ಕೆಂಪೇಗೌಡ ಜಯಂತಿ ಆಚರಣೆ
ಕೆ.ಆರ್.ಪುರ,ಜು.೨- ಬೆಂಗಳೂರು ನಗರ ಪ್ರದೇಶದಂತೆ ನಗರ ಹೊರವಲಯದ ಗ್ರಾಮಾಂತರ ಪ್ರದೇಶಗಳು ಕೂಡ ಅಭಿವೃದ್ಧಿ ಹೊಂದಬೇಕು,ಅಲ್ಲಿ ಸಿಗುವ ಮೂಲ ಸೌಕರ್ಯಗಳು ಗ್ರಾಮಾಂತರ ಭಾಗದಲ್ಲಿ ಸಿಗಬೇಕು ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಹೇಳಿದರು.
ಮಹದೇವಪುರ ಕ್ಷೇತ್ರದ ನಿಂಬೆಕಾಯಿಪುರದ ಜನಪದರು ರಂಗಮಂದಿರದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಅವರ ೫೧೫ನೇ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.
ಬೆಂಗಳೂರು ನಾಡಪ್ರಭು ಕೆಂಪೇಗೌಡರು ಕಟ್ಟಿದ ಗೋಪುರದಿಂದ ಹೊರಗಿನವರೆಗೆ ವಿಸ್ತಾರವಾಗಿ ಬೆಳೆಯುತ್ತಿದೆ,ನಗರದ ಹೊರವಲಯದ ಹೊಸ ಬೆಂಗಳೂರು ಅನ್ನು ನಗರದ ಮಾದರಿಯಲ್ಲೇ ಕಟ್ಟಬೇಕು,ನಗರದಲ್ಲಿ ಸಿಗುವ ಪ್ರತಿಯೊಂದು ಸವಲತ್ತುಗಳು ಗ್ರಾಮಾಂತರ ಪ್ರದೇಶಗಳಲ್ಲಿ ದೊರೆಯಬೇಕು, ಈ ನಿಟ್ಟಿನಲ್ಲಿ ನಾವು ಕೆಂಪೇಗೌಡರ ಆದರ್ಶದಲ್ಲಿಯೇ,ಅವರ ಮಾದರಿಯಲ್ಲಿಯೇ ಮಹದೇವಪುರವನ್ನು ಕಟ್ಟುತ್ತಿದ್ದೇವೆ ಎಂದು ತಿಳಿಸಿದರು.
ನಾಡಪ್ರಭು ಕೆಂಪೇಗೌಡರು ಒಂದು ಜಾತಿಗೆ ಸೀಮಿತರಲ್ಲ,ಎಲ್ಲ ಸಮುದಾಯದ ಜನರಿಗೆ ಸರಿಸಮನಾಗಿ ನ್ಯಾಯ ಒದಗಿಸಿದ್ದಾರೆ, ತಮ್ಮ ದೂರದೃಷ್ಟಿಯಿಂದ ನಗರವನ್ನು ಕಟ್ಟಿದ್ದಾರೆ, ಜನಪ್ರತಿನಿಧಿಗಳು,ಅಧಿಕಾರಿಗಳು ಜನರಿಗೆ ಮೂಲ ಸೌಕರ್ಯಗಳ ಕಲ್ಪಿಸುವ ಕೆಲಸ ಮಾಡಿದಾಗ ಮಾತ್ರ ಕೆಂಪೇಗೌಡರ ಜಯಂತಿ ಆಚರಣೆಗೆ ನಿಜವಾದ ಅರ್ಥ ಬರುತ್ತದೆ, ಮಹಾಪುರುಷರ ಸಾರಿದ ವಿಚಾರ, ತತ್ವ ಸಿದ್ದಾಂತಗಳನ್ನು ನಾವು ಅರ್ಥ ಮಾಡಿಕೊಂಡು,ಅವರ ತೋರಿದ ಮಾರ್ಗದಲ್ಲಿ ನಡೆಯಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಎಸ್‌ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣರಾದ ಮಹದೇವಪುರ ವಿಧಾನಸಭಾ ಕ್ಷೇತ್ರದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ, ವಾಸ್ತು ತಜ್ಞ ಗಜೇಂದ್ರ ಬಾಬು ಹಾಗೂ ವಿಶೇಷಾಧಿಕಾರಿ ಬಿ.ವಿ.ಪ್ರಸಾದ್ ಅವರನ್ನು ಸನ್ಮಾನಿಲಾಯಿತು.
ನಗರ ಮಂಡಲ ಅಧ್ಯಕ್ಷ ಮನೋಹರ ರೆಡ್ಡಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಬಿ.ಎನ್.ನಟರಾಜ್, ಮುಖಂಡರಾದ ವೆಂಕಟಸ್ವಾಮಿ ರೆಡ್ಡಿ, ಹೂಡಿ ಪಿಳ್ಳಪ್ಪ, ಬಿದರಹಳ್ಳಿ ರಾಜೇಶ್ ,ಎಲ್.ರಾಜೇಶ್, ಕಣ್ಣೂರು ಅಶೋಕ್ ಕಣ್ಣೂರು, ಕೆಂಪೇಗೌಡ,ಜ್ಯೋತಿಪುರ ವೇಣು,ಕೆ.ವಿ.ನಾಗರಾಜ್ ಮತ್ತಿತರರಿದ್ದರು.