ಸರಕಾರಿ ಪದವಿಪೂರ್ವ ಕಾಲೇಜಿಗೆ ಖಾಯಂ ಉಪನ್ಯಾಸಕರನ್ನು ನೇಮಿಸಿ ಹಾಗೂ ಮೂಲಭೂತಸೌಕರ್ಯಗಳನ್ನು ಒದಗಿಸಲು ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಶಹಾಬಾದ:ಜು.1: ನಗರದ ನೆಹರು ಚೌಕ್ ನಲ್ಲಿ ಸರಕಾರಿ ಪದವಿಪೂರ್ವ ಕಾಲೇಜಿಗೆ ಖಾಯಂ ಉಪನ್ಯಾಸಕರನ್ನು ನೇಮಿಸಿ ಹಾಗೂ ಮೂಲಭೂತ
ಸೌಕರ್ಯಗಳನ್ನು ಒದಗಿಸಲು ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ ಮಾಡಲಾಯಿತು.
ಈ ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ತುಳಜರಾಮ ಎನ್ ಕೆ ರವರು ಮಾತನಾಡುತ್ತ ಶಹಾಬಾದ ನಗರದ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಸುತ್ತಮುತ್ತಲಿನ ಹಳ್ಳಿಗಳಿಂದ ಬಡ ರೈತ-ಕಾರ್ಮಿಕರ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಇಲ್ಲಿ ಪಡೆಯುತ್ತಿರುವುದು ತಮಗೆ ತಿಳಿದಿರುವ ವಿಷಯ. ಈ ವರ್ಷ ಪಿಯು ಫಲಿತಾಂಶದಲ್ಲಿ ತಾಲೂಕಿನಲ್ಲೇ ಪ್ರಥಮ ಸ್ಥಾನ ಹಾಗೂ 08 ಜನ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆ. ಈ ಕಾಲೇಜಿನಲ್ಲಿ 205ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಆದರೆ ಈ ಕಾಲೇಜಿನಲ್ಲಿ ವಿಜ್ಞಾನ ವಿಭಾಗಕ್ಕೆ ಒಬ್ಬರೆ ಒಬ್ಬರು ಖಾಯಂ ಉಪನ್ಯಾಸಕರೇ ಇಲ್ಲ. ದೂರದ ತೆಂಗಳ್ಳಿ, ಹೆಬ್ಬಾಳ, ರೇವಗಿ ಮತ್ತು ನರೂಣಿ ಸರಕಾರಿ ಪಿಯು ಕಾಲೇಜುಗಳ ನಿಯೋಜಿತ ಉಪನ್ಯಾಸಕರೇ ಇವರಿಗೆ ಪಾಠ ಹೇಳುವಂತಾಗಿದೆ. ಕಲಾ ವಾಣಿಜ್ಯ ವಿಭಾಗದ ಅರ್ಥಶಾಸ್ತ್ರ ಮತ್ತು ಸಮಾಜಶಾಸ್ತ್ರ ವಿಷಯಕ್ಕೆ ಖಾಯಂ ಉಪನ್ಯಾಸಕರೇ ಇ¯್ಲ. ಕನಿಷ್ಠ ಶುದ್ಧ ಕುಡಿಯುವ ನೀರು, ವಿಜ್ಞಾನದ ವಿಭಾಗಕ್ಕೆ ಪ್ರಯೋಗಾಲಯ ಮತ್ತು ಗ್ರಂಥಾಲಯದಲ್ಲಿ ಅವಶ್ಯಕತೆಗೆ ತಕ್ಕಷ್ಟು ಪುಸ್ತಕಗಳಿಲ್ಲದೆ ಇರುವುದು ವಿದ್ಯಾರ್ಥಿಗಳ ಸಮಗ್ರ ಜ್ಞಾನಕ್ಕೆ ಅಡ್ಡಿ ಉಂಟು ಮಾಡುತ್ತಿವೆ. ಕಾಲೇಜು ಮುಗಿದ ಬಳಿಕ ಸ್ಥಳೀಯ ಕಿಡಿಗೇಡಿಗಳು, ಕುಡುಕರು ಬಂದು ಮದ್ಯಪಾನ ಮಾಡುವುದು, ಬಾಟಲಿಗಳನ್ನು ಹೊಡೆಯುವುದು ಮಾಡುತ್ತಿದ್ದಾರೆ. ಆದರೂ ಇಲ್ಲಿಯವರೆಗೂ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹಾಕದೆ ಇರುವುದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ. ಆದ್ದರಿಂದ ಈ ಕೂಡಲೇ ವಿದ್ಯಾರ್ಥಿಗಳ ಶಿಕ್ಷಣದ ಹಿತದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಬಗೆಹರಿಸಬೇಕಾಗಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ (ಎಐಡಿಎಸ್ಓ) ವಿದ್ಯಾರ್ಥಿ ಸಂಘಟನೆಯು ಆಗ್ರಹಿಸುತ್ತಿದೆ. ಕೂಡಲೇ ಸಮಸ್ಯೆಗಳು ಬಗೆಹರಿಸದಿದ್ದಲ್ಲಿ ಉನ್ನತ ಹಂತದ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.
ಈ ಪ್ರತಿಭಟನೆಯಲ್ಲಿ ಶಹಾಬಾದ ಉಪಾಧ್ಯಕ್ಷರಾದ ದೇವರಾಜ ಹೊನಗುಂಟ, ಕಾರ್ಯದರ್ಶಿ ಅಜಯ್ ಗುರಜಲ್ಕರ್, ಜಿಲ್ಲಾ ಸಮಿತಿ ಸದಸ್ಯರಾದ ಸ್ಪೂರ್ತಿ ಗುರಜಲ್ಕರ್, ಬಾಬೂ ಪವರ್, ರಂಗನಾಥ ಮಾನೆ, ಸೃಷ್ಠಿ ಗುರಜಲ್ಕರ್ ಸೇರಿ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.