ಸ್ಮಾರ್ಟ್ ಸಿಟಿ ಯೋಜನೆ  ಗಡುವು ಅಂತ್ಯ!
ಸಂಜೆವಾಣಿ ವಾರ್ತೆ
ಶಿವಮೊಗ್ಗ, ಜೂ. 30: ಭಾರೀ ನಿರೀಕ್ಷೆ ಹಾಗೂ ಪ್ರಚಾರದೊಂದಿಗೆ ಅನುಷ್ಠಾನಗೊಂಡಿದ್ದ ‘ಸ್ಮಾರ್ಟ್ ಸಿಟಿ’ ಯೋಜನೆಯ ಗಡುವು ಜೂನ್ ತಿಂಗಳಿಗೆ ಪೂರ್ಣಗೊಳ್ಳಲಿದೆ. ಸ್ಮಾರ್ಟ್ ಸಿಟಿ ಕಚೇರಿಗಳು ಬಾಗಿಲು ಮುಚ್ಚಲಿವೆಯೇ? ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ – ಸಿಬ್ಬಂದಿಗಳ ಸ್ಥಿತಿಯೇನು? ಎಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.2015 ರಂದು ಕೇಂದ್ರ ಸರ್ಕಾರವು ಸ್ಮಾರ್ಟ್ ಸಿಟಿ ಯೋಜನೆ ಜಾರಿಗೊಳಿಸಿತ್ತು. ಕೇಂದ್ರ – ರಾಜ್ಯ ಸರ್ಕಾರಗಳ ಸಹಭಾಗಿತ್ವದ್ದಾಗಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆ ಯೋಜನೆ ಇದಾಗಿತ್ತು. ಕರ್ನಾಟಕ ರಾಜ್ಯದಲ್ಲಿ ಶಿವಮೊಗ್ಗ ನಗರ ಸೇರಿದಂತೆ 7 ನಗರಗಳು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿದ್ದವು.ಭ್ರಮನಿರಸನ : ಸ್ಮಾರ್ಟ್ ಸಿಟಿ ಯೋಜನೆಯಡಿ ಶಿವಮೊಗ್ಗ ನಗರದ ಚಿತ್ರಣವೇ ಬದಲಾಗಲಿದೆ. ಮೂಲಸೌಕರ್ಯ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆಯಾಗಲಿದೆ. ನೂರಾರು ಕೋಟಿ ರೂ. ಅನುದಾನ ಬರಲಿದೆ. ನಗರವು ಸ್ಮಾರ್ಟ್, ಹೈಟೆಕ್ ಆಗಲಿದೆ ಎಂದೆಲ್ಲ ಯೋಜನೆಯ ಪ್ರಾರಂಭದಲ್ಲಿ ಹೇಳಲಾಗಿತ್ತು. ಯಾವ ರೀತಿಯಲ್ಲಿ ನಗರ ಅಭಿವೃದ್ದಿಗೊಳಿಸಬೇಕು ಎಂಬ ಕುರಿತಂತೆ ಜನಾಭಿಪ್ರಾಯ ಕೂಡ ಸಂಗ್ರಹಿಸಲಾಗಿತ್ತು.ಆದರೆ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನಗೊಂಡ ನಂತರ, ನಾಗರೀಕರಲ್ಲಿದ್ದ ನಿರೀಕ್ಷೆಗಳೆಲ್ಲ ಹುಸಿಯಾಗುತ್ತಾ ಬರಲಾರಂಭಿಸಿದವು. ಸ್ಮಾರ್ಟ್ ಸಿಟಿ ಯೋಜನೆಯಡಿ ಇಡೀ ನಗರಕ್ಕೆ ಬದಲಾಗಿ, ಸೀಮಿತ ವ್ಯಾಪ್ತಿಯ ಪ್ರದೇಶಗಳನ್ನಷ್ಟೆ ಆಯ್ಕೆ ಮಾಡಿಕೊಂಡು ವಿವಿಧ ಅಭಿವೃದ್ದಿ ಕಾಮಗಾರಿ ಅನುಷ್ಠಾನಗೊಳಿ ಸಲಾಯಿತು.ಸರಿಸುಮಾರು 930 ಕೋಟಿ ರೂ. ವೆಚ್ಚದಲ್ಲಿ ನಾನಾ ಯೋಜನೆಗಳನ್ನು ಜಾರಿಗೊಳಿಸಲಾಯಿತು. ಆದರೆ ಕಾರ್ಯಗತಗೊಳಿಸಿದ ಹಲವು ಕಾಮಗಾರಿಗಳ ಬಗ್ಗೆನಾಗರೀಕ ವಲಯದಿಂದ ಭಾರೀ ಟೀಕೆಗಳು ವ್ಯಕ್ತವಾದವು. ಅವೈಜ್ಞಾನಿಕವಾಗಿ ಕಾಮಗಾರಿಗಳ ಅನುಷ್ಠಾನ, ವಿಳಂಬ, ಕಳಪೆ ಗುಣಮಟ್ಟದ ಹತ್ತು ಹಲವು ದೂರುಗಳು ಕೇಳಿಬಂದವು.ಮುಂದೇನು? : ಸ್ಮಾರ್ಟ್ ಸಿಟಿ ಯೋಜನೆಯ ಅವಧಿ ಜೂನ್ ಗೆ ಪೂರ್ಣಗೊಳ್ಳಲಿದೆ. ಇದನ್ನು ಮತ್ತೆ ವಿಸ್ತರಿಸುವ ಕುರಿತಂತೆ ಸರ್ಕಾರದಿಂದ ಯಾವುದೇ ಸೂಚನೆ, ನಿರ್ದೇಶನಗಳು ಲಭ್ಯವಾಗಿಲ್ಲ. ಸದ್ಯ ಸ್ಮಾರ್ಟ್ ಸಿಟಿಯಡಿ ಅನುಷ್ಠಾನ ಮಾಡಿದ ಯೋಜನೆಗಳನ್ನು ಮಹಾನಗರ ಪಾಲಿಕೆ ಆಡಳಿತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗಳು ನಡೆಯುತ್ತಿವೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ, ಪಾಲಿಕೆ ಆಡಳಿತವೇ ಸ್ಮಾರ್ಟ್ ಸಿಟಿಯಡಿ ಅನುಷ್ಠಾನಗೊಳಿಸಿದ ಕಾಮಗಾರಿಗಳ ಮೇಲುಸ್ತುವಾರಿ – ನಿರ್ವಹಣೆ ಮಾಡಲಿದೆ.