ಜು. 20ರಂದು ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳ ದೀಕ್ಷಾ ರಜತ ಮಹೋತ್ಸವ
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೭; ಜಗದ್ಗುರು ಶ್ರೀ ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ಜನ್ಮದಿನವನ್ನು ರಾಷ್ಟ್ರೀಯ ಭೋವಿ ಜನೋತ್ಸವವನ್ನಾಗಿ ಆಚರಿಸುವ ಪ್ರತೀತಿ ದಶಕದಿಂದ ಬೆಳೆದು ಬಂದಿದೆ. ಸಮಾಜ ಸೇವಾ ದೀಕ್ಷೆ ನೆನಪು ಹಾಗೂ ಪಟ್ಟಾಭಿಷೇಕದ ಸಂಭ್ರಮದ ನಿಮಿತ್ತ ಸಂಸದರಾಗಿ, ಶಾಸಕರಾಗಿ, ವಿವಿಧ ಹಂತದ ಜನಪ್ರತಿನಿಧಿಗಳಿಗೆ ಅಭಿನಂದಿಸುವುದು, ಪ್ರತಿಭಾ ಪುರಸ್ಕಾರ, ವಧು-ವರರ ಸಮಾವೇಶ, ಸಮಾಜದ ಬೆಳವಣಿಗೆ ಕುರಿತು ಸಂವಾದ, ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಪಿ.ಹೆಚ್.ಡಿ ಪದವೀಧರರು ಮತ್ತು ಐ.ಎ.ಎಸ್, ಕೆ.ಎ.ಎಸ್ ಸಾಧಕರಿಗೆ ಸನ್ಮಾನ, ವೈದ್ಯಕೀಯ ಪದವಿಯನ್ನ ಪೂರೈಸಿದವರಿಗೆ ಅಭಿನಂದನೆಗಳು ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಉತ್ಸವವೇ ರಾಷ್ಟ್ರೀಯ ಭೋವಿ ಜನೋತ್ಸವ.ಈ ಉತ್ಸವ ಜು.೨೦ ರಂದು ನಡೆಯಲಿದೆ ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ರವಿಕುಮಾರ್ ಎಸ್. ಮಾಹಿತಿ ನೀಡಿದ್ದಾರೆ.ಈ ಕುರಿತು ಸಭೆಯಲ್ಲಿ ಮಾತನಾಡಿದ ಅವರು ದೀಕ್ಷಾ ರಜತ ಮಹೋತ್ಸವವನ್ನು ಜುಲೈ, 20 ರಂದು ಚಿತ್ರದುರ್ಗದ ಭೋವಿ ಗುರುಪೀಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಮುದಾಯದ ಜನರು ಮತ್ತು ದೇಶದ ಬೇರೆ ಬೇರೆ ರಾಜ್ಯಗಳಿಂದ ಸಮುದಾಯದ ಮುಖಂಡರು ಭಾಗವಹಿಸಿರುತ್ತಾರೆ. ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯನವರು ಕಾರ್ಯಕ್ರಮವನ್ನು ಉದ್ಘಾಟಿಸುವರು, ಉಪ ಮುಖ್ಯಮಂತ್ರಿಗಳಾದ  ಡಿ.ಕೆ.ಶಿವಕುಮಾರ್ ಕೃತಿ ಬಿಡುಗಡೆ ಮಾಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜತಂಗಡಿ ಅಧ್ಯಕ್ಷತೆ, ಮಾಜಿ ಸಚಿವ ಅರವಿಂದ ಲಿಂಬಾವಳಿ ನೇತೃತ್ವ, ಸಮುದಾಯದ ಹಾಲಿ ಮಾಜಿ ಶಾಸಕರು, ಸಂಸದರು ಸಾರಥ್ಯದಲ್ಲಿ, ಮಂತ್ರಾಲಯದ ಸುಭುದೇಂದ್ರ ತೀರ್ಥರು ಕನಕ ಗುರುಪೀಠದ ಜಗದ್ಗುರಗಳು ಹಿಂದುಳಿದ ದಲಿತ ಮಠಾದೀಶರು ಸೇರಿದಂತೆ ರಾಜ್ಯದ ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಅದೇ ದಿನದಂದು ಬೆಳಿಗ್ಗೆ ಧರ್ಮ ಸಂಸತ್ ಕಾರ್ಯಕ್ರಮ ಜರುಗುವುದು. ಹಾಗಾಗಿ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಕ್ಕೆ ಭಾಗವಹಿಸಲು ಕೋರಿದರು ಈ ವೇಳೆ  ಜಿಲ್ಲಾಧ್ಯಕ್ಷರಾದ ಶ್ರೀನಿವಾಸ್, ಬೋವಿ ವಿದ್ಯಾರ್ಥಿ ನಿಲಯ ಅಧ್ಯಕ್ಷರಾದ ಮಂಜುನಾಥ್, ಡಿ ಬಸಣ್ಣ ಮುಖಂಡರಾದ ಬಿಟಿ ಸಿದ್ದಪ್ಪ ಶ್ಯಾಮ್, ಜಯಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.