ಆಟೋ ರಿಕ್ಷಾ ಕನಿಷ್ಠ ಪ್ರಯಾಣದರ 30 ರೂ ನಿಗದಿಗೆ ಆಗ್ರಹ
ಕೋಲಾರ,ಜು.೬-ರಾಜ್ಯದಲ್ಲಿ ಪೆಟ್ರೋಲಿಯಂ ಉತ್ಫನ್ನಗಳಾದ ಪೆಟ್ರೋಲ್-ಡೀಸೆಲ್, ಎಲ್.ಪಿ.ಜಿ ಉತ್ಫನ್ನಗಳ ಬೆಲೆ ಏರಿಕೆ ವಿರುದ್ಧ ಹಾಗೂ ಅಗತ್ಯ ವಸ್ತುಗಲ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಹಾಗೂ ಆಟೋ ರಿಕ್ಷಾ ಕನಿಷ್ಟ ಪ್ರಯಾಣದರ ೩೦ ರೂಗೆ ನಿಗಧಿಡಿಸಲು ಒತ್ತಾಯಿಸಿ ಹಾಗೂ ಕೋಲಾರ ನಗರ ವ್ಯಾಪ್ತಿಯಂತೆ ೧೫ ಕಿ.ಮೀ ನಿಗಧಿಯನ್ನು ಕೆ.ಜಿ.ಎಫ್, ಮಾಲೂರು, ಮುಳಬಾಗಿಲುಗಳಿಗೆ ವಿಸ್ತರಿಸುವಂತೆ ಆಗ್ರಹಿಸಿ ಕೋಲಾರ ಜಿಲ್ಲೆ ತ್ರಿಚಕ್ರ ವಾಹನ ಚಾಲಕರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಅಕ್ರಂಪಾಷರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯಾಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್ ಮಾತನಾಡಿ, ಹಿಂದಿನ ಸರ್ಕಾರದಲ್ಲಿ ಚಾಲನೆಯಲ್ಲಿರುವ ಕಾರ್ಮಿಕರ ಕಲ್ಯಾಣ ಯೋಜನೆಯಡಿ ಆಟೋ-ಟ್ಯಾಕ್ಸಿ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಧನ ವಿದ್ಯಾಸಿರಿ ಯೋಜನೆ ಮತ್ತು ವಾಣಿಜ್ಯ ವಾಹನ ಚಾಲಕರು ಅಪಘಾತಕ್ಕೆ ಒಳಪಟ್ಟಲ್ಲಿ ಆಸ್ಪತ್ರೆ ಚಿಕಿತ್ಸೆ ವೆಚ್ಚ ೩ ಲಕ್ಷ ಹಾಗೂ ಮೃತಪಟ್ಟಲ್ಲಿ ಅವಲಂಭಿತರಿಗೆ ಪರಿಹಾರದನ ೫ ಲಕ್ಷ ರೂಗಳ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ನಿಧಿ ಯೋಜನೆಯೊಂದಿಗೆ ೬೦ ವರ್ಷದ ನಂತರ ಪಿಂಚಣಿ ಯೋಜನೆಯನ್ನು ಪುನ: ಪ್ರಾರಂಭಿಸಬೇಕು. ಕನಿಷ್ಟ ಆಟೋ ಪ್ರಯಾಣದರ ೩೦ ರೂ ನಿಗದಿಪಡಿಸಿ ಆರ್.ಟಿ.ಎ ಸಭೆ ಕರೆಯಬೇಕೆಂದು ಒತ್ತಾಯಿಸಿದರು.
ನಿಯೋಗದಲ್ಲಿ ಜಿಲ್ಲಾ ಉಪಾಧ್ಯಕ್ಷ ಎನ್.ಅಮ್ಜದ್ ಪಾಷ, ಕಾರ್ಯದರ್ಶಿ ಎನ್. ನಾರಾಯಣಸ್ವಾಮಿ, ಶ್ರೀನಿವಾಸಪುರ ತಾಲೂಕು ಅಧ್ಯಕ್ಷ ಜಗದೀಶ್ ಯಾದವ್, ಕೆ.ಜಿ.ಎಫ್ ತಾಲೂಕು ಅಧ್ಯಕ್ಷ ಏಕಾಂಬರಂ, ಮುಳಬಾಗಿಲು ತಾಲೂಕು ಅಧ್ಯಕ್ಷ ಮಂಜುನಾಥ, ಮಾಲೂರು ತಾಲೂಕು ಅಧ್ಯಕ್ಷ ಬಡಗಿ ಶ್ರೀನಿವಾಸ್, ಖಜಾಂಚಿ ವೇಣುಗೋಪಾಲ್ ಉಪಸ್ಥಿತರಿದ್ದರು.