ಹಳಕಟ್ಟಿಯವರ ಜೀವನ ಇಂದಿನ ಯುವಕರಿಗೆ ಮತ್ತು ಸಂಶೋಧಕರಿಗೆ ಮಾದರಿ: ಡಾ. ದೀಪಮಾಲಾ ಪಾಟೀಲ
ವಿಜಯಪುರ,ಜು.3:12ನೇ ಶತಮಾನದ ನಂತರ ವಚನ ಸಾಹಿತ್ಯಕ್ಕೆ ಪುನರ್ ಚೈತನ್ಯವನ್ನು ತಂದು ಕೊಟ್ಟ ಕೀತಿ9 ಹಳಕಟ್ಟಿ ಅವರಿಗೆ ಸುಲ್ಲುತ್ತದೆ. ಬಸವಾದಿ ಶರಣರು ವಚನ ಸಾಹಿತ್ಯವನ್ನು ರಚಿಸಿದರು. ಅದನ್ನು ಬೆಳೆಕಿಗೆ ತರುವ ಕೆಲಸವನ್ನು ಹಳಕಟ್ಟಿಯವರು ಮಾಡಿದ್ದಾರೆ ಎಂದು ವೈದ್ಯಾಧಿಕಾರಿ ಡಾ. ದೀಪಮಾಲಾ ಪಾಟೀಲ ಹೇಳಿದರು.
ನಗರದ ಬಿ.ಎಲ್.ಡಿ.ಈ ಸಂಸ್ಥೆಯ ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ ಕನ್ನಡ ವಿಭಾಗ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆ ಸಂಯುಕ್ತಾಶ್ರಯದಲ್ಲಿ ಡಾ. ಫ.ಗು.ಹಳಕಟ್ಟಿ ಅವರ 144ನೇ ಜನ್ಮದಿನದ ಅಂಗವಾಗಿ “ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ”ಯ ಮುಖ್ಯಅತಿಥಿಯಾಗಿ ಮಾತನಾಡಿದರು.
ಒಂದು ವಿಶ್ವವಿದ್ಯಾಲಯ ಸಾಧಿಸಿದಷ್ಟು ಕೆಲಸವನ್ನು ಏಕಾಂಗಿ ವೀರರಾಗಿ ಅವರು ಸಾಧಿಸಿದವರು, ಅವರು ಒಂದು ವ್ಯಕ್ತಿಯಾಗಿರದೆ ಒಂದು ಶಕ್ತಿಯಾಗಿ ಬದುಕಿದರು. ಹಳಕಟ್ಟಿಯವರ ಜೀವನ ಇಂದಿನ ಯುವಕರಿಗೆ ಮತ್ತು ಸಂಶೋಧಕರಿಗೆ ಮಾದರಿಯಾಗಿದೆ. ಹೀಗೆ ಅವರು ಸಾಹಿತ್ಯಕ್ಕಾಗಿ ತಮ್ಮ ಜೀವಮಾನವನ್ನೆ ತೇಯ್ದವರು. ಹಾಗಾಗಿಯೇ ಆವರು ವಚನ ಪಿತಾಮಹ, ವಚನಗುಮ್ಮಟ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಅವರ ಜೀವವೇ ಕನ್ನಡ ವಚನ ಸಾಹಿತ್ಯ ಪ್ರಕಟಣೆ, ಪ್ರಸಾರಕ್ಕೆ ಮೀಸಲಿಡುವ ಮೂಲಕ 250ಕ್ಕೂ ಹೆಚ್ಚು ಶಿವಶರಣರನ್ನು ಮತ್ತು ಅವರ ಸಾಹಿತ್ಯವನ್ನು ಶಿವಾನುಭವ, ನವಕರ್ನಾಟಕ ಪತ್ರಿಕೆಗಳ ಮೂಲಕ ನಾಡಿಗೆ ಪರಿಚಯಿಸಿದವರು. ಇಂದಿಗೂ ಕನ್ನಡಿಗರ ಮನದಲ್ಲಿ ಅಮರರಾಗಿದ್ದಾರೆ. ಅವರ ಬದುಕೇ ನಮಗೆ ದಾರಿದೀಪವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಐಕ್ಯೂಎಸಿ ನಿರ್ದೇಶಕ ಡಾ. ಪಿ.ಎಸ್. ಪಾಟೀಲ ಅವರು ಮಾತನಾಡಿ, ಹಳಕಟ್ಟಿಯವರು ಸಾಹಿತ್ಯಕ್ಕೆ ನೀಡಿದಷ್ಟೇ ಕೊಡುಗೆಯನ್ನು ಸಾಮಾಜಿಕ ಕಾರ್ಯಗಳಿಗೂ ಕೊಟ್ಟಿದ್ದಾರೆ. ಅವರ ಶ್ರಮದಿಂದಲೇ ನಮ್ಮ ಬಿ.ಎಲ್.ಡಿ.ಇ. ಸಂಸ್ಥೆಯ ಸ್ಥಾಪನೆಗೆ ಮತ್ತು ಅದರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅಂದಿನ ಲಿಂಗಾಯತ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಶ್ರಮಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮ.ಗು. ಯಾದವಾಡ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀನಿವಾಸ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಎಸ್.ವಾಯ್. ಅಂಗಡಿ, ಡಾ. ಮಹೇಶಕುಮಾರ ಕೆ.ಡಾ. ಮಾಲತಿ ಪಟ್ಟಣಶೆಟ್ಟಿ, ಮಲಿಕಸಾಬ ಜಮಾದಾರ, ಅಕ್ಷಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.