ಡೆಂಗ್ಯೂ, ಚಿಕ್ಕಂಗುನ್ಯಾ ರೋಗಗಳ ಬಗ್ಗೆ ಭಯ ಬೇಡಮುಂಜಾಗ್ರತೆ ಇರಲಿ:ಡಾ. ಧ್ಯಾನೇಶ್ವರ ನೀರಗುಡೆ
ಬೀದರ. ಜು.10: ಡೆಂಗ್ಯೂ, ಚಿಕ್ಕಂಗುನ್ಯಾ ಹಾಗೂ ಮಲೇರಿಯಾ ರೋಗಗಳ ಬಗ್ಗೆ ಜನರು ಭಯ ಪಡಬೇಕಾಗಿಲ್ಲ ಆದರೆ ಮುಂಜಾಗ್ರತೆ ವಹಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರ ಡಾ. ಧ್ಯಾನೇಶ್ವರ ನೀರಗುಡೆ ಹೇಳಿದರು.
ಅವರು ಮಂಗಳವಾರ ಬೀದರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಛೇರಿ ಆವರಣದಲ್ಲಿ ಜಿಲ್ಲಾಡಳಿಗ್ಪಿ, ಜಿಲ್ಲಾ ಪಂಚಾಯತ ಬೀದರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಡೆಂಗ್ಯೂ ಹಾಗೂ ಚಿಕ್ಕಂಗುನ್ಯಾ ನಿಯಂತ್ರಣ ಕುರಿತು ಸಾರ್ವಜನಿಕರಿಗೆ ತಿಳಿಯಪಡಿಸಲು ಮಾಧ್ಯಮ ಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
ಡೆಂಗ್ಯೂ, ಚಿಕ್ಕಂಗುನ್ಯಾ, ಮಲೇರಿಯಾ ಕಾಯಿಲೆಗಳು ಹೆಣ್ಣು ಅಲಾಫಲಿಸ್ ಸೊಳ್ಳೆ ಕಚ್ಚುವದರಿಂದ ಈ ಕಾಯಿಲೆಗಳು ಬರುತ್ತವೆ ಹಾಗಾಗಿ ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯ ಒಳಗೆ ಹಾಗೂ ಹೊರಗಡೆ ಮೇಲ್ಚಾವಣಿಯ ನೀರಿನ ತೊಟ್ಟಿಗಳನ್ನು ತಪ್ಪದೇ ವಾರಕ್ಕೊಮ್ಮೆ ನೀರನ್ನು ಖಾಲಿಮಾಡಿ ಒಣಗಿಸಿ ಮತ್ತೆ ನೀರು ತುಂಬಿದ ನಂತರ ಮುಚ್ಚಳಿಕೆಯಿಂದ ಅದನ್ನು ಭದ್ರವಾಗಿ ಮುಚ್ಚಬೇಕು ಎಂದರು.
ಒಡೆದ ಬಾಟಲಿ, ಟಿನ, ಟೈರ್ ಇತ್ಯಾದಿಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಏರಕೂಲರ ಹಾಗೂ ಬೆಂಕಿ ಆರಿಸಲು ಉಪಯೋಗಿಸುವ ಬಕೆಟಗಳಲ್ಲಿಯ ನೀರನ್ನು ಆಗಾಗೆ ಬದಲಾಯಿಸಬೇಕು ಮತ್ತು ಮಲಗುವಾಗ ಸೊಳ್ಳೆ ಪರದೆಗಳನ್ನು ಉಪಯೋಗಿಸಬೇಕು. ಇಡಿಸ್ ಎಂಬ ಜಾತಿಯ ಸೊಳ್ಳೆಗಳು ಮನೆಯ ಒಳಗಡೆಯ ಹೂದಾನಿಗಳಲ್ಲಿ ನೀರಿನ ಏರಕೂಲರ, ನೀರಿನ ತೊಟ್ಟಿಗಳಲ್ಲಿ ಹೆಚ್ಚಾಗಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಈ ಜಾತಿಯ ಸೊಳ್ಳೆಗಳು ಮನುಷ್ಯನಿಗೆ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ ಎಂದರು.
ಡೆಂಗ್ಯೂ ಜ್ವರ ಈಡಿಸ್ ಇಜಿಪ್ರೈ ಎಂಬ ಜಾತಿಯ ಸೊಳ್ಳೆಗಳ ಕಡಿತದಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಒಂದು ವೈರಸ್ ಕಾಯಿಲೆಯಾಗಿದ್ದು ಇದಕ್ಕೆ ನಿಖರವಾದ ಔಷದೋಪಚಾರ ಇಲ್ಲದೆ ಇರುವುದರಿಂದ ರೋಗ ತಡೆಗೆ ಹೆಚ್ಚಿನ ಗಮನ ನೀಡಬೇಕು. ಈ ರೋಗದ ಲಕ್ಷಣಗಳು ಇದ್ದಕ್ಕಿದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು. ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವದು ಹಾಗೂ ರಕ್ತ ಮಿಶ್ರಿತ ಗಂಧೆಗಳು ಕಾಣಿಸಿಕೊಳ್ಳುತ್ತವೆ ಎಂದು ಹೇಳಿದರು.
ಚಿಕ್ಕಂಗುನ್ಯಾ ಇದೊಂದು ಸಾಂಕ್ರಾಮಿಕ ರೋಗವಾಗಿದ್ದು ಇದು ಚಿಕ್ಕಂಗುನ್ಯಾ ಎಂಬ ವೈರಸನಿಂದ ಬರುತ್ತದೆ. ಈಡಿಸ್ ಇಜಿಪ್ರೈ ಸೊಳ್ಳೆ ಕಡಿತದಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಚವಾದ ನೀರು ಶೇಖರಣೆ ತೊಟ್ಟಿಗಳು, ಬ್ಯಾರಲಗಳು, ಹೌಜಗಳಲ್ಲಿ ಉತ್ಪತ್ತಿಯಾಗುತ್ತವೆ. ಇದರ ಲಕ್ಷಣಗಳು ಜ್ವರ, ಚಳಿ, ಮೈ ಕೈ ನೋವು, ಕೀಲು ನೋವು, ತಲೆ ನೋವು ಮತ್ತು ಸಣ್ಣ ಮಕ್ಕಳಲ್ಲಿ ಜ್ವರದೊಂದಿಗೆ ಝಟಕಿ ಬರುವುದು ಆಗಿರುತ್ತದೆ ಎಂದರು.
ಮಲೇರಿಯಾ ರೋಗಾಣು ಬರಿ ಕಣ್ಣಿಗೆ ಕಾಣದ ಒಂದು ಸಣ್ಣ ಕ್ರಿಮಿ ಅನಾಫಿಲಸ್ ಜಾತಿಯ ಹೆಣ್ಣು ಸೊಳ್ಳೆಗಳು ಮಲೇರಿಯಾ ರೋಗವನ್ನು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತವೆ. ಮಲೇರಿಯಾ ರೋಗಾಣುಗಳನ್ನು ಹೊಂದಿರುವ ರೋಗಿಯನ್ನು ಕಚ್ಚಿದ ಅನಾಫಿಲಸ ಸೊಳ್ಳೆ 10 ರಿಂದ 14 ದಿನದೊಳಗೆ ರೋಗವನ್ನು ಹರಡುವ ಸ್ಥಿತಿಗೆ ಬರುತ್ತದೆ. ಆರೋಗ್ಯವಂತ ವ್ಯಕ್ತಿಯನ್ನು ಕಚ್ಚಿದಾಗ ಮಲೇರಿಯಾ ಪರೋಪ ಜೀವಿಗಳು ಮನುಷ್ಯನ ದೇಹದೊಳಕ್ಕೆ ಸೇರಿ 5 ರಿಂದ 15 ದಿನದೊಳಗೆ ಆ ವ್ಯಕ್ತಿಗೆ ಚಳಿ, ಜ್ವರ ಪ್ರಾರಂಭವಾಗುತ್ತದೆ. ಹೀಗೆ ಮಲೇರಿಯಾ ರೋಗವು ಒಬ್ಬರಿಂದ ಇನ್ನೊಬ್ಬರಿಗೆ ಹರಡಲು ಕಾರಣವಾಗುತ್ತದೆ ಎಂದು ಹೇಳಿದರು.
ಈ ರೋಗಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಇಂದು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ತಾವು ಈ ಕುರಿತು ಹೆಚ್ಚಿನ ಪ್ರಚಾರ ನೀಡಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಈ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ತಮಗೆಲ್ಲರಿಗೂ ಧನ್ಯವಾಗಳು. ಬೀದರ ಜಿಲ್ಲೆಯಲ್ಲಿ ಜನೇವರಿಯಿಂದ ಇಲ್ಲಿಯವರೆಗೆ ಒಟ್ಟು 63 ಡೆಂಗ್ಯೂ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಮತ್ತು ಇತ್ತೀಚೆಗೆ ಜುಲೈ. 7 ಮತ್ತು 8 ರಂದು 6 ಸಕ್ರೀಯ ಪ್ರಕರಣಗಳು ಸಹ ಇವೆ ಎಂದು ಹೇಳಿದರು.
ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ರಾಜಶೇಖರ ಪಾಟೀಲ ಮಾತನಾಡಿ ಡೆಂಗ್ಯೂ ರೋಗದ ನಿಯಂತ್ರಣಕ್ಕೆ ವಿವಿಧ ಇಲಾಖೆಗಳ ಸಹಕಾರ ಅತ್ಯಗತ್ಯವಾಗಿದೆ. ಜಿಲ್ಲೆಯ ಬೀದರ ತಾಲ್ಲೂಕಿನಲ್ಲಿ 9, ಭಾಲ್ಕಿ ತಾಲ್ಲೂಕಿನಲ್ಲಿ 14, ಹುಮನಾಬಾದ ತಾಲ್ಲೂಕಿನಲ್ಲಿ 8, ಬಸವಕಲ್ಯಾಣ ತಾಲೂಕಿನಲ್ಲಿ 11 ಹಾಗೂ ಔರಾದ ತಾಲೂಕಿನಲ್ಲಿ 21 ಡೆಂಗ್ಯೂ ಪ್ರಕರಣಗಳು ಸೇರಿ ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ ಒಟ್ಟು 63 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ನಗರ ಪ್ರದೇಶಗಳಲ್ಲಿ 12 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 51 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ ಎಂದು ಹೇಳಿದರು.
ಈ ಕಾರ್ಯಾಗಾರದಲ್ಲಿ ಕುಟುಂಬ ಕಲ್ಯಾಣ ಅಧಿಕಾರಿ ಡಾ. ದಿಲೀಪ್ ಡೊಂಗ್ರೆ. ಆರ್.ಸಿ.ಎಚ್ ಅಧಿಕಾರಿ ಡಾ. ಶಿವಶಂಕರ. ಡಾ. ಕಿರಣ ಪಾಟೀಲ. ವಾರ್ತಾಧಿಕಾರಿ ಡಾ. ಸುರೇಶ ಜಿ. ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಸಂಗಪ್ಪ ಕಾಂಬಳೇ ಸೇರಿದಂತೆ ಜಿಲ್ಲೆಯ ವಿವಿಧ ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಿದ್ದರು.