ಭದ್ರಾ ಜಲಾಶಯ ಒಳಹರಿವಿನಲ್ಲಿ ಏರಿಕೆ!
ಸಂಜೆವಾಣಿ ವಾರ್ತೆ
ಶಿವಮೊಗ್ಗ, ಜು. ೬; ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಮುಂದುವರಿದಿದೆ. ಗುರುವಾರ ಇಳಿಕೆಯಾಗಿದ್ದ ಮಳೆ ಅಬ್ಬರ ಶುಕ್ರವಾರ ಮತ್ತೆ ಚುರುಕುಗೊಂಡಿದೆ. ಈ ನಡುವೆ ಮಧ್ಯ ಕರ್ನಾಟಕ ಭಾಗದ ರೈತರ ಜೀವನಾಡಿ ಎಂದೇ ಕರೆಯಲಾಗುವ, ಭದ್ರಾ ಜಲಾಶಯದ ಒಳಹರಿವಿನಲ್ಲಿ ಏರಿಕೆ ಕಂಡುಬಂದಿದೆ. ಮತ್ತೊಂದೆಡೆ, ಲಿಂಗನಮಕ್ಕಿ ಹಾಗೂ ತುಂಗಾ ಡ್ಯಾಂ ಒಳಹರಿವಿನಲ್ಲಿ ಇಳಿಕೆ ಕಂಡುಬಂದಿದೆ.ಜು. 5 ರ ಬೆಳಿಗ್ಗೆಯ ಮಾಹಿತಿಯಂತೆ ಭದ್ರಾ ಜಲಾಶಯಕ್ಕೆ 16,171 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 350 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಪ್ರಸ್ತುತ ಡ್ಯಾಂ ನೀರಿನ ಮಟ್ಟ 129 ಅಡಿ 6 ಇಂಚು (ಗರಿಷ್ಠ ಮಟ್ಟ : 186) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂ ನೀರಿನ ಮಟ್ಟ 132 ಅಡಿಯಿತ್ತು.ತುಂಗಾ ಡ್ಯಾಂ ಈಗಾಗಲೇ ಗರಿಷ್ಠ ಮಟ್ಟವಾದ 588.24 ಮೀಟರ್ ತಲುಪಿದೆ. ಡ್ಯಾಂಗೆ 34,477 ಕ್ಯೂಸೆಕ್ ಒಳಹರಿವಿದೆ. ಆದರೆ ಒಳಹರಿವಿನಲ್ಲಿ ನಿರಂತರ ಏರಿಕೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ, 37,104 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಒಟ್ಟಾರೆ ಡ್ಯಾಂನ ನೀರಿನ ಸಂಗ್ರಹಣೆ ಸಾಮರ್ಥ್ಯವು 3.24 ಟಿಎಂಸಿ ಆಗಿದೆ.ಲಿಂಗನಮಕ್ಕಿ ಡ್ಯಾಂಗೆ 44,024 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 1340 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಡ್ಯಾಂ ನೀರಿನ ಮಟ್ಟ 1763 (ಗರಿಷ್ಠ ಮಟ್ಟ : 1819) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನಲ್ಲಿ 1742. 65 ಅಡಿ ನೀರು ಸಂಗ್ರಹವಾಗಿತ್ತು.ಮಳೆ ವಿವರ: ಜು. 5 ರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದ ಮಳೆಯ ವಿವರ ಈ ಮುಂದಿನಂತಿದೆ. ಶಿವಮೊಗ್ಗ 4. 80 ಮಿಲಿ ಮೀಟರ್ (ಮಿ.ಮೀ.), ಭದರಾವತಿ 4. 60 ಮಿ.ಮೀ., ತೀರ್ಥಹಳ್ಳಿ 10. 10 ಮಿ.ಮೀ., ಸಾಗರ 20. 60 ಮಿ.ಮೀ., ಶಿಕಾರಿಪುರ 1. 20 ಮಿ.ಮೀ., ಸೊರಬ 4. 30 ಮಿ.ಮೀ. ಹಾಗೂ ಹೊಸನಗರದಲ್ಲಿ 12. 60 ಮಿ.ಮೀ. ವರ್ಷಧಾರೆಯಾಗಿದೆ.