂದಾಗಬೇಕೆಂದರು. ಜನಸಂಖ್ಯೆ ಗುಣಾತ್ಮಕ ಬೆಳವಣಿಗೆ ಬಗ್ಗೆ ಪ್ರತಿಯೊಬ್ಬರು ಜಾಗೃತಿ ಮೂಡಿಸಬೇಕೆಂದರು. ಇತ್ತೀಚಿಗೆ ಬಾಲ್ಯ ವಿವಾಹ ಮತ್ತು ಬಾಲ ಗರ್ಭಿಣಿಯರು ಹೆಚ್ಚಾಗುತ್ತಿದ್ದಾರೆ. ಕಾರಣ ಶಿಕ್ಷಣ ವಿಲ್ಲದೇ ಇರುವುದು ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿಲ್ಲದೇ ಇದ್ದಾಗ ತಾಯಿ ಮತ್ತು ಮಗು ಅಪೌಷ್ಠಿಕವಾಗಿರುತ್ತಾರೆ. ಆದ್ದರಿಂದ ಹೆಣ್ಣಿಗೆ ೧೮, ಗಂಡಿಗೆ ೨೧ ವರ್ಷ ವಯಸ್ಸು ವಿವಾಹಕ್ಕೆ ಸೂಕ್ತ ಸಮಯ ಎಂದು ಹೇಳಿದರು.
ಹೆಣ್ಣು ಮಕ್ಕಳ ದೈಹಿಕ ಮತ್ತು ಮಾನಸಿಕ ಸಮಸ್ಯೆಗೆ ೧೦೯೮ ಸಹಾಯವಾಣಿಯಿದ್ದು, ಇದರ ಸದುಪಯೋಗ ಪಡಿಸಿಕೊಳ್ಳ ಬೇಕು.ವಿದ್ಯಾರ್ಥಿ ದೆಸೆಯಲ್ಲಿ ವಿದ್ಯಾರ್ಥಿಗಳು ತಮ್ಮ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಬೇಕು. ಈ ಸಮಯದಲ್ಲಿ ಸ್ವಲ್ಪ ಎಡವಿದರೂ ಜೀವನಪೂರ್ತಿ ದುಃಖ ಹಾಗೂ ತೊಂದರೆಯಲ್ಲೇ ಕಳೆಯಬೇಕಾಗುತ್ತದೆ. ಹಾಗಾಗಿ ಎಚ್ಚರಿಕೆಯಿಂದ ಈ ವಯಸ್ಸನ್ನು ಮೀರಬೇಕೆಂದರು. ವಿದ್ಯಾರ್ಥಿ ಜೀವನದಲ್ಲಿ ಆಚಾರ-ವಿಚಾರ ಮತ್ತು ಸಂಸ್ಕಾರವನ್ನು ಅಳವಡಿಸಿಕೊಂಡು ಉತ್ತಮ ಪ್ರಜೆಯಾಗಿ ಸಮಾಜದಲ್ಲಿ ಬದುಕಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಹಲವಾರು ಯೋಜನೆಗಳಿದ್ದು, ಇದರ ಸದುಪಯೋಗ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಜಗದೀಶ್.ಎಂ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ|| ಎಸ್.ಚಂದನ್‌ಕುಮಾರ್, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ|| ಎನ್.ಸಿ. ನಾರಾಯಣಸ್ವಾಮಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ|| ರವಿಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ|| ಚಾರಿಣಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ|| ಎ..ವಿ.ನಾರಾಯಣಸ್ವಾಮಿ, ಆರೋಗ್ಯ ಶಿಕ್ಷಣಾದಿಕಾರಿ ಪ್ರೇಮ ಮತ್ತಿತರರು ಉಪಸ್ಥಿತರಿದ್ದರು.