ಶಿಕ್ಷಕರ ಮೇಲಿದೆ ಗುರುತರ ಜವಾಬ್ದಾರಿ
ಕಲಬುರಗಿ:ಅ.05: ವಿದ್ಯಾರ್ಥಿಗಳಿಗೆ ಸೂಕ್ತ ಜ್ಞಾನ, ಕೌಶಲ, ಸಂಸ್ಕಾರ, ಮಾಮವೀಯ ಮೌಲ್ಯಗಳನ್ನು ಬಿತ್ತಿ, ಅವರನ್ನು ದೇಶದ ಅಮೂಲ್ಯ ಮಾನವ ಸಂಪನ್ಮೂಲವನ್ನಾಗಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ರಾಷ್ಟ್ರದ ಅಭಿವೃದ್ಧಿಯಲ್ಲಿ ಶಿಕ್ಷಣದ ಕೊಡುಗೆ ಅನನ್ಯವಾಗಿದ್ದು, ಎಂದಿಗೂ ‘ಮಾಜಿ’ಯಾಗದ ಶಿಕ್ಷಕರ ಮೇಲೆ ಗುರುತರ ಜವಾಬ್ದಾರಿಯಿದ್ದು, ಶಿಕ್ಷಕರು ಅದರಿಂದ ಎಂದಿಗೂ ದೂರ ಸರಿಯಬಾರದು ಎಂದು ಗುರೂಜಿ ಡಿಗ್ರಿ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಕಲ್ಯಾಣಕುಮಾರ ಶೀಲವಂತ ಮಾರ್ಮಿಕವಾಗಿ ಹೇಳಿದರು.
ನಗರದ ಆಳಂದ ರಸ್ತೆಯ ಶೆಟ್ಟಿ ಕಾಂಪೆಕ್ಸ್ ಎದುರುಗಡೆಯಿರುವ ‘ಶಾರದಾ ವಿವೇಕಾ ಮಹಿಳಾ ಪದವಿ ಕಾಲೇಜ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ವು ಶನಿವಾರ ಏರ್ಪಡಿಸಿದ್ದ ‘ವಿಶ್ವ ಶಿಕ್ಷಕರ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಯ ಭವಿಷ್ಯ ಶಿಕ್ಷಕರ ಕೈಯಲ್ಲಿದ್ದು, ಮುತುವಜಿ, ಬದ್ಧತೆ, ನಿಷ್ಠೆಯಿಂದ ಕರ್ತವ್ಯವಹಿಸಬೇಕು. ಬೋಧನೆಯ ಪ್ರಭಲ ಇಚ್ಛಾಶಕ್ತಿ ಹೊಂದಿರಬೇಕು. ಪಠ್ಯದ ಜೊತೆ ಮೌಲ್ಯಗಳನ್ನು ಬಿತ್ತುವ ಕೆಲಸ ಮಾಡಬೇಕು. ವಿದ್ಯಾರ್ಥಿ ಬದುಕನ್ನು ಕಟ್ಟಿಕೊಡುವ ಕಾರ್ಯ ಮಾಡುವವರೇ ಆದರ್ಶ ಶಿಕ್ಷಕರಾಗಲು ಸಾಧ್ಯವಿದೆ ಎಂದು ಅನೇಕ ದೃಷ್ಟಾಂತಗಳೊಂದಿಗೆ ಮನೋಜ್ಞವಾಗಿ ವಿವರಿಸಿದರು.
ವಿಶೇಷ ಉಪನ್ಯಾಸ ನೀಡಿದ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ ಭೂಸಣಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕ ಮಲ್ಲಿಕಾರ್ಜುನ ಸಿರಸಗಿ, ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳು ಶಿಕ್ಷಕರು, ಗುರುವಿನ ಬಗ್ಗೆ ಅಪಾರವಾದ ಗೌರವ, ಭಕ್ತಿ, ಶೃದ್ಧೆಯಿತ್ತು. ಆಧುನೀಕರಣಕ್ಕೆ ಒಳಗಾಗಿ ಪ್ರಸ್ತುತ ಸನ್ನಿವೇಶಗಳಲ್ಲಿ ಶಿಕ್ಷಕ-ವಿದ್ಯಾರ್ಥಿ ನಡುವಿನ ಸಂಬಂಧ ಸಡಿಲವಾಗುತ್ತಿದೆ. ಗುರು-ಶಿಷ್ಯರ ಸಂಬಂಧವಾಗಿದ್ದು ಗಟ್ಟಿಗೊಳ್ಳಬೇಕು. ಗುರುವಿನ ಋಣ ತೀರಿಸಲು ಅಸಾಧ್ಯ. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಪತ್ತೆ ಹಚ್ಚಿ ಪ್ರೋತ್ಸಾಹಿಸುವುದು, ದೋಷವಿದ್ದರೆ ಪರಿಹರಿಸುವ ಕಾರ್ಯ ಮಾಡುವ ಶಿಕ್ಷಕರ ಸಂಖ್ಯೆ ವೃದ್ಧಿಸಬೇಕಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಕಸಾಪ ಉತ್ತರ ವಲಯದ ಅಧ್ಯಕ್ಷ ಪ್ರಭುಲಿಂಗ ಮುಲಗೆ, ಕಾಲೇಜಿನ ಪ್ರಾಂಶುಪಾಲ ಪ್ರೊ.ಹಣಮಂತರಾಯ ಗುಡ್ಡೇವಾಡಿ ಮಾತನಾಡಿದರು. ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಕಾಲೇಜಿನ ಉಪನ್ಯಾಸಕರಾದ ಸಂತೋಷ ಪೂಜಾರಿ, ಸತೀಶಕುಮಾರ ತುಮಕುರಕರ್ ವೇದಿಕೆ ಮೇಲಿದ್ದರು. ವಿದ್ಯಾರ್ಥಿಗಳಾದ ಪೂಜಾ ಹಾಗೂ ಭಾಗ್ಯಶ್ರೀ ಪ್ರಾರ್ಥಿಸಿದರು. ಕನ್ನಡ ಉಪನ್ಯಾಸಕ ಸಿದ್ದರಾಮ ಕಲಬುರ್ಗಿ ನಿರೂಪಿಸಿ, ವಂದಿಸಿದರು.