ಟ್ಯಾರಿಯಿಂದ ಧರ ಹೆಚ್ಚಳ ಖಂಡನೆ
ಸಂಜೆವಾಣಿ ವಾರ್ತೆ
ಬಳ್ಳಾರಿ, ಜು.02: ಕೇಂದ್ರ ಸರ್ಕಾರದ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಸಂಸ್ಥೆಯು ಖಾಸಗಿ ಮೊಬೈಲ್ ನೆಟ್ವರ್ಕ್ ಕಂಪನಿಗಳಿಗೆ ಮಣೆ ಹಾಕಿ, ಧರ ಹೆಚ್ಚಳ ಮಾಡಿದ್ದು ಎಐಡಿವೈಓ ಯುವಜನ ಸಂಘಟನೆ ವತಿಯಿಂದ ಬಳ್ಳಾರಿ ಜಿಲ್ಲೆಯ ಕೋಳೂರು ಗ್ರಾಮದಲ್ಲಿ, ಧರ ಹೆಚ್ಚಳದ ಪ್ರತಿಯನ್ನು ಸುಡುವ ಮೂಲಕ ಪ್ರತಿಭಟಿಸಲಾಯಿತು.
ಜಿಲ್ಲಾ ಅಧ್ಯಕ್ಷರಾದ ಎ.ಪಂಪಾಪತಿ ಕೋಳೂರು ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ ‘ ಕೇಂದ್ರ ಸರ್ಕಾರದ ಈ ನಡೆ ಸಾರ್ವಜನಿಕರ ಮೇಲೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಚುನಾವಣೆ ಸಂದರ್ಭದಲ್ಲಿ ದೊಡ್ಡ ಬಂಡವಾಳಿಗರು ಗಳಿಂದ ಹಣ ಪಡೆದ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದಮೇಲೆ ಅವರ ಪರವಾದ ನೀತಿಗಳನ್ನೇ ತರುತ್ತವೆ ಎಂಬುದು ಕಟು ವಾಸ್ತವ. ಇಂದು ದೇಶದಲ್ಲಿ ಬಡತನ, ನಿರುದ್ಯೋಗ, ಭ್ರಷ್ಟಾಚಾರ, ಅಗತ್ಯ ವಸ್ತುಗಳ ಬೆಲೆಏರಿಕೆ ಯಂತಹ ಸಮಸ್ಯೆಗಳು ಭೀಕರವಾಗಿ ಇರುವಾಗ ಇನ್ನೊಂದು ಕಡೆ ಜನರಿಗೆ ಅವಶ್ಯಕ ವಾಗಿರುವ ಮೊಬೈಲ್ ರೀಚಾರ್ಜ್ ಧರವನ್ನೂ ಸಹ ಹೆಚ್ಚಿಸಿ ಹಾಡು ಹಗಲೇ ಜನರ ಜೇಬಿಗೆ ಕತ್ತರಿ ಹಾಕುವ ನೀತಿಗಳು ಇವಾಗಿವೆ’ ಎಂದರು.
ಜಿಲ್ಲಾ ಕಾರ್ಯದರ್ಶಿ ಜಗದೀಶ್ ನೇಮಕಲ್ ಮಾತನಾಡಿ – ‘ಕೂಡಲೇ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ, ರೀಚಾರ್ಜ್ ಧರಗಳನ್ನು ಕಡಿಮೆ ಮಾಡಿ ಸಾರ್ವಜನಿಕರಿಗೆ ಕೈಗೆಟಕುವ ಧರ ನಿಗದಿಪಡಿಸಬೇಕು. ಸಾರ್ವಜನಿಕ ಸಂಸ್ಥೆಗಳಾದ ಬಿ.ಎಸ್.ಎನ್.ಎಲ್. ಮತ್ತು ಎಂ.ಟಿ.ಎನ್.ಎಲ್ ಗಳನ್ನು ಪುನರುಜ್ಜೀವನಗೊಳಿಸಬೇಕು’ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಸವನಗೌಡ, ಪಂಪನಗೌಡ, ವಿರೂಪಾಕ್ಷ, ಕೊಟ್ರೇಶ್ ಸ್ವಾಮಿ, ಬಸವರಾಜ ಸ್ವಾಮಿ, ಮಹೇಶ, ಶಿವಯ್ಯ, ಅನಿಲ್ ಗೌಡ, ಶ್ರೀನಿವಾಸ್ ಹಾಗೂ ಊರಿನ ಸಾರ್ವಜನಿಕರು ಉಪಸ್ಥಿತರಿದ್ದರು.