ಹದಿಹರೆಯದವರ ಸಮಸ್ಯೆ ನಿವಾರಣೆಗೆ ಸ್ನೇಹ ಕ್ಲಿನಿಕ್ ಬಳಸಿ
ಕೋಲಾರ,ಜು,೧೧:ಹದಿಹರೆಯದವರು ತಮ್ಮ ಸಮಸ್ಯೆಗಳ ನಿವಾರಣೆಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿ ಗುರುವಾರ ಬೆಳಗ್ಗೆ ೩ ರಿಂದ ೫ ಗಂಟೆಯವರೆಗೂ ತೆರೆದಿರುವ ಸ್ನೇಹ ಕ್ಲಿನಿಕ್‌ನ ಸೌಲಭ್ಯ ಪಡೆದುಕೊಳ್ಳಿ, ದೂರವಾಣಿಯಲ್ಲೇ ಮಾಹಿತಿ ಅಗತ್ಯವಿದ್ದರೆ ಸಹಾಯವಾಣಿ ೧೦೪ಕ್ಕೆ ಕರೆ ಮಾಡಿ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಕರೆ ನೀಡಿದರು.
ಬುಧವಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಆರೋಗ್ಯ ಕ್ಲಬ್ ಆಶ್ರಯದಲ್ಲಿ ಜಿಲ್ಲಾಡಳಿತ,ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ಮಕ್ಕಳಿಗೆ ಬಾಲ್ಯವಿವಾಹ ನಿಷೇಧ,ಪೋಕ್ಸೋ ಕಾಯಿದೆ, ಮಕ್ಕಳ ಹಕ್ಕುಗಳು, ಹದಿಹರೆಯದವರ ಸಮಸ್ಯೆಗಳು, ಡೆಂಗ್ಯೂ ಮತ್ತಿತರ ಸಾಂಕ್ರಾಮಿಕ ರೋಗಳ ಕುರಿತು ಅರಿವು ಮೂಡಿಸಲು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಬಾಲ್ಯವಿವಾಹದಿಂದ ಹೆಣ್ಣು ಮಕ್ಕಳಲ್ಲಿ ಅನಿಮಿಯ, ದೈಹಿಕ ಹಾಗೂ ಮಾನಸಿಕ ಅನಾರೋಗ್ಯಕ್ಕೆ ಕಾರಣವಾಗುತ್ತದೆ, ಈ-ಸಂಜೀನಿನಿ ಓಪಿಡಿಗೆ ಕರೆಮಾಡಿ ನೆರವು ಪಡೆದುಕೊಳ್ಳಬಹುದು ಎಂದರು.
ಬಾಲ್ಯವಿವಾಹ ನಿಷೇಧ ಕಾಯಿದೆಯಡಿ ಮದುವೆಯಾಗಲು ಹೆಣ್ಣಿಗೆ ೧೮ ಹಾಗೂ ಗಂಡಿಗೆ ೨೧ ವರ್ಷ ಕಡ್ಡಾಯವಾಗಿದೆ, ಅದಕ್ಕೂ ಮೊದಲು ಮದುವೆ ಮಾಡಿದರೆ ಬಾಲ್ಯವಿವಾಹ ಕಾಯಿದೆಯಡಿ ಅಪರಾಧವಾಗುತ್ತದೆ ಎಂದು ತಿಳಿಸಿದರು.
ಹೆಣ್ಣುಮಕ್ಕಳು ಅಸುರಕ್ಷಿತ ಸ್ಪರ್ಶ ಮತ್ತು ಸುರಕ್ಷಿತ ಸ್ಪರ್ಶದ ಕುರಿತು ಅರಿತುಕೊಳ್ಳಬೇಕು, ಯಾರೇ ನಿಮಗೆ ಮುಜುಗರವಾಗುವಂತೆ ನಿಮ್ಮೊಂದಿಗೆ ಅಸಭ್ಯವಾಗಿ ನಡೆದುಕೊಂಡರೆ ದೂರು ನೀಡಿ ಎಂದು ಕಿವಿಮಾತು ಹೇಳಿದರು.
ಮಕ್ಕಳಲ್ಲಿ ದೈಹಿಕ,ಮಾನಸಿಕ ಪ್ರಬುದ್ದತೆ ಬರುವ ಮುನ್ನಾ ಮದುವೆ ಮಾಡಿ ಅವರ ಜೀವನಕ್ಕೆ ಕಂಟಕವುಂಟು ಮಾಡುವ ಪೋಷಕರಿಗೆ ಶಿಕ್ಷೆಯ ಕುರಿತು ತಿಳಿಸಿ ಮತ್ತು ನಿಮ್ಮ ಸ್ನೇಹಿತರ ಮದುವೆಗೆ ಪ್ರಯತ್ನ ನಡೆದಿದ್ದರೆ ಸಹಾಯವಾಣಿಗೆ ದೂರು ನೀಡಿ, ನಿಮ್ಮ ಹೆಸರು ರಹಸ್ಯವಾಗಿಡಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಮುಖ್ಯಶಿಕ್ಷಕ ಎಂ.ಆರ್.ಗೋಪಾಲಕೃಷ್ಣ ಮಾತನಾಡಿ, ಹೆಣ್ಣು ಮಕ್ಕಳು ಸ್ವಚ್ಚತೆ ಕುರಿತು ಗಮನಹರಿಸಬೇಕು, ಹದಿಹರೆಯದ ಮಕ್ಕಳ ಸಮಸ್ಯೆಗಳ ಕುರಿತು ನೀಡುತ್ತಿರುವ ಅರಿವು ಸದುಪಯೋಗ ಮಾಡಿಕೊಳ್ಳಿ ಎಂದು ಕಿವಿ ಮಾತು ಹೇಳೀದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕರಾದ ಪವಿತ್ರ, ಶಿಕ್ಷಕ ಸಿದ್ದೇಶ್ವರಿ, ಕೆ.ಲೀಲಾ, ಸುಗುಣಾ, ಫರೀದಾ, ವೆಂಕಟರೆಡ್ಡಿ, ಶ್ರೀನಿವಾಸಲು,ರಮಾದೇವಿ ಮತ್ತಿತರರು ಇದ್ದರು.