ಅನಧಿಕೃತ ಶೆಡ್ ತೆರವುಗೊಳಿಸಲು ಮನವಿ
ಸಂಜೆವಾಣಿ ವಾರ್ತೆ
ಹನೂರು ಜು 4 :- ಕೌದಳ್ಳಿ-ಲಕ್ಷ್ಮಯ್ಯನದೊಡ್ಡಿ ಸಮೀಪ ಸರ್ವೇ ನಂಬರ್ 937ರಲ್ಲಿ ಶೆಡ್ ನಿರ್ಮಾಣ ಮಾಡಿಕೊಂಡಿದ್ದಾರೆ. ಹೀಗಾಗಿ ಅನಧಿಕೃತವಾಗಿ ಶೆಡ್ ಅನ್ನು ತೆರವುಗೊಳಿಸಬೇಕು ಎಂದು ಚಾಮರಾಜನಗರ ಅಖಿಲ ಕರ್ನಾಟಕ ಕುಳುವ ಮಹಾ ಸಂಘದ ಮುಖಂಡರು ಮನವಿ ಮಾಡಿದರು.
ಹನೂರು ತಾಲೂಕಿನ ಲೋಕೋಪಯೋಗಿ ಇಲಾಖೆ ವಸತಿ ಗೃಹ ಮುಂಭಾಗ ಸೇರಿದ ಚಿಕ್ಕಲತ್ತೂರು ಗ್ರಾಮದ ಜನರು ಮಾತನಾಡಿ, ಲಕ್ಷ್ಮಯ್ಯನದೊಡ್ಡಿಯ ಜನರು ಜಮೀನಿನಲ್ಲಿ 50ಕ್ಕೂ ಹೆಚ್ಚು ಶೆಡ್ ನಿರ್ಮಾಣ ಮಾಡಿಕೊಂಡಿದ್ದಾರೆ ಇದರಿಂದ ಜಮೀನು ಮಾಲೀಕರಿಗೆ ಅನ್ಯಾಯವಾಗುತ್ತಿದೆ.
ಈ ಬಗ್ಗೆ ಅಧಿಕಾರಿಗಳು ಭೇಟಿ ನೀಡಿ ನ್ಯಾಯ ಒದಗಿಸಬೇಕು ಎಂದು ತಹಶೀಲ್ಧಾರ್ ಗುರುಪ್ರಸಾದ್ ಅವರಿಗೆ ಮೌಖಿಕ ಮನವಿ ಮಾಡಿದರು.
ಬಳಿಕ ತಹಶೀಲ್ಧಾರ್ ವೈ.ಕೆ.ಗುರುಪ್ರಸಾದ್ ಮಾತನಾಡಿ, ಕೌದಳ್ಳಿಯ-ಲಕ್ಷ್ಮಯ್ಯದೊಡ್ಡಿ ಜಮೀನಿನಲ್ಲಿ ಶೆಡ್ ನಿರ್ಮಾಣ ಮಾಡಿಕೊಂಡಿರುವ ಬಗ್ಗೆ ಗಮನಕ್ಕೆ ಬಂದಿದೆ. ನಿಮ್ಮಗಳ ಮನವಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೂ ತರಲಾಗಿದ್ದು ಉಪವಿಭಾಗಾಧಿಕಾರಿ ಜೊತೆ ಚರ್ಚೆ ಮಾಡಲಾಗಿದೆ ನಾಳೆ ಸರ್ವೇ ಕಾರ್ಯವಾಗಲಿದೆ. ಬಳಿಕ ಮುಂದಿನ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಕುಳುವ ಮಹಾ ಸಂಘ ಚಾಮರಾಜನಗರ ಜಿಲ್ಲಾ ಘಟಕ ಜಿಲ್ಲಾಧ್ಯಕ್ಷ ಮಾದೇಶ್, ಕಾರ್ಯಧ್ಯಕ್ಷ ಶ್ರೀನಿವಾಸ್, ಕೌದಳ್ಳಿ ಗ್ರಾಮಪಂ ಸದಸ್ಯ ಚಿಕ್ಕಲತ್ತೂರು ಶಿವಕುಮಾರ್, ಮುಖಂಡರಾದ ಆರ್.ಮುನಿಯಪ್ಪ, ನೀಲಪ್ಪ, ಗೋವಿಂದ, ಯಜಮಾನ್ ಸಿದ್ದ ಮತ್ತಿತರರು ಇದ್ದರು.