ಮಣ್ಣು, ಎತ್ತುಗಳನ್ನು ಗೌರವಿಸುವ ಸಂಕೇತದ ಮಣ್ಣೆತ್ತಿನ ಹಬ್ಬ
ಕಲಬುರಗಿ:ಜು.5: ಮಾನವ-ಮಣ್ಣಿಗೆ ಅವಿನಾಭಾವ ಸಂಬಂಧವಿದೆ. ರೈತರು ಕೃಷಿ ಕಾಯಕವನ್ನು ಮಾಡಿ ಆಹಾರವನ್ನು ಬೆಳೆಯಲು ಮಣ್ಣು ಮತ್ತು ಆತನ ಎರಡು ಕಣ್ಣುಗಳಂತಿರುವ ಎತ್ತುಗಳು ಅವಶ್ಯಕವಾಗಿವೆ. ಇವುಗಳಿಗೆ ಗೌರವ ಸಲ್ಲಿಸುವ ಮುಂಗಾರಿನ ಹಬ್ಬ ಮಣ್ಣೆತ್ತಿನ ಅಮವಾಸ್ಯೆಯಾಗಿದೆ ಎಂದು ಕಜಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಸಮಾಜ ಸೇವಕ ಎಚ್.ಬಿ.ಪಾಟೀಲ ಹೇಳಿದರು.
ಮಣ್ಣೆತ್ತಿನ ಅಮವಾಸ್ಯೆ ಪ್ರಯುಕ್ತ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಅಫಜಲಪುರ ತಾಲೂಕಿನ ಅವರಳ್ಳಿ ಗ್ರಾಮದ ಮೂಲದವರಾದ ವೃತ್ತಿ ಕುಂಬಾರರಾದ ಶಿವಶರಣಪ್ಪ ಕುಂಬಾರ ಅವರಿಗೆ ಗೌರವ ಸತ್ಕಾರ, ಮಣ್ಣೆತ್ತುಗಳಿಗೆ ವಿಶೇಷ ಪೂಜೆಯ ಮೂಲಕ ಮಣ್ಣೆತ್ತಿನ ಹಬ್ಬದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ರೈತ ದೇಶದ ಆಧಾರ ಸ್ಥಂಭ. ಕೃಷಿ ಕಾರ್ಯದ ಪ್ರಮುಖವಾದ, ಆತ ಬೆಳೆಯುವ ಪ್ರತಿ ಕಾಳಿನಲ್ಲಿ ತನ್ನದೆ ಆದ ಅದ್ವೀತಿಯ ಶ್ರಮವನ್ನು ಹೊಂದಿರುವ ಎತ್ತುಗಳನ್ನು ಪೂಜಿಸಲಾಗುತ್ತದೆ. ಕಾರ ಹುಣ್ಣಿಮೆಯ ನಂತರ ಬರುವ ಜಾನಪದ ಹಬ್ಬ ಇದಾಗಿದ್ದು, ರೈತರು ಸಂಭ್ರಮ ಪಡುತ್ತಾರೆ. ವರ್ಷದಲ್ಲಿ ಐದು ಬಾರಿ ಮಣ್ಣಿಗೆ ಪೂಜಿಸಲಾಗುತ್ತದೆ. ಆಷಾಢ, ಶ್ರಾವಣ ಮತ್ತು ಭಾದ್ರಪದ ಮಾಸಗಳಲ್ಲಿ ಬರುವ ಮಣ್ಣೆತ್ತು, ಗುಳ್ಳವ್ವ, ಹುತ್ತಪ್ಪ, ಗಣಪ್ಪ, ಜೋಕುಮಾರ ಹಬ್ಬಗಳ ಸಂದರ್ಭದಲ್ಲಿ ಇವುಗಳನ್ನು ಮಣ್ಣಿನ ಮೂರ್ತಿಗಳಲ್ಲಿ ತಯಾರಿಸಿ, ಪೂಜಿಸಲಾಗುತ್ತದೆ. ಇದು ಉತ್ತರ ಕರ್ನಾಟಕ ಭಾಗದಲ್ಲಿ ವ್ಯಾಪಕವಾಗಿ ಆಚರಿಸಲಾಗುತ್ತದೆ ಎಂದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ವೃತ್ತಿ ಕುಂಬಾರ ಶಿವಶರಣಪ್ಪ ಕುಂಬಾರ, ನಮ್ಮ ವೃತ್ತಿಗೆ ಮಣ್ಣೆ ಆಧಾರ. ಮಣ್ಣಿನೊಂದಿಗೆ ಬೆರೆತು ಮಾಡುವ ಪವಿತ್ರ ಕಾಯಕ ಕುಂಬಾರಿಯಾಗಿದೆ. ಆಧುನಿಕತೆಯಿಂದಾಗಿ ನಮ್ಮ ವೃತ್ತಿಗೆ ತೊಂದರೆಯಾಗುತ್ತಿದೆ. ಇಂದಿಗೂ ಕೂಡಾ ಕುಂಬಾರಿಕೆ ವೃತ್ತಿಯನ್ನು ಮುಂದುವರೆಸಿರುವವರಿಗೆ ಆರ್ಥಿಕ ಭದ್ರತೆಯ ಯೋಜನೆಗಳನ್ನು ಸಮರ್ಪಕವಾಗಿ ದೊರೆಯಬೇಕಾಗಿದೆ ಎಂದು ಒತ್ತಾಸೆ ಮಾಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ಝಾಪುರ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ದೇವೇಂದ್ರಪ್ಪ ಗಣಮುಖಿ, ಪ್ರಮುಖರಾದ ಶರಣಯ್ಯ ಹಿರೇಮಠ, ಅರ್ಜುನ ನಾಟಿಕಾರ್, ಕುಂಬಾರ ಕುಟುಂಬಸ್ಥರಾದ ಶಿವಮ್ಮ, ಭಾಗ್ಯಶ್ರೀ, ಈರಣ್ಣ, ಭಾರತಿ, ಪ್ರಭುಲಿಂಗ, ಬಸವರಾಜ, ರಾಕೇಶ್, ಮಣಿಕಂಠ, ಸವಿತಾ ಸೇರಿದಂತೆ ಇನ್ನಿತರರಿದ್ದರು.