ಮೈಸೂರಿನಿಂದ ಎಲ್ಲಾ ಪ್ರಮುಖ ನಗರಗಳಿಗೆ ಸಂಪರ್ಕ
ಸಂಜೆವಾಣಿ ನ್ಯೂಸ್
ಮೈಸೂರು: ಜು.09:- ಮೈಸೂರು ರೈಲು ನಿಲ್ದಾಣದಿಂದ ದೇಶದ ಎಲ್ಲ ಪ್ರಮುಖ ನಗರಗಳಿಗೆ ವೇಗವಾಗಿ ಸಂಪರ್ಕ ಕಲ್ಪಿಸುವ ಯೋಜನೆ ಕುರಿತು ಶೀಘ್ರದಲ್ಲೇ ರೈಲ್ವೆ ಸಚಿವರ ಜತೆ ವಿಷಯ ಪ್ರಸ್ತಾಪಿಸಲಾಗುತ್ತದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ನಗರದ ಮುಖ್ಯ ರೈಲು ನಿಲ್ದಾಣಕ್ಕೆ ಸೋಮವಾರ ಭೇಟಿ ನೀಡಿ, ಅಧಿಕಾರಿಗಳ ಸಭೆ ನಡೆಸಿದ ಅವರು, ಈ ವಿಷಯ ತಿಳಿಸಿದರು. ಸಾಂಸ್ಕೃತಿಕ ನಗರಿ ಮೈಸೂರು ಉದ್ಯಮ ಕ್ಷೇತ್ರದಲ್ಲೂ, ಪ್ರವಾಸೋದ್ಯಮ ಕ್ಷೇತ್ರದಲ್ಲೂ ತನ್ನದೆ ಆದ ಸ್ಥಾನ ಹೊಂದಿದೆ. ಈ ಹಿನ್ನೆಲೆಯಲ್ಲಿ ದೇಶದ ಮುಖ್ಯ ನಗರಗಳಿಗೆ ವೇಗವಾಗಿ ಸಂಪರ್ಕ ಸಾಧನೆ ಮಾಡಿದರೆ, ಈ ಕ್ಷೇತ್ರಗಳಿಗೆ ಇನ್ನೂ ಹೆಚ್ಚಿನ ಉತ್ತೇಜನ ದೊರೆಯುವುದಲ್ಲದೇ ಸ್ಥಳೀಯ ಆರ್ಥಿಕತೆಯೂ ಏರಿಕೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯದವರೇ ಆದ ವಿ.ಸೋಮಣ್ಣ ರೈಲು ಖಾತೆ ಹೊಂದಿದ್ದಾರೆ. ಅವರನ್ನು ಭೇಟಿಯಾಗಿ ಈ ವಿಷಯ ಪ್ರಸ್ತಾಪಿಸಿ ಮುಂದಿನ ಕ್ರಮಗಳನ್ನು ಬಹಳ ಬೇಗೆನೆ ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುತ್ತದೆ ಎಂದರು.
ಮೈಸೂರು ನಗರದ ಪಾರಂಪರಿಕ ಗುರುತನ್ನು ಉಳಿಸುವಲ್ಲಿ ನಮ್ಮ ಹಿಂದಿನ ರಾಜರು, ಪೂರ್ವಜರು ಬಿಟ್ಟು ಹೋಗಿರುವ ಹಾದಿ ನಮಗೆ ಸ್ಫೂರ್ತಿದಾಯಕವಾಗಿದೆ. ಅವರ ಮಾದರಿ ಅನುಸರಣೆ ಮಾಡಿ, ಕ್ಷೇತ್ರವನ್ನು ಅಭಿವೃದ್ಧಿ ಮಾಡಲಾಗುತ್ತದೆ. ಸದ್ಯದಲ್ಲೇ ಕೊಡಗು, ಮೈಸೂರು ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ದಿಶಾ ಸಭೆ ನಡೆಸಲಾಗುತ್ತದೆ. ಅಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗುತ್ತದೆ. ಅಲ್ಲದೇ ಮೈಸೂರು ರೈಲು ನಿಲ್ದಾಣವನ್ನು ಮಾದರಿ ನಿಲ್ದಾಣವಾಗಿ ಅಭಿವೃದ್ಧಿಪಡಿಸಲು ಎಲ್ಲ ನೆರವು ನೀಡುವುದಾಗಿ ಅವರು ತಿಳಿಸಿದರು.
ನಿಲ್ದಾಣ ಪರಿಶೀಲನೆ: ಸಭೆಯ ಬಳಿಕ ಸಂಸದರು ರೈಲು ನಿಲ್ದಾಣವನ್ನು ಪೂರ್ತಾ ಪರಿಶೀಲಿಸಿದರು. ಪ್ಲಾಟ್‍ಫಾರ್ಮ್‍ಗಳು, ಶೌಚಾಲಯಗಳು, ಪ್ರಯಾಣಿಕರು ಕಾಯುವ ಪ್ರದೇಶ, ಟಿಕೆಟ್ ಮುಂಗಡ ಕಾಯ್ದಿರಿಸುವಿಕೆ ಕಚೇರಿ, ಎಸ್ಕಲೇಟರ್‍ಗಳನ್ನು ಖುದ್ದಾಗಿ ನೋಡಿದರು. ರೈಲಿಗಾಗಿ ಕಾಯುತ್ತ ನಿಂತಿದ್ದ ಪ್ರಯಾಣಿಕರ ಜತೆ ಮಾತನಾಡಿದರು. ಅವರು ಹೇಳಿದ ಸಮಸ್ಯೆಗಳು, ಸಲಹೆಗಳನ್ನು ಟಿಪ್ಪಣಿ ಮಾಡಿಕೊಂಡರು. ಬಳಿಕ ಕೂಲಿ ಕಾರ್ಮಿಕರು, ಸಿಬ್ಬಂದಿ ಜತೆ ಕೆಲ ಹೊತ್ತು ಮಾತನಾಡಿದರು. ದೇಶ-ವಿದೇಶಕ್ಕೆ ಹೋಗುವ ಸಾವಿರಾರು ಜನರು ರೈಲ್ವೆ ನಿಲ್ದಾಣದಿಂದ ಪ್ರಯಾಣಿಸುತ್ತಾರೆ. ಅವರಿಗೆ ಯಾವುದೇ ತೊಂದರೆಯಾಗದಂತೆ ಮೂಲ ಸೌಕರ್ಯಗಳು ಯಾವಾಗಲು ಕಾರ್ಯನಿರ್ವಹಿಸುವಂತೆ ಇರಬೇಕು ಎಂದು ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.
ಸಭೆಯಲ್ಲಿ ಇಲಾಖೆಯ ಅಧಿಕಾರಿಗಳು ಇದ್ದರು.