ಜು.13 ರಂದು ಬೃಹತ್ ಲೋಕ ಆದಾಲತ್:ನ್ಯಾ.ಪ್ರಕಾಶ ಅರ್ಜುನ್ ಬನಸೊಡೆ
ಬೀದರ, ಜು.5: ಗೌರವಾನ್ವಿತ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜುಲೈ.13 ರಂದು ಬೀದರ ಜಿಲ್ಲೆಯಲ್ಲಿ ಬೃಹತ್ ಲೋಕ ಅದಾಲತನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಗೌರವಾನ್ವಿತ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿ.ಜೆ.ಎಂ. ಮತ್ತು ಸದಸ್ಯ ಕಾರ್ಯದರ್ಶಿಗಳು ಡಿ.ಎಲ್.ಎಸ್.ಎ. ಬೀದರನ ಪ್ರಕಾಶ ಅರ್ಜುನ್ ಬನಸೊಡೆ ಹೇಳಿದರು.
ಅವರು ಮಂಗಳವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಆಸ್ತಿಪಾಲು ವಿಭಾಗ ಜೀವನಾಂಶ, ಚೆಕ್ ಬೌನ್ಸ, ವಿದ್ಯುತ್ ಪ್ರಕರಣಗಳು ಕಂದಾಯ ಅಪರಾಧಿಕ ಪ್ರಕರಣಗಳಲ್ಲಿ ರಾಜಿ ಮಾಡಿಕೊಳ್ಳುವಂತಹ ಪ್ರಕರಣಗಳು, ಕಾರ್ಮಿಕರ ಪ್ರಕರಣಗಳು, ಬ್ಯಾಂಕ್ ಪ್ರಕರಣಗಳು, ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಮಾಡಲು ಅವಕಾಶ ಇರುತ್ತದೆ. ಇದರ ಸದುಪಯೋಗವನ್ನು ಬೀದರ ಜಿಲ್ಲೆಯ ಎಲ್ಲಾ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಹಿಂದೆ ಮಾರ್ಚ 16, 2024 ರಂದು ರಾಷ್ಟ್ರೀಯ ಲೋಕ ಅದಾಲತಗಳನ್ನು ಹಮ್ಮಿಕೊಳ್ಳಲಾಗಿದ್ದು ಜಿಲ್ಲೆಯಾದ್ಯಾಂತ ಒಟ್ಟು 37679 ಪ್ರಕರಣಗಳನ್ನು ಈ ಲೋಕ ಆದಲಾತ್‍ನಲ್ಲಿ ಇತ್ಯರ್ಥಗೊಳಿಸಲಾಗಿದೆ. ಒಟ್ಟು ಮೊತ್ತ 15,32,91,627 ರೂ. ಇತ್ಯರ್ಥಗೊಳಿಸಲಾಗಿದೆ. ಇದರಲ್ಲಿ 16,638 (ಪೆಂಡಿಂಗನಲ್ಲಿನ) ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. 10,74,68,58 ರೂ.ಗಳನ್ನು ವಸೂಲಾತಿ ಮಾಡಿ ಪರಿಹಾರ ಒದಗಿಸಲಾಗಿದೆಂದರು.
ಜಿಲ್ಲೆಯಾದ್ಯಾಂತ ಒಟ್ಟು 30077 ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ 21041 ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಒಟ್ಟು 4,58,23,046 ರೂ.ಗಳನ್ನು ವಸೂಲಾತಿ ಮತ್ತು ಪರಿಹಾರ ಒದಗಿಸಲಾಗಿದೆ. ಜಿಲ್ಲೆಯ ಎಲ್ಲಾ ಬ್ಯಾಂಕಗಳಿಂದ 7997 ಪ್ರಕರಣಗಳಲ್ಲಿ 136 ಪ್ರಕರಣಗಳನ್ನು ಇತ್ಯರ್ಥಗೊಳಿಸಿ 1,33,47,150 ರೂ.ಬಾಕಿ ವಸೂಲಿ ಮಾಡಿಸಲಾಗಿದೆ. ನಗರಸಭೆ, ಪುರಸಭೆ, ಗ್ರಾಮ ಪಂಚಾಯತಗಳ ನೀರಿನ ತೆರಿಗೆ ಮತ್ತು ಬಿ.ಎಸ್.ಎನ್.ಎಲ್., ಜೆಸ್ಕಾಂ ಬಾಕಿ ಬಿಲ್ಲು ವಸೂಲಾತಿಯಲ್ಲಿ 20,905 ಪ್ರಕರಣಗಳನ್ನು ಇತ್ಯರ್ಥಗೊಳಿಸಿ 3,24,75,896 ರೂ.ಗಳನ್ನು ವಸೂಲಿ ಮಾಡಲಾಗಿದೆ. ಒಟ್ಟಾರೆ ಜಿಲ್ಲೆಯಾದ್ಯಾಂತ ಲೋಕ ಆದಲಾತನಲ್ಲಿ 37,679 ಪ್ರಕರಣಗಳನ್ನು ಇತ್ಯರ್ಥಗೊಳಿಸಿ 15,32,91,627 ರೂ.ಗಳನ್ನು ಪರಿಹಾರ, ವಸೂಲಾತಿ ಮೂಲಕ ಇತ್ಯರ್ಥ ಮಾಡಲಾಗಿದೆ ಎಂದು ಹೇಳಿದರು.
ಜುಲೈ.13 ರಂದು ನಡೆಯಲಿರುವ ಈ ಬಾರಿಯ ಲೋಕ ಅದಾಲತನಲ್ಲಿ ನ್ಯಾಯಾಲಯದಲ್ಲಿ ಬಾಕಿ(ಪೇಂಡಿಂಗ) ಇರುವ ಪ್ರಕರಣಗಳನ್ನು ಹೆಚ್ಚು ಹೆಚ್ಚು ಇತ್ಯಾರ್ಥಗೊಳಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕೆಲ್ಲ ಮಾಧ್ಯಮಗಳು ಹೆಚ್ಚು ಹೆಚ್ಚು ಪ್ರಚಾರವನ್ನು ಸಾರ್ವಜನಿಕರಿಗೆ ನೀಡಬೇಕು. ಕಳೆದ ಲೋಕ ಅದಾಲತಗಿಂತ ಈ ಬಾರಿಯ ಲೋಕ ಅದಾಲತನಲ್ಲಿ ಹೆಚ್ಚು ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸುವ ಗುರಿ ಹೊಂದಲಾಗಿದೆ. ದಿನಾಂಕ 01-06-2024 ರ ಪ್ರಕಾರ ನಮ್ಮ ಜಿಲ್ಲೆಯಲ್ಲಿ ಒಟ್ಟು 27,703 ಪ್ರಕರಣಗಳು ಪೆಂಡಿಂಗ ಇದ್ದು. ಹೆಚ್ಚು ಪ್ರಕರಣಗಳನ್ನು ರಾಜಿ ಸಂದಾನ ಮಾಡುವ ಗುರಿ ಹೊಂದಿದ್ದೇವೆ. ಪ್ರಕರಣ ರಾಜಿ ಮಾಡಿಕೊಳ್ಳುವುದರಿಂದ ಕಕ್ಷಿದಾರನಿಗೆ ನ್ಯಾಯಾಲಯ ಖರ್ಚು ವೆಚ್ಚದ ಉಳಿತಾಯವಾಗಲಿದೆ ಮತ್ತು ಮೇಲ್ಮನವಿ ಮಾಡಲು ಅವಕಾಶ ಇರುವುದಿಲ್ಲ ಇಬ್ಬರೂ ಪಕ್ಷಗಾರರು ತಮ್ಮ ದ್ವೇಷ ಮರೆತು ಸುಮಧುರ ಬಾಂಧವ್ಯ ಹೊಂದಲು ಈ ಲೋಕ ಆದಾಲತನಲ್ಲಿ ಅವಕಾಶ ಇರುತ್ತದೆ ಎಂದು ಹೇಳಿದರು.
ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಪ್ರಕರಣ ವಿಲೆವಾರಿಗೊಳಿಸುವ ಗುರಿ ಇದ್ದು, ಜುಲೈ.13 ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ರಾಷ್ಟ್ರೀಯ ಲೋಕ ಆದಾಲತ್ ನಡೆಯಲಿದ್ದು ಜಿಲ್ಲೆಯ ಹೆಚ್ಚಿನ ಜನರು ಈ ಲೋಕ ಆದಾಲತನಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ನ್ಯಾ. ಪ್ರಕಾಶ ಅರ್ಜುನ್ ಬನಸೊಡೆ ಹೇಳಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಿಬ್ಬಂದಿಗಳಾದ ಜಗದಿಶ್ವರ ದೊರೆ, ಆಕಾಶ ಸಜ್ಜನ, ಜೀವನ, ನಾಗರಾಜ, ಪ್ರೀತಿ, ಈರಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.