ಶಿವಮೊಗ್ಗ : ಮಳೆಯಲ್ಲಿಯೇ ಸ್ವಚ್ಚತಾ ವಾಹಿನಿ ಮಹಿಳಾ ಸಿಬ್ಬಂದಿಗಳಿಂದ ಬೃಹತ್ ಪ್ರತಿಭಟನೆ!
ಸಂಜೆವಾಣಿ ವಾರ್ತೆ
ಶಿವಮೊಗ್ಗ, ಜು. ೯: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ರಾಜ್ಯ ಗ್ರಾಮ ಪಂಚಾಯ್ತಿ ಸ್ವಚ್ಚ ವಾಹಿನಿ ಆಟೋ ಡ್ರೈವರ್ಸ್ ಮತ್ತು ಸಹಾಯಕಿಯರ ಸಂಘವು ಸೋಮವಾರ ಶಿವಮೊಗ್ಗ ನಗರದಲ್ಲಿ ಸುರಿಯುತ್ತಿದ್ದ ಮಳೆಯ ನಡುವೆಯೇ ಪ್ರತಿಭಟನಾ ಮೆರವಣಿಗೆ ನಡೆಸಿತು.ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ಮಹಿಳಾ ಸಿಬ್ಬಂದಿಗಳು, ಜಿಲ್ಲಾ ಪಂಚಾಯ್ತಿ ಕಚೇರಿ ಎದುರು ಧರಣಿ ನಡೆಸಿದರು. ಜಿಪಂ ಆಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿದರು.ಸ್ವಚ್ಚ ವಾಹಿನಿ ಸಿಬ್ಬಂದಿಗಳು ಗ್ರಾಮೀಣ ಭಾಗದ ಸ್ವಚ್ಚತಾ ಕಾರ್ಯದಲ್ಲಿ ಮಹತ್ತರ ಪಾತ್ರವಹಿಸಿಕೊಂಡು ಬರುತ್ತಿದ್ದಾರೆ. ಆದರೆ ಗ್ರಾಮ ಪಂಚಾಯ್ತಿ ಆಡಳಿತಗಳಿಂದ ಸೂಕ್ತ ಸೌಲಭ್ಯಗಳು ದೊರಕುತ್ತಿಲ್ಲ. ಸಿಬ್ಬಂದಿಗಳ ಕಡೆಗಣನೆ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.ಈಗಾಗಲೇ ಹಲವು ಬಾರಿ ನ್ಯಾಯಬದ್ದ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿಕೊಂಡು ಬರಲಾಗುತ್ತಿದೆ. ಆದರೆ ಇಲ್ಲಿಯವರೆಗೂ ಸಮಸ್ಯೆ ಪರಿಹಾರಕ್ಕೆ ಆಡಳಿತಗಳು ಕ್ರಮಕೈಗೊಂಡಿಲ್ಲ. ಸಂಪೂರ್ಣ ನಿರ್ಲಕ್ಷ್ಯ ಧೋರಣೆ ಅನುಸರಿಸಿಕೊಂಡು ಬರುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.ಬೇಡಿಕೆಗಳೇನು? :ತರಬೇತಿ ಪಡೆದ ಸ್ವಚ್ಚತಾ ವಾಹಿನಿ ನೌಕರರಿಗೆ ಗ್ರಾಪಂಗಳಲ್ಲಿ ಕೆಲಸ ಕೊಡಲು ಕ್ರಮಕೈಗೊಳ್ಳಬೇಕು. ಸ್ವಚ್ಚತಾ ವಾಹಿನಿ ವಾಹನಗಳಿಗೆ ವಿಮೆ ನವೀಕರಣ ಮಾಡಿಕೊಡಬೇಕು. ಹಾಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಬಾಕಿ ವೇತನ ಬಿಡುಗಡೆ ಮಾಡಬೇಕು. 15 ನೇ ಹಣಕಾಸಿನಲ್ಲಿ 6 ತಿಂಗಳ ವೇತನ ಕಡ್ಡಾಯವಾಗಿ ನೀಡಬೇಕು. ಹಾಗೆಯೇ ಉಳಿದ 6 ತಿಂಗಳ ವೇತನಕ್ಕೆ ಶಾಸನಬದ್ದ ಅನುದಾನದಿಂದ ವಿತರಿಸುವ ಆದೇಶ ಜಾರಿಗೊಳಿಸಬೇಕು.ನೌಕರರನ್ನು ಗ್ರಾಮ ಪಂಚಾಯ್ತಿ ಸಿಬ್ಬಂದಿಗಳೆಂದು ಪರಿಗಣಿಸಿ, ನಿಯಮಾನುಸಾರ ಸೌಲಭ್ಯ ವಿತರಿಸಬೇಕು. ಆರೋಗ್ಯ ವಿಮೆ ಜಾರಿಗೊಳಿಸಬೇಕು. ಕನಿಷ್ಠ ವೇತನವನ್ನು 26 ಸಾವಿರ ರೂ. ನಿಗದಿಗೊಳಿಸಬೇಕು. ಚಾಲನೆ ತರಬೇತಿ ಪಡೆದ ಸಿಬ್ಬಂದಿಗಳಿಗೆ ಆಟೋ ವಿತರಿಸಬೇಕು. ದುರಸ್ತಿಗೀಡಾದ ವಾಹನಗಳ ದುರಸ್ತಿಗೆ ಕ್ರಮಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಂಘಟನೆ ಆಗ್ರಹಿಸಿದೆ.ಸಿಐಟಿಯು ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ಮುಖಂಡರಾದ ಡಿ.ಎಂ.ಮಲಿಯಪ್ಪ, ಹನುಮಮ್ಮ, ಕುಸುಮಬಾಯಿ, ಮಹಾಲಕ್ಷ್ಮೀ ಸೇರಿದಂತೆ ಮೊದಲಾದವರಿದ್ದರು.